ಮುಂಬೈ, ಜೂ.3: ವಿದೇಶಗಳಲ್ಲಿನ ಕಳಪೆ ಪ್ರದರ್ಶನಕ್ಕೆ ಕಡಿವಾಣ ಹಾಕುವ ಮೂಲಕ ಮುಂದಿನ 5 ವರ್ಷಗಳವರೆಗೂ ಭಾರತ ತಂಡವು ಪ್ರಭುತ್ವ ಸಾಧಿಸಬೇಕು ಎಂದು ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ವಿಶ್ವಕಪ್ ಅಲ್ಲದೆ ಐಪಿಎಲ್ನ ಸರಣಿಯೂ ಸೇರಿದಂತೆ ಒಟ್ಟು 250 ದಿನಕ್ಕೂ ನಮ್ಮ ತಂಡದ ಎಲ್ಲಾ ಆಟಗಾರರು ಒಟ್ಟಾಗಿ ಆಡಿರುವುದರಿಂದ ಎಲ್ಲರ ಸ್ನೇಹ ಸಂಬಂಧವನ್ನೂ ಹೊಂದಿದ್ದು ಬಾಂಗ್ಲಾ ವಿರುದ್ಧ ಟೆಸ್ಟ್ ಜಯಿಸುವ ಮೂಲಕ ವಿದೇಶದಲ್ಲಿನ ಕಳಪೆ ಪ್ರದರ್ಶನಕ್ಕೆ ಕಡಿವಾಣ ಹಾಕುವುದಾಗಿ ಕೊಹ್ಲಿ ಹೇಳಿದರು.
ವಿಶ್ವಕಪ್ನ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಲು ಅನುಷ್ಕಾಶರ್ಮಾರೇ ಕಾರಣ ಎಂಬ ಮಾತುಗಳು ಪದೇ ಪದೇ ಕೇಳಿಬರುತ್ತಿರುವುದು ವಿಷಾದ ಎಂದರು. ಅನುಷ್ಕಾ ನನ್ನ ಒಳ್ಳೆಯ ಗೆಳತಿ ನಾವಿಬ್ಬರೂ ಭೇಟಿಯಾದಾಗ ನಮ್ಮ ವೈಯಕ್ತಿಕ ವಿಚಾರ ಬಿಟ್ಟು ಕ್ರಿಕೆಟ್ ರಂಗದ ಬಗ್ಗೆ ಕಿಂಚಿತ್ತೂ ಪ್ರಸ್ತಾಪ ಮಾಡುವುದಿಲ್ಲ ಎಂದು ಇದೇ ವೇಳೆ ವಿರಾಟ್ ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಕ್ರಿಕೆಟ್ ರಂಗದಲ್ಲಿ ರೋಹಿತ್ಶರ್ಮಾ, ಸುರೇಶ್ರೈನಾ, ಅಜೆಂಕ್ಯಾ ರಹಾನೆರಂತಹ ಘಟಾನುಘಟಿ ಆಟಗಾರರ ದಂಡೇ ಇರುವುದರಿಂದ ಮುಂದಿನ ಐದು ವರ್ಷಗಳಲ್ಲಿ ಭಾರತ ತಂಡವು ಟೆಸ್ಟ್ನಲ್ಲಿ ಉತ್ತಮ ಸಾಧನೆ ತೋರಲಿದೆ ಎಂದು ಕೊಹ್ಲಿ ನುಡಿದರು.