ಮನೋರಂಜನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೊಂದು ಸಂತಸದ ಸುದ್ದಿ; ಸ್ಥಗಿತಗೊಂಡಿದ್ದ ‘ವಿರಾಟ್’ ಚಿತ್ರದ ಚಿತ್ರೀಕರಣ ಮತ್ತೆ ಆರಂಭ

Pinterest LinkedIn Tumblr

Darshan

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೊಂದು ಸಂತಸದ ಸುದ್ದಿ ಇಲ್ಲಿದೆ. ಎರಡು ವರ್ಷಗಳ ಹಿಂದೆ ಆರಂಭಗೊಂಡು ಬಳಿಕ ಸ್ಥಗಿತಗೊಂಡಿದ್ದ ‘ವಿರಾಟ್’ ಚಿತ್ರದ ಚಿತ್ರೀಕರಣ ಮತ್ತೆ ಆರಂಭಗೊಂಡಿದೆ ಎಂದು ತಿಳಿದು ಬಂದಿದೆ.

‘ವಿರಾಟ್’ ಚಿತ್ರದ ಕೆಲವು ಭಾಗಗಳನ್ನು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಚಿತ್ರೀಕರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರೀಕರಣ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎನ್ನಲಾಗಿದೆ. ದರ್ಶನ್ ಪ್ರಸ್ತುತ ಅರ್ಜುನ್ ನಿರ್ದೇಶನದ ‘ಐರಾವತ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದು, ಈ ಚಿತ್ರ ಈಗ ಅಂತಿಮ ಹಂತಕ್ಕೆ ತಲುಪಿದೆ ಎನ್ನಲಾಗಿದೆ.

‘ವಿರಾಟ್’ ಚಿತ್ರದ ಕುರಿತಂತೆ ಉಂಟಾಗಿದ್ದ ಗೊಂದಲಗಳು ಈಗ ಬಗೆಹರಿದಿದೆ ಎನ್ನಲಾಗಿದ್ದು, ನಟ ದರ್ಶನ್ ಕೂಡಾ ಚಿತ್ರ ಪೂರ್ಣಗೊಳಿಸಲು ಉತ್ಸುಕತೆ ತೋರಿದ್ದಾರೆಂದು ತಿಳಿದುಬಂದಿದೆ. ‘ವಿರಾಟ್’ ಚಿತ್ರದ ನಿರ್ಮಾಪಕರಾಗಿದ್ದ ರತ್ನಕುಮಾರ್ ಅವರ ಜಾಗಕ್ಕೆ ಈಗ ಕಲ್ಯಾಣ್ ಅವರು ಬಂದಿದ್ದು, ಹಲವು ಚಿತ್ರಗಳನ್ನು ಈಗಾಗಲೇ ಒಪ್ಪಿಕೊಂಡಿರುವ ದರ್ಶನ್ ಅವರು ಈ ಚಿತ್ರಗಳ ನಡುವೆಯೇ ‘ವಿರಾಟ್’ ಚಿತ್ರಕ್ಕೂ ಡೇಟ್ಸ್ ಹೊಂದಿಸಿಕೊಡುವುದಾಗಿ ತಿಳಿಸಿದ್ದಾರೆನ್ನಲಾಗಿದೆ.

ಈ ಮಧ್ಯೆ ‘ಐರಾವತ’ ಚಿತ್ರ ತಡವಾದರೂ ಅದ್ದೂರಿಯಾಗಿ ಮೂಡಿ ಬರುತ್ತಿದ್ದು, ಬಾಕ್ಸಾಫೀಸಿನಲ್ಲಿ ಭರ್ಜರಿ ಯಶಸ್ಸು ಕಾಣಲಿದೆ ಎಂಬ ಲೆಕ್ಕಾಚಾರ ಗಾಂಧಿನಗರದ ಪಂಡಿತರದ್ದಾಗಿದೆ. ‘ಬುಲ್ ಬುಲ್’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಬಂದ ದರ್ಶನ್ ಅವರ ‘ಬೃಂದಾವನ’ ಹಾಗೂ ‘ಅಂಬರೀಷ’ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದಿರುವ ಕಾರಣ ದರ್ಶನ್ ಅವರಿಗೂ ಒಂದು ಬಿಗ್ ಸಕ್ಸಸ್ ಬೇಕಿದೆ. ಈ ಹಿನ್ನೆಲೆಯಲ್ಲಿಯೇ ‘ಐರಾವತ’ ಕುರಿತು ದರ್ಶನ್ ಆಪಾರ ಕಾಳಜಿ ವಹಿಸಿದ್ದಾರೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಚಿತ್ರ ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

Write A Comment