ಚೆನ್ನೈ: 10 ಕೋಟಿ ರುಪಾಯಿಗಳನ್ನು ಠೇವಣಿ ಇಟ್ಟ ಬಳಿಕ ಲಿಂಗಾ ಚಿತ್ರವನ್ನು ಬಿಡುಗಡೆ ಮಾಡುವಂತೆ ನಿರ್ಮಾಪಕರಿಗೆ ಮಧುರೈ ನ್ಯಾಯಾಲಯ ಸೂಚಿಸಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಲಿಂಗಾ’ ಚಿತ್ರಕ್ಕಿದ್ದ ಅಡಚಣೆ ಬಹುತೇಕ ನಿವಾರಣೆಯಾಗಿದ್ದು, 10 ಕೋಟಿ ರು. ಠೇವಣಿ ಇಟ್ಟು ಚಿತ್ರವನ್ನು ಬಿಡುಗಡೆ ಮಾಡಿ ಎಂದು ಮದ್ರಾಸ್ನಲ್ಲಿರುವ ಮಧುರೈ ಪೀಠ ಆದೇಶ ನೀಡಿದೆ. ಈ ಹತ್ತು ಕೋಟಿಯ ಪೈಕಿ 5 ಕೋಟಿ ನಗದು ಮತ್ತು 5 ಕೋಟಿ ರುಗಳ ಬ್ಯಾಂಕ್ ಗ್ಯಾರಂಟಿ ನೀಡಬೇಕು. ಅಲ್ಲದೆ ನಾಳೆ ಮಧ್ಯಾಹ್ನ 12 ಗಂಟೆಯ ಒಳಗೇ ಈ ಕಾರ್ಯವನ್ನು ಪೂರ್ಣಗೊಳಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ.
ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಲಿಂಗಾ ಚಿತ್ರವನ್ನು ಖ್ಯಾತ ನಿರ್ದೇಶಕ ಕೆ.ಎಸ್.ರವಿ ಕುಮಾರ್ ಅವರು ನಿರ್ದೇಶಿಸುತ್ತಿದ್ದು, ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದರು. ಆದರೆ ಟ್ರೇಲರ್ ಬಿಡುಗಡೆಯ ಮುನ್ನ ನಿದೇರ್ಶಶಕ ರವಿರತ್ನಂ ಎಂಬುವವರು ಲಿಂಗಾ ಚಿತ್ರದ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ‘ಲಿಂಗಾ ಚಿತ್ರದ ಕಥೆಯನ್ನು 2013ರಲ್ಲಿ ಬಿಡುಗಡೆಯಾಗಿದ್ದ ತಮ್ಮ ಮುಲ್ಲೈವಾನಂ 999 ಚಿತ್ರದಿಂದ ಕದಿಯಲಾಗಿದೆ. ಹೀಗಾಗಿ ಚಿತ್ರವನ್ನು ಬಿಡುಗಡೆ ಮಾಡದಂತೆ ನಿರ್ದೇಶಕ ರವಿರತ್ನಂ ಮಧುರೈ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಧುರೈ ನ್ಯಾಯಾಲಯ 10 ಕೋಟಿ ರುಪಾಯಿ ಠೇವಣಿ ಇಟ್ಟು ಚಿತ್ರ ಬಿಡುಗಡೆ ಮಾಡುವಂತೆ ಚಿತ್ರದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರಿಗೆ ಸೂಚಿಸಿದೆ. ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರೂ ಕೂಡ ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಠೇವಣಿ ಇಡುವುದಾಗಿ ಹೇಳಿದ್ದಾರೆ.
ಒಟ್ಟಾರೆ ಚಿತ್ರರಂಗ ವಿವಾದವನ್ನು ಬಿಟ್ಟರೂ ವಿವಾದಗಳು ವಿವಾದವನ್ನು ಬಿಡುತ್ತಿಲ್ಲ. ಈ ಹಿಂದೆ ವಿಜಯ್ ಅಭಿನಯದ ಕತ್ತಿ ಚಿತ್ರದ ಬಿಡುಗಡೆ ಸಂದರ್ಭದಲ್ಲಿಯೂ ಇಂತಹುದೇ ವಿವಾದ ಸೃಷ್ಟಿಯಾಗಿತ್ತು. ಆಗ ಗೋಪಿ ಎನ್ನುವವರು ಕತ್ತಿ ಚಿತ್ರದ ಕಥೆ ತಮ್ಮದೆಂದು ವಾದಿಸಿ ಚಿತ್ರತಂಡದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಗೋಪಿ ಅವರ ಈ ದೂರಿನ ಪ್ರಕರಣ ತಮಿಳುನಾಡಿನಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿತ್ತು. ಆದರೆ ಆಶ್ಚರ್ಯಕರ ಎನ್ನುವಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ಹೊತ್ತಿಗೇ ಗೋಪಿ ತಮ್ಮ ದೂರನ್ನು ಹಿಂಪಡೆದಿದ್ದರು.