ಮನೋರಂಜನೆ

ಸಿನಿಮಾರಂಗಕ್ಕೆ ಬಾಗಲಕೋಟೆಯ ‘ಕೆಂಗುಲಾಬಿ’ ಯೋಗಿತಾ ಬೋಸ್ಲೆ ‘ಘಟಪ್ರಭಾ’ ನದಿ ತೀರದ ಹುಡುಗಿ

Pinterest LinkedIn Tumblr

crec19yogitha

– ಬಸವರಾಜ್‌ ಸಂಪಳ್ಳಿ

ವಿಯಟ್ನಾಂನಲ್ಲಿ ನೃತ್ಯ ಸಂಯೋಜಕಿಯಾಗಿ ಕೆಲಸ ಮಾಡುತ್ತಿದ್ದ ಯೋಗಿತಾ ‘ಕೆಂಗುಲಾಬಿ’ ಕಾರಣಕ್ಕಾಗಿ ಗಾಂಧಿನಗರಕ್ಕೆ ಬಂದಿದ್ದಾರೆ.

ಕನ್ನಡ ಸಿನಿಮಾರಂಗಕ್ಕೆ ಹೊಸದಾಗಿ ಪರಿಚಿತಗೊಳ್ಳುತ್ತಿರುವ ಯೋಗಿತಾ ಬೋಸ್ಲೆ ‘ಘಟಪ್ರಭಾ’ ನದಿ ತೀರದ ಹುಡುಗಿ. ಬೆಂಗಳೂರು – ಮಂಗಳೂರು ಹೊರತುಪಡಿಸಿದರೆ ಉಳಿದ ಪ್ರದೇಶಗಳ ಕಲಾವಿದರಿಗೆ ಗಾಂಧಿನಗರದಲ್ಲಿ ಅವಕಾಶ ದೊರಕುತ್ತಿಲ್ಲ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಅವರು ನಾಯಕಿಯಾಗಿ ನಟಿಸುವ ಅವಕಾಶ ದೊರೆತಿರುವುದು ವಿಶೇಷ. ಅಂದಹಾಗೆ, ಘನಶ್ಯಾಮ ಭಾಂಡಗೆ ನಿರ್ಮಾಣದ ಎರಡನೇ ಚಿತ್ರ ‘ಕೆಂಗುಲಾಬಿ’ಯಲ್ಲಿ ಯೋಗಿತಾ ನಾಯಕಿ.

ನಿರ್ಮಾಪಕ ಭಾಂಡಗೆ ಅವರು ಬಾಗಲಕೋಟೆಯವರು ಆಗಿರುವುದು ಹಾಗೂ ಯೋಗಿತಾಗೆ ಅವಕಾಶ ದೊರೆತಿರುವುದು ಕಾಕತಾಳೀಯ ಎನ್ನುವಂತಿದ್ದರೂ, ಸಿನಿಮಾ ಬಗೆಗಿನ ಯೋಗಿತಾ ಅವರ ತುಡಿತ ಇಂದಿನದೇನೂ ಅಲ್ಲ. ಕಳೆದ ಮೂರೂವರೆ ವರ್ಷಗಳಿಂದ ವಿಯಟ್ನಾಂನಲ್ಲಿ ನೃತ್ಯ ಸಂಯೋಜಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು, ನಟಿಯಾಗುವ ತಮ್ಮ ಕನಸನ್ನು ಜೀವಂತವಾಗಿ ಇರಿಸಿಕೊಂಡೇ ಇದ್ದರು. ಆ ಕನಸು ‘ಕೆಂಗುಲಾಬಿ’ ಮೂಲಕ ನನಸಾಗುತ್ತಿದೆ. ಈ ಚಿತ್ರದಲ್ಲಿ ನಟಿಸುವುದಕ್ಕಾಗಿ ಅವರು ವಿಯಟ್ನಾಂನಿಂದ ತವರಿಗೆ ಮರಳಿದ್ದಾರೆ.

ವೇಶ್ಯಾವಾಟಿಕೆ ನಿರತ ಮಹಿಳೆಯರ ಜೀವನ ಕುರಿತ ಚಿತ್ರವಾಗಿರುವ ‘ಕೆಂಗುಲಾಬಿ’, ಹನುಮಂತ ಹಾಲಗೇರಿ ಅವರ ಕಾದಂಬರಿಯನ್ನು ಆಧರಿಸಿದ ಸಿನಿಮಾ. ಯೋಗಿತಾ ಅವರದು ಈ ಚಿತ್ರದಲ್ಲಿ ಪ್ರಮುಖ ಪಾತ್ರವಾಗಿದೆ. ಯೋಗಿತಾ ಬಾಗಲಕೋಟೆಯ ಶಿವಾಜಿ ಬೋಸ್ಲೆ ಮತ್ತು ಸುಮಾ ದಂಪತಿಯ ಪುತ್ರಿ. ಡಿಪ್ಲೊಮಾ ಪದವೀಧರೆ ಆಗಿರುವ ಈ ಅಪ್ಪಟ ಕನ್ನಡತಿಗೆ ಕನ್ನಡ ಮಾತನಾಡುವುದು ಸುಲಿದ ಬಾಳೆಯ ಹಣ್ಣಿನಂತೆ.

ಶಾಲಾ–ಕಾಲೇಜು ದಿನಗಳಲ್ಲೇ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಯೋಗಿತಾ ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ‘ಸಿನಿಮಾದಲ್ಲಿ ನಟಿಸಬೇಕು ಎಂಬ ಕನಸಿತ್ತು. ಘನಶ್ಯಾಮ ಭಾಂಡಗೆ ಅವರಿಂದ ನನ್ನ ಕನಸು ನನಸಾಗಿದೆ. ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ಕೆಂಗುಲಾಬಿ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಜೀವ ತುಂಬುತ್ತೇನೆ’ ಎನ್ನುವ ಆತ್ಮವಿಶ್ವಾಸ ಅವರದು.

‘ಕೆಂಗುಲಾಬಿ’ ಜೊತೆಗೆ ತೆಲುಗು ಹಾಗೂ ತಮಿಳು ಚಿತ್ರರಂಗದತ್ತಲೂ ಯೋಗಿತಾ ದೃಷ್ಟಿ ಹರಿಸುತ್ತಿದ್ದಾರೆ. ಆದರೆ, ಮೊದಲು ‘ಕೆಂಗುಲಾಬಿ’ ಅರಳಲಿ, ನಂತರವಷ್ಟೇ ಉಳಿದ ಯೋಚನೆ ಎನ್ನುವ ನಿಲುವು ಅವರದು.

ಘನಶ್ಯಾಮ ಭಾಂಡಗೆ ಅವರು ತಾವು ನಿರ್ಮಿಸುತ್ತಿರುವ ಚಿತ್ರಗಳಲ್ಲಿ ಉತ್ತರ ಕರ್ನಾಟಕದ ಕಲಾವಿದರಿಗೆ ಪ್ರಾಶಸ್ತ್ಯ ನೀಡುತ್ತಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಅಂಬೇಡ್ಕರ್‌ ಮಾರ್ಗವನ್ನು ಪ್ರತಿನಿಧಿಸುವ ‘ಇಂಗಳೆಮಾರ್ಗ’ ಘನಶ್ಯಾಮ ಅವರ ನಿರ್ಮಾಣದ ಚೊಚ್ಚಿಲ ಚಿತ್ರ. ಆ ಚಿತ್ರದಲ್ಲಿ ಬಾಗಲಕೋಟೆಯವರೇ ಆದ ನಟಿ ಶಿವಾನಿ ಅವರಿಗೆ ಅವಕಾಶ ಕೊಟ್ಟಿದ್ದರು. ಈಗ ಯೋಗಿತಾ ಅವರ ಸರದಿ.

Write A Comment