ಕೊಲಂಬೊ, ಜೂ.15- ಭಾರತ ವಿರುದ್ಧ ಆಗಸ್ಟ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ನ ನಂತರ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳುವುದಾಗಿ ಶ್ರೀಲಂಕಾದ ಕ್ರಿಕೆಟ್ ದಿಗ್ಗಜ ಕುಮಾರಸಂಗಾಕ್ಕಾರ ತಿಳಿಸಿದ್ದಾರೆ. ಈಗಾಗಲೇ ಈ ಕುರಿತು ಶ್ರೀಲಂಕಾ ಕ್ರಿಕೆಟ್ ಮಂಡಳಿಗೂ ಪತ್ರ ಬರೆದಿದ್ದು ನಾಳೆ ನಡೆ ಯುವ ಸಭೆಯಲ್ಲಿ ಮಂಡಳಿ ತನ್ನ ತೀರ್ಮಾನವನ್ನು ನಿರ್ಧರಿಸಲಿದೆ.
ವಿಶ್ವಕಪ್ನಲ್ಲಿ ತನ್ನ ಬ್ಯಾಟಿಂಗ್ ಶಕ್ತಿಯಿಂದ ಸತತ 4 ಶತಕಗಳ ಗಳಿಸಿದ್ದ ಸಂಗಾಕಾರ ವಿಶ್ವಕಪ್ ಟೂರ್ನಿಯಿಂದ ತಂಡ ಹೊರಬಿದ್ದ ಬೆನ್ನಲ್ಲೇ ಅವರು ಏಕದಿನ ಕ್ರಿಕೆಟ್ ಜೀವನಕ್ಕೆ ಗುಡ್ಬೈ ಹೇಳಿದ್ದರು. ಕಳೆದ ಚುಟುಕು ವಿಶ್ವಕಪ್ ಗೆದ್ದ ನಂತರ ಟ್ವೆಂಟಿ-20 ಮಾದರಿಯ ಕ್ರಿಕೆಟ್ಗೆ ರಾಜೀನಾಮೆ ನೀಡಿದ್ದರು. ಸಂಗಾಕಾರ ಇದುವರೆಗೂ ಟೆಸ್ಟ್ನಲ್ಲಿ 38 ಶತಕಗಳ ನೆರವಿನಿಂದ 58.66 ರ ಸರಾಸರಿಯಲ್ಲಿ 12,203 ರನ್ಗಳನ್ನು ಗಳಿಸಿದ್ದಾರೆ. 12 ಡಬಲ್ ಶತಕಗಳು ಬಾರಿಸಿರುವುದೇ ಅಲ್ಲದೆ ಅತಿ ವೇಗದ 8000, 9000, 10,000 , 11,000, 12,000 ರನ್ ಗಳಿಸಿದ ಶ್ರೀಲಂಕಾದ ಆಟಗಾರನೆಂದು ಗುರುತಿಸಿಕೊಂಡಿದ್ದಾರೆ. ಜೂನ್ 17 ರಿಂದ ಪಾಕಿಸ್ತಾನ ವಿರುದ್ಧ ಮೂರು ಟೆಸ್ಟ್ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದು ಸಂಗಾಕಾರ ಆಡುವ ಸಂಪೂರ್ಣ ಟೆಸ್ಟ್ ಸರಣಿಯಾಗಲಿದೆ.