ಮನೋರಂಜನೆ

ಬೇರೆಯವರಿಗಾಗಿ ಬದುಕೋಲ್ಲ: ತ್ರಿಷಾ

Pinterest LinkedIn Tumblr

3aಮದುವೆ ಮುರಿದು ಬಿದ್ದ ನಂತರ ನಟಿ ತ್ರಿಷಾ ಕುಗ್ಗಿ ಹೋಗುತ್ತಾರೆ ಎಂದೇ ಸಿನಿಮೋದ್ಯಮದಲ್ಲಿ ಮಾತನಾಡಿಕೊಂಡಿದ್ದರು. ಆದರೆ ಗಟ್ಟಿಗಿತ್ತಿ ತ್ರಿಷಾ ಬಹುಬೇಗ ಕಹಿಯನ್ನು ಮರೆತು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ತಮ್ಮ ವೈಯಕ್ತಿಕ ಹಾಗೂ ಸಿನಿಮಾ ಬದುಕಿನ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.

* ಮದುವೆ ಮುರಿದು ಬಿದ್ದಾಗ ಬಹಳಷ್ಟು ಜನ ಎದೆಗುಂದುತ್ತಾರೆ. ನೀವು ಮತ್ತೆ ಶೂಟಿಂಗ್‌ನಲ್ಲಿ ಬಿಝಿಯಾಗಿಬಿಟ್ಟಿರಿ…

– ಅಂತಹ ಸಂದರ್ಭಗಳು ಸಹಜವಾಗಿಯೇ ಜನರನ್ನು ಕುಗ್ಗಿಸುತ್ತವೆ. ಆದರೆ ನಾನು ಇಂಥದ್ದಕ್ಕೆಲ್ಲಾ ಮನಸ್ಸು ಕೆಡಿಸಿಕೊಂಡು ಕುಳಿತುಕೊಳ್ಳುವುದಿಲ್ಲ. ನಾನು ಸದಾ ಸಕಾರಾತ್ಮಕವಾಗಿ ಯೋಚಿಸುವವಳು. ಈ ವಿಚಾರವಾಗಿ ಕುಟುಂಬದವರೂ ನನ್ನ ಬೆಂಬಲಕ್ಕೆ ನಿಂತರು.

* ಈ ಘಟನೆಯ ನಂತರ ಮದುವೆ ಕುರಿತಾದ ನಿಮ್ಮ ನಿಲುವು ಬದಲಾಗಿದೆಯೇ?

– ಅಫ್‌ಕೋರ್ಸ್, ಮದುವೆ ಬಗ್ಗೆ ನನಗೆ ಈ ಹೊತ್ತಿಗೂ ಒಳ್ಳೆಯ ಅಭಿಪ್ರಾಯವಿದೆ. ಆದರೆ ಸಮಾಜವನ್ನು ಮೆಚ್ಚಿಸಲು ಮದುವೆ ಆಗಬೇಕೆನ್ನುವುದನ್ನು ನಾನು ಒಪ್ಪುವುದಿಲ್ಲ. ಇದರಿಂದ ಸಂಕಷ್ಟಕ್ಕೀಡಾಗಿರುವ ಹಲವರನ್ನು ನಾನು ಕಣ್ಣಾರೆ ನೋಡಿದ್ದೇನೆ. ನಿಜವಾಗಿಯೂ ಪ್ರೀತಿಸುವ ಸಂಗಾತಿಯನ್ನು ನಾವು ವರಿಸಬೇಕು.

* ಇದೀಗ ಹಲವು ಸಿನಿಮಾ ಪ್ರಾಜೆಕ್ಟ್‌ಗಳಿಗೆ ನೀವು ಸಹಿ ಹಾಕಿದ್ದೀರಿ…

– ವೃತ್ತಿ ಬದುಕಿನ ಈ ಹಂತದಲ್ಲಿ ನನಗೆ ಸಾಕಷ್ಟು ಆಯ್ಕೆಗಳಿವೆ. ಉತ್ತಮ ಪ್ರಾಜೆಕ್ಟ್‌ಗಳು ಸಿಗಲಿಲ್ಲವೆಂದು ಒಂದಷ್ಟು ಸಮಯ ಬಿಡುವು ಪಡೆದಿದ್ದನಷ್ಟೆ. ಇದೀಗ ಕೆಲವು ನಿರ್ದೇಶಕರು ನಾಯಕಿ ಪ್ರಧಾನ ಕಥೆಗಳನ್ನು ನನ್ನಲ್ಲಿಗೆ ತರುತ್ತಿದ್ದಾರೆ. ಅಂತಹ ಚಿತ್ರಗಳಲ್ಲಿ ನಟಿಸುವುದು ಹೆಮ್ಮೆಯ ವಿಷಯ. ಕಮಲ ಹಾಸನ್‌ರ ‘ತೂಂಗಾವನಂ’ ಚಿತ್ರದಲ್ಲೂ ನನಗೆ ವಿಶೇಷ ಪಾತ್ರವಿದೆ.

* ‘ಮನ್ಮಥನ್ ಅನ್ಬು’ ನಂತರ ಮತ್ತೆ ಕಮಲ್ ಸರ್ ಜೊತೆ ಕೆಲಸ ಮಾಡುತ್ತಿದ್ದೀರಿ…

– ಸಿನಿಮಾ ಬಗ್ಗೆ ವಿಪರೀತ ಪ್ಯಾಷನ್ ಇರುವ ಕಮಲ್ ಸರ್ ಜೊತೆ ಕೆಲಸ ಮಾಡುವುದೆಂದರೆ, ಅದೊಂದು ಅದ್ಭುತ ಅನುಭವ. ಅವರಿಗೆ ಸಿನಿಮಾದ ವಿವಿಧ ವಿಭಾಗಗಳ ಬಗ್ಗೆ ಪರಿಚಯವಿದೆ. ಅವರ ಸೂಚನೆಯ ಮೇರೆಗೆ ಚಿತ್ರಕ್ಕೆ ಸ್ವತಃ ನಾನೇ ಡಬ್ ಮಾಡುತ್ತಿದ್ದೇನೆ. ಚೆನ್ನೈನಲ್ಲಿ ಇಂಡೋರ್ ಶೂಟಿಂಗ್ ನಡೆಯಲಿದ್ದು, ಹೈದರಾಬಾದ್‌ನಲ್ಲಿ ಔಟ್‌ಡೋರ್ ಚಿತ್ರೀಕರಣ ನಡೆಯಲಿದೆ.

* ನಿರ್ದೇಶಕ ಸೆಲ್ಪ ರಾಘವನ್‌ರ ಸಿನಿಮಾದಿಂದ ಹೊರಬಿದ್ದಿದ್ದೇಕೆ?

– ಈ ಚಿತ್ರದಲ್ಲಿ ನಟಿಸಲು ತುಂಬಾ ಉತ್ಸುಕಳಾಗಿದ್ದೆ. ಆದರೆ ಡೇಟ್ಸ್ ಸಮಸ್ಯೆಯಿಂದಾಗಿ ಅವಕಾಶ ಕೈಚೆಲ್ಲಬೇಕಾಯ್ತು. ಈ ಮಧ್ಯೆ ಸುಂದರ್ ಸಿ. ಅವರ ‘ಅರನ್‌ಮನೈ 2’ ಚಿತ್ರಕ್ಕೂ ನಾನು ಡೇಟ್ಸ್ ಹೊಂದಿಸಿಕೊಳ್ಳಬೇಕಾಗಿದೆ.

* ಮೊದಲ ಬಾರಿಗೆ ನೀವು ಹಾರರ್ ಚಿತ್ರವೊಂದರಲ್ಲಿ ನಟಿಸುತ್ತಿದ್ದೀರಿ…

ಹಾರರ್ ಚಿತ್ರವೊಂದರಲ್ಲಿ ನಟಿಸಬೇಕೆನ್ನುವುದು ನನ್ನ ಬಹುದಿನಗಳ ಆಸೆಯಾಗಿತ್ತು. ‘ಅರನ್‌ಮನೈ’ ಮೊದಲ ಸರಣಿಯನ್ನು ವೀಕ್ಷಿಸಿದಾಗ ತುಂಬಾ ಮೆಚ್ಚಿದ್ದೆ. ಈ ಚಿತ್ರದ ಭಾಗವಾಗುತ್ತಿರುವುದು ನನಗೆ ಹೆಮ್ಮೆ ತಂದಿದೆ. ಸದ್ಯದಲ್ಲೇ ಮತ್ತೊಂದು ದ್ವಿಭಾಷಾ ಹಾರರ್ ಚಿತ್ರಕ್ಕೆ ಸಹಿ ಹಾಕಲಿದ್ದಾನೆ.

* ಮತ್ತೆ ಹಿಂದಿ ಚಿತ್ರಗಳಲ್ಲಿ ನಟಿಸಲಿದ್ದೀರಾ?

– ಸದ್ಯಕ್ಕೆ ಅಂಥ ಯಾವ ಯೋಜನೆಗಳೂ ಇಲ್ಲ. ಕಾಲಿವುಡ್‌ನಲ್ಲಿರುವುದೇ ನನಗೆ ಖುಷಿ ಕೊಟ್ಟಿದೆ. ಹಿಂದಿ ಚಿತ್ರಗಳಲ್ಲಿ ಯಶಸ್ಸು ಕಾಣಬೇಕೆಂದರೆ ಮುಂಬಯಿಯಲ್ಲಿ ಠಿಕಾಣಿ ಹೂಡಬೇಕು. ನನಗೆ ಎರಡು ದೋಣಿ ಪಯಣ ಇಷ್ಟವಿಲ್ಲ. **

ಅದೃಷ್ಟ ಖುಲಾಯಿಸುವುದೇ?
ಬಾಲಿವುಡ್‌ನಲ್ಲಿ ಗುರುತಿಸಿಕೊಳ್ಳಲು ಹವಣಿಸುತ್ತಿರುವ ದಕ್ಷಿಣದ ನಟಿಯರ ಪೈಕಿ ಅದಿತಿ ರಾವ್ ಹೈದರಿ ಕೂಡ ಒಬ್ಬರು. ಶ್ರೀಮಂತ ಕುಟುಂಬದ ಈ ಹುಡುಗಿ ಹೈದರಾಬಾದ್ ಮೂಲದವರು. ಪ್ರತಿಭೆ, ಸೌಂದರ್ಯ, ಶಿಫಾರಸು ಎಲ್ಲಾ ಇದ್ದರೂ ಅವರಿಗೆ ದೊಡ್ಡ ಹಿಂದಿ ಚಿತ್ರಗಳಲ್ಲಿ ಅವಕಾಶ ಸಿಗಲೇ ಇಲ್ಲ. ಹೀರೋಗಳ ಚಿತ್ರಗಳಿಂದ ದೂರವೇ ಉಳಿದ ಆಕೆ ಸಿಕ್ಕ ಪಾತ್ರಗಳಲ್ಲೇ ತೃಪ್ತಿ ಪಟ್ಟುಕೊಳ್ಳುವಂತಾಯಿತು. ಭರತನಾಟ್ಯ ಪ್ರವೀಣೆಯಾದ ಅವರು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದು ‘ಪ್ರಜಾಪತಿ’ ಮಲಯಾಳಂ ಚಿತ್ರದ ಮೂಲಕ. ಸುಧೀರ್ ಮಿಶ್ರಾ ಅವರ ‘ಯೆಹ್ ಸಾಲಿ ಜಿಂದಗಿ’ ಹಿಂದಿ ಸಿನಿಮಾ ಅವರಿಗೆ ಒಳ್ಳೆಯ ಹೆಸರ ತಂದುಕೊಟ್ಟಿತು. ವಿಶೇಷ್ ಭಟ್ ನಿರ್ದೇಶನದ ‘ಮರ್ಡರ್ 3’ ಚಿತ್ರದಲ್ಲೂ ಮಿಂಚಿದರು. ಇದೀಗ ಅವರ ‘ಗುಡ್ಡು ರಂಗೀಲಾ’ ಚಿತ್ರ ತೆರೆಕಾಣುತ್ತಿದೆ.

‘ಚಿತ್ರದ ಕಥೆ ಬಗ್ಗೆ ಕೇಳಿದಾಗಲೇ ಇದೊಂದು ಹೀರೋಗಳ ಚಿತ್ರವೆಂದು ಗೊತ್ತಾಯಿತು. ನಾನು ಇವರಿಬ್ಬರ ಮಧ್ಯೆ ಕ್ರೇಜಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರವರು. ಅಂದಹಾಗೆ ಈ ಚಿತ್ರದ ವಸ್ತು ಮರ್ಯಾದಾ ಹತ್ಯೆ ಕುರಿತಾಗಿದೆ. ಚಿತ್ರದ ಇಬ್ಬರು ಹೀರೋಗಳು, ನಾಯಕಿಯನ್ನು ಕಿಡ್ನಾಪ್ ಮಾಡುತ್ತಾರೆ. ಮುಂದೆ ಈ ಘಟನೆಯೇ ಇವರ ಬದುಕಿಗೆ ತಿರುವು ನೀಡುತ್ತದಂತೆ. ಸ್ಟಾರ್ ಹೀರೋಗಳ ಚಿತ್ರಗಳಲ್ಲಿ ಅವಕಾಶ ಸಿಗದಿರುವ ಬಗ್ಗೆ ಅವರಿಗೇನೂ ಬೇಸರವಿಲ್ಲ. ಸಿಕ್ಕ ಅವಕಾಶಗಳಲ್ಲೇ ಮಿಂಚುವ ಇರಾದೆ ಅವರದು. ಅಭಿನಯಕ್ಕೆ ಸ್ಕೋಪ್ ಇರದ ಪಾತ್ರಗಳು ವೃತ್ತಿ ಬದುಕಿಗೆ ಅಡ್ಡಿಯಾಗುವುದಿಲ್ಲವೇ ಎಂದು ಪ್ರಶ್ನೆಸಿದರೆ ಆಕೆ ಮುಗುಳ್ನಕ್ಕು ಸುಮ್ಮನಾಗುತ್ತಾರೆ. **

ಸಮಂತಾ ಸೇರ್ಪಡೆ
ತೆಲುಗು ಸ್ಟಾರ್ ಮಹೇಶ್ ಬಾಬು ಅವರ ತಮಿಳು ಮತ್ತು ತೆಲುಗು ದ್ವಿಭಾಷಾ ಸಿನಿಮಾಗೆ ನಟಿ ಸಮಂತಾ ಸೇರ್ಪಡೆಯಾಗಿದ್ದಾರೆ. ಈ ಮೊದಲು ರಾಕುಲ್ ಪ್ರೀತ್ ಸಿಂಗ್ ಮತ್ತು ಪ್ರಣೀತಾ ಚಿತ್ರದ ಇಬ್ಬರು ನಾಯಕಿಯರೆಂದು ಹೇಳಲಾಗಿತ್ತು. ಇದೀಗ ತಂಡಕ್ಕೆ ಸಮಂತಾ ಮತ್ತು ಕಾಜಲ್ ಅಗರ್‌ವಾಲ್ ಕೂಡ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಚಿತ್ರತಂಡಕ್ಕೆ ತಮಿಳು ಚಿತ್ರರಂಗದ ಹಿರಿಯ ಕಲಾವಿದರಾದ ಸತ್ಯರಾಜ್ ಮತ್ತು ರೇವತಿ, ಮಹೇಶ್ ಬಾಬು ಪೋಷಕರಾಗಿ ನಟಿಸಿಲಿದ್ದಾರಂತೆ. ‘ಇದು ಕುಟುಂಬದ ಸದಸ್ಯರ ಮಧ್ಯೆಯ ಸುಮಧುರ ಬೆಸುಗೆಯನ್ನು ಸಾರುವ ಕಥೆ. ವಿಶೇಷವಾಗಿ ತಂದೆ-ಮಗನ ನಡುವಿನ ಬಾಂಧವ್ಯದ ಚಿತ್ರಣವಿದೆ. ಮೂವರು ಹಿರೋಯಿನ್‌ಗಳು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಚಿತ್ರತಂಡದ ಮೂಲಗಳು ಹೇಳುತ್ತವೆ. ಇಂಥ ಕಥೆಗಳನ್ನು ತೆರೆಗೆ ಅಳವಡಿಸಿ ಯಶಸ್ವಿಯಾಗಿರುವ ಟಾಲಿವುಡ್ ನಿರ್ದೇಶಕ ಶ್ರೀಕಾಂತ್ ‘ಬ್ರಹ್ಮೋತ್ಸವಂ’ ಚಿತ್ರವನ್ನು ನಿರ್ದೇಶಿಸಲಿದ್ದಾರೆ. **

ಕಿರುತೆರೆಗೆ ಅಮಲಾ ಪೌಲ್
ದಕ್ಷಿಣ ಭಾರತದ ಜನಪ್ರಿಯ ನಟಿ ಅಮಲಾ ಪೌಲ್ ಕಿರುತೆರೆ ರಿಯಾಲಿಟಿ ಶೋ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ ಮೊದಲ ಕಿರುತೆರೆ ಅಭಿಯಾನ. ನಿರ್ದೇಶಕ ವಿಜಯ್ ಅವರನ್ನು ವಿವಾಹವಾದ ನಂತರ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುವುದು ಕಡಿಮೆಯಾಗಿತ್ತು. ಸಂಸಾರದಲ್ಲಿ ತಲ್ಲೀನರಾಗಿದ್ದ ಆಕೆಯೀಗ ಟೀವಿಯತ್ತ ಹೊರಳಿದ್ದಾರೆ. ತಮಿಳು ಚಾನೆಲ್‌ನ ‘ಅಪ್ ಸ್ಟಾರ್ಟರ್ಸ್‌’ ಡಾನ್ಸ್ ರಿಯಾಲಿಟಿ ಶೋನಲ್ಲಿ ಅವರು ತೀರ್ಪು ನೀಡಲಿದ್ದಾರೆ. ಅವರೊಂದಿಗೆ ತಮಿಳು ನಟ ಶಿವಾ ಕೂಡ ಇರಲಿದ್ದಾರೆ. ‘ಇದು ಅಮಲಾ ಅವರ ಮೊದಲ ಟೀವಿ ಕಾರ್ಯಕ್ರಮ. ಶೋನಲ್ಲಿ ಡಾನ್ಸ್ ಮಾಡಲಿರುವ ಮಕ್ಕಳ ಪ್ರತಿಭೆಯನ್ನು ಅವರು ಗುರುತಿಸಲಿದ್ದಾರೆ. ಉತ್ತಮ ನೃತ್ಯಗಾರ್ತಿಯಾದ ಅವರಿಂದ ಸ್ಪರ್ಧಿಗಳಿಗೆ ಒಳ್ಳೆಯ ಸಲಹೆ-ಸೂಚನೆಗಳು ಸಿಗಲಿವೆ. ಇದು ಡಾನ್ಸ್ ಶೋ ಮಾತ್ರವಲ್ಲದೆ ಇಲ್ಲಿ ಮತ್ತೆ ಕೆಲವು ಸೆಗ್‌ಮೆಂಟ್‌ಗಳು ಇರುತ್ತವೆ’ ಎಂದು ಶೋ ಮೂಲಗಳು ತಿಳಿಸುತ್ತವೆ. ಮಲಯಾಳಂನ ‘ಲೈಲಾ ಓ ಲೈಲಾ’, ಅಮಲಾ ಅಭಿನಯದ ಲೇಟೆಸ್ಟ್ ಮಲಯಾಳಂ ಸಿನಿಮಾ. ಸದ್ಯ ಅವರ ತಮಿಳು ಚಿತ್ರ ‘ಹೈಕು’ ತೆರೆಗೆ ಸಿದ್ಧವಿದೆ.

Write A Comment