ಒಬ್ಬ ತಾತ ಇದ್ದಾನೆ. ಆತನೊಬ್ಬ ರೌಡಿ. ಆತನ ಮಗ ಕರ್ನಾಟಕಕ್ಕೆ ದೊಡ್ಡರೌಡಿ. ಹೆಂಡತಿ ಬಾರ್ ಡಾನ್ಸರ್. ಈ ರೌಡಿ ಮತ್ತು ಡಾನ್ಸರ್ ದಂಪತಿಗೊಬ್ಬ ಮಗ. ಆತನನ್ನು ಭಾರತಕ್ಕೆ ದೊಡ್ಡ ಡಾನ್ ಮಾಡವ ಆಸೆ ಆತನ ತಾಯಿಯದ್ದು. ‘ನಾನು ಸರಿ ಇದ್ದಿದ್ದರೆ ನಿಮ್ಮ ಅಪ್ಪ ಸರಿ ಇರುತ್ತಿದ್ದ.
ಅವನು ಸರಿ ಇದ್ದಿದ್ದರೆ ನೀನು ಸರಿ ಇರುತ್ತಿದ್ದೆ’ ಎಂದು ಮೊಮ್ಮಗನಿಗೆ ಹೇಳುವ ಅಜ್ಜ– ‘ಒಳ್ಳೆಯ ಸಂಸ್ಕಾರಯುತ ಹುಡುಗಿಯನ್ನು ಮದುವೆಯಾಗು’ ಎನ್ನುತ್ತಾನೆ. ಅಜ್ಜನ ಅಂತಿಮ ಆಸೆಯ ಬೆನ್ನತ್ತುವ ಮೊಮ್ಮಗ, ಬಾಂಬೆಗೆ ಹುಡುಗಿ ಹುಡುಕಲು ಹೋಗುತ್ತಾನೆ….
ಇದು ‘ಜಗ್ಗುದಾದ’ ಸಿನಿಮಾದ ಕಥೆ. ‘ಮುಂದೇನು ಎನ್ನುವುದನ್ನು ತೆರೆಯ ಮೇಲೆ ನೋಡಿ’ ಎನ್ನುವುದು ನಟ ದರ್ಶನ್್ ಕೋರಿಕೆ. ತಮ್ಮ ಹುಟ್ಟುಹಬ್ಬದ ದಿನ (ಫೆ. 15) ‘ಜಗ್ಗುದಾದ’ ಸಿನಿಮಾ ಕುರಿತು ಪ್ರಕಟಿಸಿದ ದರ್ಶನ್, ಚಿತ್ರವನ್ನು ಪಕ್ಕಾ ಮಾಸ್ ಸಿನಿಮಾ ಎಂದು ಬಣ್ಣಿಸಿದರು.
‘ಟೈಟಲ್ನಲ್ಲಿಯೇ ಸಿನಿಮಾದ ಮಾಸ್ ಅಪೀಲ್ ಇದೆ. ಮಾಸ್ ಅಂಶಗಳನ್ನು ಇಟ್ಟುಕೊಂಡೇ ಕೌಟುಂಬಿಕ ಮತ್ತು ಕಾಮಿಡಿ ಕಥೆ ಹೇಳಲಾಗುತ್ತಿದೆ. ಇದು ಔಟ್ ಅಂಡ್ ಔಟ್ ಫ್ಯಾಮಿಲಿ ಎಂಟ್ರಟೈನ್ಮೆಂಟ್ ಮತ್ತು ಕಾಮಿಡಿ ಚಿತ್ರ’ ಎಂದು ದರ್ಶನ್ ವಿಶ್ಲೇಷಿಸಿದರು.
ಅಂದಹಾಗೆ, ಜಗ್ಗುದಾದ’ ಚಿತ್ರೀಕರಣ ಶುರುವಾಗುವುದು ಮೇ 1ರಿಂದ. ಮುಂಬೈನಲ್ಲಿ ಸಿನಿಮಾ ಅನುಭವಗಳನ್ನು ಪಡೆದುಕೊಂಡು ಬಂದಿರುವ ರಾಘವೇಂದ್ರ ಹೆಗಡೆ ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ. ‘ಇಡೀ ಸಿನಿಮಾ ದರ್ಶನ್ ಮೇಲೆ ನಿಂತಿದೆ’ ಎಂದ ಅವರು, ‘ದರ್ಶನ್ ಅವರೇ ನಮ್ಮ ಚಿತ್ರದ ದೇವರು’ ಎಂದೂ ಹೇಳಿದರು.
ಚಿತ್ರದಲ್ಲಿ ಆರು ಹಾಡುಗಳಿದ್ದು ವಿ. ಹರಿಕೃಷ್ಣ ನಾಲ್ಕು ಮತ್ತು ಮುಂಬೈನ ಪರೀಶ್ ಕುಮಾರ್ ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸಲಿದ್ದಾರೆ. ‘ಸಿಂಗಂ’ ಮತ್ತು ‘ಚೆನ್ನೈ ಎಕ್ಸ್ಪ್ರೆಸ್’ ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದ ಯುನಿಸ್ ಯಜುರ್ವಾಲ್ ‘ಜಗ್ಗುದಾದಾ’ ಚಿತ್ರಕಥೆ ಮಾಡಿದ್ದಾರೆ.
‘ದರ್ಶನ್ ಅಭಿಮಾನಿಗಳು ಅವರಿಂದ ಏನನ್ನು ನಿರೀಕ್ಷಿಸುತ್ತಾರೋ ಆ ಅಂಶಗಳು ಇಲ್ಲಿ ಇರಲಿವೆ’ ಎಂದರು ಸಂಭಾಷಣೆಕಾರ ಚಿಂತನ್. ನಾಯಕಿ ಸೇರಿದಂತೆ ತಾರಾಗಣದ ಆಯ್ಕೆ ನಡೆಯುತ್ತಿದೆಯಂತೆ.