ಖ್ಯಾತ ನಟ ಕಿಚ್ಚ ಸುದೀಪ್ ಮತ್ತೊಂದು ರಿಮೇಕ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದರಾ ಎಂಬ ಕುತೂಹಲದ ಪ್ರಶ್ನೆಗಳು ಚಿತ್ರರಂಗದಲ್ಲಿ ಕೇಳಿ ಬರುತ್ತಿವೆ. ‘ರನ್ನ’ ಚಿತ್ರದ ಭರ್ಜರಿ ಯಶಸ್ಸಿನಿಂದ ಸಂತಸಗೊಂಡಿರುವ ಸುದೀಪ್ ತೆಲುಗಿನ ಮತ್ತೊಂದು ಯಶಸ್ವಿ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲಿದ್ದಾರೆಂದು ಹೇಳಲಾಗುತ್ತಿದೆ.
ತೆಲುಗಿನ ‘ಅತಾರಿಂಟಕಿ ದಾರೇದಿ’ ಚಿತ್ರದ ರಿಮೇಕ್ ಆದ ನಂದ ಕಿಶೋರ್ ನಿರ್ದೇಶನದ ‘ರನ್ನ’ ಅತ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಈ ಚಿತ್ರ ಬಿಡುಗಡೆಗೊಂಡ ಮೊದಲ ವಾರದಲ್ಲೇ ’10 ಕೋಟಿ ಕ್ಲಬ್’ ಸೇರುವ ಮೂಲಕ ಹೊಸ ದಾಖಲೆ ಮಾಡಿದೆ. ದಿನದಿಂದ ದಿನಕ್ಕೆ ಚಿತ್ರ ಪಡೆದುಕೊಳ್ಳುತ್ತಿರುವ ವೇಗ ನೋಡಿದರೆ ಗಳಿಕೆಯಲ್ಲಿ ಕನ್ನಡ ಚಿತ್ರರಂಗದಲ್ಲೇ ‘ರನ್ನ’ ಚಿತ್ರ ಹೊಸ ಇತಿಹಾಸ ನಿರ್ಮಿಸಬಹುದೆಂಬ ಮಾತುಗಳು ಕೇಳಿ ಬರುತ್ತಿವೆ.
‘ರನ್ನ’ ಯಶಸ್ಸಿನಿಂದ ಉತ್ತೇಜಿತರಾಗಿರುವ ಸುದೀಪ್, 2013 ರಲ್ಲಿ ತೆರೆ ಕಂಡಿದ್ದ ರವಿತೇಜಾ, ಶೃತಿ ಹಾಸನ್ ಅಭಿನಯದ ತೆಲುಗಿನ ಮತ್ತೊಂದು ಯಶಸ್ವಿ ಚಿತ್ರ ‘ಬಲುಪು’ ವನ್ನು ರಿಮೇಕ್ ಮಾಡಲು ಚಿಂತನೆ ನಡೆಸಿದ್ದಾರೆಂದು ಹೇಳಲಾಗಿದೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸ್ವ ಮೇಕ್ ಅಥವಾ ರಿಮೇಕ್ ಎಂಬ ಪ್ರಶ್ನೆಯೇ ಇಲ್ಲ. ಅಭಿಮಾನಿಗಳು ಯಾವುದನ್ನು ಇಷ್ಟಪಡುತ್ತಾರೋ ಅದನ್ನೇ ಮಾಡುವುದಾಗಿ ಸುದೀಪ್ ಹೇಳಿದ್ದು, ‘ಬಲುಪು’ ಚಿತ್ರದ ಕನ್ನಡ ರಿಮೇಕ್ ನಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳಲಿದ್ದರಾ ಎಂಬ ಕುತೂಹಲ ಈಗ ಅಭಿಮಾನಿಗಳಲ್ಲಿ ಮೂಡಿದೆ.