ಬಳ್ಳಾರಿ: ಅಂಗನವಾಡಿ ಶಿಕ್ಷಕಿಯರಿಗೆ ವಂಚನೆ ಮಾಡಿದ್ದಲ್ಲದೇ ಬೆದರಿಕೆ ಒಡ್ಡಿ ಶೋಷಣೆ ಎಸಗಿದ ವ್ಯಕ್ತಿಯೊಬ್ಬನೀಗ ಪೊಲೀಸರ ಆತಿಥ್ಯದಲ್ಲಿದ್ದಾನೆ. ಬಳ್ಳಾರಿಯ ಸಿರಗುಪ್ಪ ತಾಲ್ಲೂಕಿನಲ್ಲಿ ಘಟನೆ ನಡೆದಿದೆ.
ಆರೋಪಿ ಸುರೇಶ್ ಗೌಡ ಅಲಿಯಾಸ್ ಮಾರುತಿಗೆ ಧರ್ಮದೇಟು ನೀಡಿರುವ ಅಂಗನವಾಡಿ ಶಿಕ್ಷಕಿಯರು ಮತ್ತು ಕಾರ್ಯಕರ್ತೆಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈತ ತಾನು ಸಚಿವ ಎಚ್.ಕೆ. ಪಾಟೀಲ್ ಅವರ ಸಂಬಂಧಿಕ ಎಂದು ಹೇಳಿಕೊಂಡು ತಾಲೂಕಿನಾದ್ಯಂತ ಎಲ್ಲ ಅಂಗನವಾಡಿಗಳಿಗೆ ಭೇಟಿ ನೀಡುತ್ತಿದ್ದ. ಅಲ್ಲದೆ ಕೆಲವೆಡೆ ತಾನು ಸಿಟಿಪಿಒ ಅಧಿಕಾರಿ ಎಂದು ಸಹ ಹೇಳಿಕೊಂಡಿದ್ದ. ನಿಮಗೆ ಕೆಲಸವನ್ನು ಖಾಯಂಗೊಳಿಸುವುದಾಗಿ ಕೆಲ ಅಂಗನವಾಡಿ ಶಿಕ್ಷಕಿಯರು ಮತ್ತು ಕಾರ್ಯಕರ್ತರಿಂದ ಹಣವನ್ನು ಪಡೆದು ವಂಚಿಸಿದ್ದನೀತ. ತಾನು ಭೇಟಿ ನೀಡುತ್ತಿದ್ದ ಅಂಗನವಾಡಿ ಸಿಬ್ಬಂದಿಗೆ ಈತ ಬೆದರಿಕೆ ಹಾಕುತ್ತಿದ್ದ ಮತ್ತು ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಆತನ ಅಸಭ್ಯ ವರ್ತನೆಯಿಂದ ಬೇಸತ್ತ ತಾಲ್ಲೂಕಿನ ಅಂಗನವಾಡಿ ಸಿಬ್ಬಂದಿ ಒಗ್ಗೂಡಿ ಮುದ್ದಟನೂರಿನಲ್ಲಿ ಆತನನ್ನು ಮನಬಂದಂತೆ
ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆತ ಮೂಲತಃ ಕೊಪ್ಪಳದ ಯಲಬುರ್ಗ ತಾಲ್ಲೂಕಿನವನೆಂದು ತಿಳಿದುಬಂದಿದೆ. ಮಾರುತಿ ಎಂಬುದು ಆತನ ನಿಜ ನಾಮಧೇಯವಾಗಿದ್ದು ಸುರೇಶ್ ಗೌಡ ಎಂದು ಹೇಳಿಕೊಂಡು ವಂಚನೆ ನಡೆಸುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ.
ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.