ಮನೋರಂಜನೆ

ಬೆಳ್ಳಿತೆರೆಯ ಹೊನ್ನಕಳಸ ಹೊನ್ನಪ್ಪ ಭಾಗವತರ್: ನೂರರ ನೆನಪು

Pinterest LinkedIn Tumblr

honnappa

ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದ ಮಹನೀಯರಲ್ಲಿ ಹೊನ್ನಪ್ಪ ಭಾಗವತರ್ ಪ್ರಮುಖರು. ನಟ, ನಿರ್ದೇಶಕ, ನಿರ್ಮಾಪಕ, ಗಾಯಕ, ಸಂಗೀತ ಸಂಯೋಜಕರಾಗಿ ಅವರು ಸಿನಿಮಾದ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದವರು. ಹೊನ್ನಪ್ಪ ಭಾಗವತರ್ ಜನ್ಮ ಶತಮಾನೋತ್ಸವದ ಅಂಗವಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಇದೇ 17 ಮತ್ತು 18ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಂಗಳೂರು ಬಾದಾಮಿ ಹೌಸ್‌ನ ಪ್ರಿಯದರ್ಶಿನಿ ಚಿತ್ರಮಂದಿರದಲ್ಲಿ ಹೊನ್ನಪ್ಪನವರ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಶನಿವಾರದಂದು ನಡೆಯುವ ವಿಚಾರ ಸಂಕಿರಣದಲ್ಲಿ ಚಿತ್ರೋದ್ಯಮದ ಹಿರಿಯರು ಪಾಲ್ಗೊಳ್ಳಲಿದ್ದಾರೆ.

* ಪ್ರಕಾಶ್ ಎಚ್.ಮಲ್ಲಂಡಹಳ್ಳಿ
‘ಇದ ನೋಡಿತ್ತಲೆ ಕಾಂಬುದು ಮಣಿಪುರಂ…’ ಗೀತೆಯನ್ನು ಹಾಡುತ್ತಲೇ ಅಭಿನಯವಿತ್ತ ಹೊನ್ನಪ್ಪ ಭಾಗವತರ್ ‘ಸುಭದ್ರಾ’ (1941) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ರಂಗಭೂಮಿ ಹಾಗೂ ಶಾಸ್ತ್ರೀಯ ಸಂಗೀತ ಹಿನ್ನೆಲೆಯ ಹೊನ್ನಪ್ಪ ಮೊದಲಿಗೆ ಕಾಣಿಸಿಕೊಂಡಿದ್ದು ತಮಿಳು ಚಿತ್ರಗಳಲ್ಲಿ. ಬಳಿಕ ಕನ್ನಡಕ್ಕೆ ಬಂದಿದ್ದು ಗುಬ್ಬಿ ವೀರಣ್ಣನವರು ತೆರೆಗಿತ್ತ ‘ಸುಭದ್ರಾ’ ಚಿತ್ರದ ಮೂಲಕ. ಸುಭದ್ರೆಯೊಡನೆ ಸರಸವಾಡುವ ಅರ್ಜುನನ ಪಾತ್ರದಲ್ಲಿ ಪ್ರೇಕ್ಷಕರನ್ನು ಸೆಳೆದ ಅವರು ಮುಂದೆ ತಾವೇ ಚಿತ್ರನಿರ್ಮಾಣಕ್ಕೂ ಕೈಹಾಕಿದರು.

ಭಕ್ತಿ ಪಂಥದ ಮುಂದಾಳುಗಳನ್ನು ರಂಗಭೂಮಿಯಲ್ಲಿ ಜನಪ್ರಿಯಗೊಳಿಸಿದ್ದವರೇ ಚಲನಚಿತ್ರಗಳಲ್ಲೂ ಅದೇ ಪಾತ್ರಗಳನ್ನು ತರುತ್ತಿದ್ದ ಕಾಲ ಅದು. ಪಂಢರಾಪುರದ ವಿಠಲನ ಅವಿಚ್ಛಿನ್ನ ಭಕ್ತನಾದ ಗೋರ ಕುಂಬಾರನ ಕಥೆಯನ್ನು ಹೊನ್ನಪ್ಪನವರು ತಮ್ಮದೇ ಆದ ಸುರಭಿ ಚಿತ್ರ ಲಾಂಛನದಲ್ಲಿ ತಯಾರಿಸಿ ತಾವೇ ಕುಂಬಾರನ ಪಾತ್ರದಲ್ಲಿ ಅಭಿನಯಿಸಿದರು. ತನ್ಮಯತೆಯಿಂದ ನಟಿಸಿದ ಹೊನ್ನಪ್ಪ ಚಿತ್ರ ಸಂಗೀತದಲ್ಲೂ ಆಸಕ್ತಿ ವಹಿಸಿ ಮಧುರ ಹಿನ್ನೆಲೆ ಸಂಗೀತ ಮತ್ತು ಹಾಡುಗಳಿಂದ ಸಂಗೀತಾಸಕ್ತರನ್ನು ಸೆಳೆದರು.

ಹನ್ನೆರಡನೆ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಬದುಕನ್ನು ಆಧರಿಸಿ ನಿರ್ಮಾಣಗೊಂಡ ‘ಜಗಜ್ಯೋತಿ ಬಸವೇಶ್ವರ’ ಚಿತ್ರದಲ್ಲಿ ಹೊನ್ನಪ್ಪ ಭಾಗವತರು ಬಸವಣ್ಣನವರ ಪಾತ್ರದಲ್ಲಿ ಅಭಿನಯಿಸಿದ್ದು ಪ್ರೇಕ್ಷಕರ ಮನಸ್ಸಿನಲ್ಲುಳಿಯಿತು. ವಚನಗಳನ್ನು ಹಾಡಿ ಅರಿತಿದ್ದ ಹೊನ್ನಪ್ಪ, ಬಸವಣ್ಣನವರ ಭಕ್ತಿ ಭಾವನೆಗಳನ್ನು ತಮ್ಮ ಅದ್ಭುತ ಅಭಿನಯದ ಮೂಲಕ ನೋಡುಗರಿಗೆ ಉಣಬಡಿಸಿದರು. ಈ ಚಿತ್ರದಲ್ಲಿ ಡಾ.ರಾಜಕುಮಾರ್ ಬಿಜ್ಜಳನ ಪಾತ್ರ ನಿರ್ವಹಿಸಿದ್ದರು. ಕವಿ ಸಾರ್ವಭೌಮ ಕಾಳಿದಾಸ ಶತಮಾನಗಳಿಂದ ಭಾರತೀಯ ಸಾರಸ್ವತ ಲೋಕವನ್ನು ಪ್ರಭಾವಿಸುತ್ತಾ ಬಂದವರು. ಜನಮನದಲ್ಲಿ ಹಾಸು ಹೊಕ್ಕಾಗಿರುವ ಕವಿ. ಇವರ ಪಾತ್ರವನ್ನು ಕನ್ನಡ ಚಿತ್ರಲೋಕಕ್ಕೆ ಪರಿಚಯಿಸಿದವರಲ್ಲಿ ಹೊನ್ನಪ್ಪ ಮೊದಲಿಗರು. ಕರ್ನಾಟಕ ಸಂಗೀತದಲ್ಲಿ ಪರಿಣಿತರಾಗಿದ್ದ ಭಾಗವತರು ‘ಕಾಳಿದಾಸ’ ಚಿತ್ರಕ್ಕೆ ತಾವೇ ಸಂಗೀತ ನಿರ್ದೇಶನ ಮಾಡಿದರು. ಕವಿಯ ಜೀವನ ಕಥೆಯನ್ನು ಮಧುರ ಸಂಗೀತದ ಮೂಲಕ ಅನಾವರಣಗೊಳಿಸಿದ ಹೊನ್ನಪ್ಪನವರು ‘ಕಾಳಿದಾಸ’ ಚಿತ್ರದ ಮೂಲಕ ಪ್ರತಿಭಾನ್ವಿತ ಬಿ.ಸರೋಜಾದೇವಿ ಅವರಿಗೆ ವೇದಿಕೆ ಒದಗಿಸಿಕೊಟ್ಟರು.

ಬೇರೆಯವರ ಚಿತ್ರಗಳಲ್ಲಿ ಅಭಿನಯಿಸುವಾಗ ಇರುವ ಇತಿಮಿತಿಗಳ ಅರಿವು ಹೊನ್ನಪ್ಪನವರಿಗಿತ್ತು. ಮುಂದೆ ತಮ್ಮ ಮಹತ್ವಾಕಾಂಕ್ಷೆಯ ಚಿತ್ರಗಳನ್ನು ತಾವೇ ತಯಾರಿಸುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು ಬೆಳ್ಳಿತೆರೆಗೆ ಉತ್ತಮ ಚಿತ್ರಗಳನ್ನು ಕೊಟ್ಟರು. ಸಾಕಷ್ಟು ಅಡೆತಡೆಗಳ ನಡುವೆಯೂ ಉತ್ತಮ ಚಿತ್ರಗಳನ್ನು ಕೊಟ್ಟ ಭಾಗವತರು ಅದೇ ಹಾದಿಯಲ್ಲಿ ಬಹಳ ದಿನ ಸಾಗಲಾಗಲಿಲ್ಲ. ‘ಹೇಮರೆಡ್ಡಿ ಮಲ್ಲಮ್ಮ’, ‘ಪಂಚರತ್ನ’ ಚಿತ್ರಗಳಲ್ಲಿ ಅಭಿನಯಿಸಿದ ಅವರು ತಮ್ಮ ಪಾತ್ರಗಳ ಗೀತೆಗಳಿಗೆ ತಾವೇ ಧ್ವನಿಯಾದರು. ಕರ್ನಾಟಕ ಸಂಗೀತದ ರಾಗಗಳನ್ನು ಉಪಯೋಗಿಸಿದ್ದು ಇವರ ಮತ್ತೊಂದು ವಿಶೇಷ. ಹೀಗಾಗಿ ಅವರು ಹಾಡಿದ ಗೀತೆಗಳು, ನಿರ್ದೇಶಿಸಿದ ಚಿತ್ರಗೀತೆಗಳು ಸಂಗೀತ ಪ್ರಧಾನವಾಗಿದ್ದು ಕೇಳುಗರಿಗೆ ಹೊಸ ಅನುಭವ ಕೊಟ್ಟವು.

ಭಜನಾ ಮಂದಿರದಲ್ಲಿ ಎಳೆಯ ವಯಸ್ಸಿನಿಂದಲೇ ಹಾಡುತ್ತಿದ್ದ ಹೊನ್ನಪ್ಪ ಸಾಂಪ್ರದಾಯಿಕ ಸಂಗೀತ ಕಲಿತು ಕರ್ನಾಟಕ ಸಂಗೀತದಲ್ಲಿ ಹೆಸರು ಮಾಡಿದರು. ಕರ್ನಾಟಕ, ತಮಿಳುನಾಡಿನಲ್ಲಿ ಸ್ವತಂತ್ರ ಕಚೇರಿಗಳನ್ನು ನೀಡುತ್ತಾ ಪ್ರತಿಷ್ಠಿತ ಸಂಗೀತ ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಿದ್ದವರು ಕ್ರಮೇಣ ರಂಗಭೂಮಿ ಪ್ರವೇಶಿಸಿದರು. ಗುಬ್ಬಿ ಕಂಪನಿಯ ಪ್ರಮುಖ ನಟರೆನ್ನಿಸಿಕೊಂಡು ತಮಿಳು ಚಿತ್ರಗಳಲ್ಲೂ ಹೆಜ್ಜೆ ಗುರುತು ಮೂಡಿಸಿದ ಭಾಗವತರು ಕೀರ್ತನೆಗಳನ್ನು ರಚಿಸುವಲ್ಲಿ ನಿಷ್ಣಾತರಾಗಿದ್ದು ಅವರ ಕೀರ್ತನೆ ಸಂಗ್ರಹದ ಕೃತಿ ‘ಓಂಕಾರ ನಾದ ಸುಧಾ’ ಪ್ರಕಟವಾಯಿತು.

ಸಂಗೀತ ಕ್ಷೇತ್ರದ ಸಾಧನೆಗಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ ಪಡೆದ ಹೊನ್ನಪ್ಪ ಭಾಗವತರು ತಮ್ಮ ನಿರ್ಮಾಣದ ಚಲನಚಿತ್ರಗಳಿಗೆ ಕೇಂದ್ರ ಸರಕಾರದ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿದರು. ಸಂಗೀತದ ತಳಹದಿಯಲ್ಲಿ ಸಾಗಿದ ಹೊನ್ನಪ್ಪನವರು ಗಾಯನ, ಅಭಿನಯ, ನಾಟಕ ಕಂಪನಿ ಸ್ಥಾಪನೆ, ಕೀರ್ತನೆಗಳ ರಚನೆ, ಸಾಮಾಜಿಕ ಸೇವಾ ಸಂಘಗಳಿಗೆ ಚಾಲನೆ ಕೊಟ್ಟು ಮುನ್ನಡೆಸಿದರು. ಈ ಮೂಲಕ ಕನ್ನಡ ಸಿನಿಮಾ, ರಂಗಭೂಮಿ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು.

Write A Comment