ಬಹು ಭಾಷಾ ನಟಿ ತ್ರಿಷಾಗೆ ಸೆಲ್ವ ರಾಘವನ್ ರವರ ಚಿತ್ರ ಕೈ ತಪ್ಪಲು ಆಕೆಯೊಂದಿಗೆ ವಿವಾಹ ನಿಶ್ಚಿತಾರ್ಥಗೊಂಡು ಬಳಿಕ ರದ್ದುಪಡಿಸಿದ ನಿರ್ಮಾಪಕ ವರುಣ್ ಮಣಿಯನ್ ಕಾರಣವೆಂಬ ಗುಸುಗುಸು ಕಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.
ಸಿಂಬು, ತಾಪ್ಸಿ ಮೊದಲಾದವರು ನಟಿಸಲಿರುವ ಚಿತ್ರದ ಪ್ರಮುಖ ಪಾತ್ರಕ್ಕೆ ತ್ರಿಷಾ ಕೂಡಾ ಆಯ್ಕೆಯಾಗಿದ್ದರು. ಈ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದ್ದು, ಕೊನೆ ಕ್ಷಣದಲ್ಲಿ ತ್ರಿಷಾರನ್ನು ಚಿತ್ರದಿಂದ ಕೈ ಬಿಡಲಾಗಿದೆ. ಡೇಟ್ಸ್ ಹೊಂದಾಣಿಕೆಯಾಗದ ಕಾರಣಕ್ಕಾಗಿ ತ್ರಿಷಾ ಅವರನ್ನು ಚಿತ್ರದಿಂದ ಕೈ ಬಿಡಲಾಗಿದೆ ಎಂಬ ಸಮಜಾಯಿಷಿಗಳು ಚಿತ್ರತಂಡದಿಂದ ಕೇಳಿ ಬರುತ್ತಿದ್ದರೂ ಅಸಲಿ ಕಾರಣ ಬೇರೆಯೇ ಆಗಿದೆ ಎನ್ನಲಾಗಿದೆ.
ನಿರ್ಮಾಪಕರೂ ಆಗಿರುವ ವರುಣ್ ಮಣಿಯನ್ ಈ ಚಿತ್ರಕ್ಕೆ ಹಣವನ್ನು ಹೂಡಿಕೆ ಮಾಡುತ್ತಿದ್ದು, ಅವರ ಸೂಚನೆಯಂತೆ ತ್ರಿಷಾರನ್ನು ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ವರುಣ್ ಮಣಿಯನ್ ಜೊತೆ ಅದ್ದೂರಿಯಾಗಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ತ್ರಿಷಾ ಬಳಿಕ ತಾವು ಒಂಟಿಯಾಗಿದ್ದು, ನೆಮ್ಮದಿಯಾಗಿರುವುದಾಗಿ ಟ್ವೀಟ್ ಮಾಡುವ ಮೂಲಕ ನಿಶ್ಚಿತಾರ್ಥ ರದ್ದಾಗಿರುವುದನ್ನು ಪರೋಕ್ಷವಾಗಿ ಪ್ರಕಟಿಸಿದ್ದರು.