ಬೆಂಗಳೂರು,ಮೇ1-ನಾಟಿಕೋಳಿ ಚಲನಚಿತ್ರ ಮುಹೂರ್ತಕ್ಕೆ ಮುನ್ನವೇ ವಿವಾದಕ್ಕೆ ಸಿಲುಕಿಕೊಂಡಿದ್ದು, ಚಿತ್ರೀಕರಣ ಪೂರ್ಣಗೊಳ್ಳುವುದೇ ಎಂಬ ಅನುಮಾನ ಸೃಷ್ಟಿಯಾಗಿದೆ.
ಆಗಿದ್ದಿಷ್ಟೇ: ವಿಲ್ಸನ್ಗಾರ್ಡ್ನಲ್ಲಿಂದು ನಾಟಿಕೋಳಿ ಚಲನಚಿತ್ರಕ್ಕಾಗಿ ಫೋಟೋ ಶೂಟ್ ನಡೆಯುತ್ತಿತ್ತು. ಇಲ್ಲಿಗೆ ದಿಢೀರ್ ಪ್ರತ್ಯಕ್ಷವಾದ ಹುಲಿ ಚಿತ್ರದ ನಿರ್ಮಾಪಕ ಶಿವಪ್ರಕಾಶ್ , ನಟಿ ರಾಗಿಣಿ ನನ್ನ ಗರ್ಲ್ ಫ್ರೆಂಡ್ ಅವರ ಜೊತೆ ಫೋಟೊ ಶೂಟ್ ಮಾಡಬಾರದು. ಒಂದು ವೇಳೆ ಮಾಡಿದರೆ ಕೊಲೆ ಮಾಡುವುದಾಗಿ ನಾಟಿಕೋಳಿ ಚಿತ್ರದ ನಿರ್ಮಾಪಕ
ವೆಂಕಟೇಶ್ ಹಾಗೂ ನಿರ್ದೇಶಕ ಶ್ರೀನಿವಾಸ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಬರುವ ಸೋಮವಾರ ನಾಟಿಕೋಳಿ ಚಿತ್ರ ಮುಹೂರ್ತಗೊಳ್ಳಬೇಕಾಗಿತ್ತು. ಇದಕ್ಕೂ ಮುನ್ನವೇ ಇಂತಹ ಗೊಂದಲ ಸೃಷ್ಟಿಯಾಗಿದ್ದು, ಆರಂಭದಲ್ಲಿಯೇ ವಿಘ್ನವುಂಟಾಗಿದೆ. ಯಾವುದೇ ಅಡೆತಡೆಗಳಿಲ್ಲದೆ ಚಿತ್ರೀಕರಣ ಪೂರ್ಣಗೊಳ್ಳುವುದೇ ಅನುಮಾನ ವಾಗಿದೆ.
ನಟಿ ರಾಗಿಣಿಯ ಪ್ರತಿಕ್ರಿಯೆ
ಈ ಕುರಿತು ನಟಿ ರಾಗಿಣಿಯವರು ನಿರ್ಮಾಪಕ ಶಿವಪ್ರಕಾಶ್ ಯಾರೆಂಬುದೇ ನನಗೆ ಗೊತ್ತಿಲ್ಲ. ನನ್ನ ಹೆಸರಿಗೆ ಮಸಿ ಬಳಿಯಲು ಈ ರೀತಿ ಮಾಡುತ್ತಿದ್ದಾರೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನಗೆ ಯಾವ ಬಾಯ್ ಫ್ರೆಂಡ್ ಇಲ್ಲ. ಹಾಗೊಮ್ಮೆ ಇದಿದ್ರೆ ಅಭಿಮಾನಿಗಳಿಗೆ ತಿಳಿಸುತ್ತಿದ್ದೆ. ಇದು ಸತ್ಯಕ್ಕೆ ದೂರವಾದದು ಎಂದು ತಿಳಿಸಿದ್ದಾರೆ. ಈ ವಿಷಯ ಚಲನಚಿತ್ರ ವಾಣಿಜ್ಯ ಮಂಡಳಿ ಗಮನಕ್ಕೆ ಬಂದಿದ್ದು , ನಾಳೆ ಮಂಡಳಿಯ ನಿರ್ದೇಶಕ ಭಾಮಾ ಹರೀಶ್ ಅವರು ಹುಲಿ ಚಿತ್ರದ ನಿರ್ಮಾಪಕ ಶಿವಪ್ರಕಾಶ್ ಹಾಗೂ ನಾಟಿಕೋಳಿ ಚಲನಚಿತ್ರದ ನಿರ್ಮಾಪಕ ವೆಂಕಟೇಶ್, ನಿರ್ದೇಶಕ ಶ್ರೀನಿವಾಸ್ರನ್ನೊಳಗೊಂಡಂತೆ ಸಭೆ ಕರೆಯಲಾಗಿದೆ.
-ಕೃಪೆ: ಈ ಸಂಜೆ