ಮನೋರಂಜನೆ

ನಟ ಅರ್ಜುನ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆ: ಸುವ್ವಿ… ಸುವ್ವಲಾಲಿ…

Pinterest LinkedIn Tumblr

crec16Suvi

ನಟ ಅರ್ಜುನ್ ಸಿನಿಮಾ ಲೋಕದಲ್ಲಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅರ್ಜುನ್ ಅವರು ಈ ಮೊದಲು ‘ಅಬ್ಬಬ್ಬಾ ಎಂಥ ಹುಡುಗ’ ಮತ್ತು ‘ಓ ಕುಸುಮ’ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಆದರೆ ಆ ಚಿತ್ರಗಳು ಅವರ ಕೈ ಹಿಡಿಯಲಿಲ್ಲ. ಈಗ ಪುನಃ ‘ಸುವ್ವಿ’ ಮೂಲಕ ಮತ್ತೊಂದು ಸುವ್ವಲಾಲಿ ಹಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಗೀತೆಗಳ ಧ್ವನಿಮುದ್ರಿಕೆ ಲೋಕಾಪರ್ಣೆಗೊಂಡಿತು.

ದಿವಂಗತ ವಿಷ್ಣುವರ್ಧನ್ ಅವರ ಜನಪ್ರಿಯ ಚಿತ್ರಗಳಲ್ಲೊಂದಾದ ‘ನೀ ಬರೆದ ಕಾದಂಬರಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದ ಅಗ್ಗಳಿಕೆ ಅರ್ಜುನ್‌ ಅವರದ್ದು. ಆದರೆ, ಬಾಲನಟನಾಗಿ ಗಳಿಸಿದ ಯಶಸ್ಸನ್ನು ನಾಯಕ ನಟನಾಗಿಯೂ ಕಂಡುಕೊಳ್ಳಲು ತವಕಿಸುತ್ತಿರುವ ಅವರು, ‘ಸುವ್ವಿ’ ತಮ್ಮ ಪಾಲಿಗೆ ಸಿಹಿಯಾಗುವ ನಿರೀಕ್ಷೆಯಲ್ಲಿದ್ದಾರೆ. ವೆಂಕಟೇಶ್ ಮತ್ತು ಎಸ್. ರಾಜಾರೆಡ್ಡಿ ಈ ಚಿತ್ರದ ನಿರ್ದೇಶಕರು.

ನಿರ್ಮಾಪಕ – ನಿರ್ದೇಶಕ ಸೇರಿದಂತೆ ಇಡೀ ಚಿತ್ರತಂಡದ ಹೆಸರುಗಳನ್ನು ಮತ್ತು ಅವರ ಕೆಲಸಗಳನ್ನು ನೆನಪಿಸಿಕೊಳ್ಳುತ್ತ ಮಾತಿಗಿಳಿದರು ಅರ್ಜುನ್‌. ‘ಒಂದು ಊರಿನಿಂದ ಮತ್ತೊಂದು ಊರಿಗೆ ನಾಯಕ ಸಾಗುವಾಗ ನಡೆಯುವ ಕಥೆ ಸುವ್ವಿ ಚಿತ್ರದ್ದು. ಪಯಣದಲ್ಲಿ ನಡೆಯುವ ಪ್ರಸಂಗಗಳೇ ಕಥೆಯ ತಿರುಳು’ ಎಂದರು. ನಾಯಕನ ಮಾತಿಗೂ ಮುನ್ನ ‘ಇದು ಮಂಗಳೂರು ಟು ಬೆಂಗಳೂರಿಗೆ ಪಯಣಿಸುವ ಕಥೆ’ ಎಂದು ಕಾರ್ಯಕ್ರಮದ ನಿರೂಪಕರು ಬಾಯಿ ಬಿಟ್ಟಿದ್ದರು. ‘ಸುವ್ವಿ’ ಅಂದರೆ ಸುವರ್ಣ ಎನ್ನುವ ಹೆಸರಿನ ಹ್ರಸ್ವ ರೂಪವಂತೆ.

ನಟ ಎಂ.ಡಿ. ಕೌಶಿಕ್ ಬಹುದಿನಗಳ ನಂತರ ‘ಸುವ್ವಿ’ ಮೂಲಕ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಇತ್ತೀಚೆಗೆ ಚಿತ್ರರಂಗದ ಸಂಪರ್ಕ ಕಡಿಮೆ ಇತ್ತು. ಈಗ ಈ ಚಿತ್ರತಂಡ ಹುಚ್ಚು ಹತ್ತಿಸಿದೆ. ಮುಂದಿನ ದಿನಗಳಲ್ಲಿ ತೆರೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುವೆ’ ಎಂದು ಕೌಶಿಕ್‌ ಹೇಳಿದರು. ನಾಯಕಿ ಮಾನಸಿ ತಮಗೆ ಈ ಚಿತ್ರದಲ್ಲಿ ಅವಕಾಶ ಕೊಟ್ಟ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು. ರಮ್ಯಾ ಎನ್ನುವ ಮತ್ತೊಬ್ಬ ನಟಿ ‘ಸುವ್ವಿ’ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾಗುತ್ತಿದ್ದಾರೆ.

ಪದ್ಮನಾಭರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದು ವಿಲನ್ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಅವರು ರವಿಚಂದ್ರನ್ ಅಭಿಮಾನಿಯಂತೆ. ಆಡಿಯೊ ಹಕ್ಕುಗಳನ್ನು ಪಡೆದಿರುವ ಲಹರಿ ‘ವೇಲು’, ಸಂಗೀತ ನಿರ್ದೇಶಕ ರಾಜಾ ಭಾಸ್ಕರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. 40ರಿಂದ 50ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆದಿದೆಯಂತೆ.

Write A Comment