ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಏಳನೇ ಅಂತರರಾಷ್ಟ್ರೀಯ ಸಿನಿಮೋತ್ಸವ ಐದನೇ ದಿನಕ್ಕೆ ಕಾಲಿಟ್ಟಿದ್ದು ಉತ್ತಮ ಸ್ಪಂದನ ವ್ಯಕ್ತವಾಗಿದೆ. ಸಿನಿಮೋತ್ಸವಗಳು ‘ಪ್ರಯೋಗಗಳ ಪ್ರದರ್ಶನ ಪೆಟ್ಟಿಗೆ’. ಗಲ್ಲಾಪೆಟ್ಟಿಗೆಯಲ್ಲಿ ಗೆದ್ದ ಚಿತ್ರಗಳು ಪ್ರದರ್ಶನವಾಗುವುದಕ್ಕಿಂತ ಪ್ರಮುಖವಾಗಿ ಆಯಾ ದೇಶಗಳಲ್ಲಾದ ಪ್ರಯೋಗಾತ್ಮಕ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಕಥನ ನಿರ್ವಹಣೆಯ ದೃಷ್ಟಿಯಲ್ಲಿ ಹೊಸ ಜಗತ್ತನ್ನು ತೋರಿಸುವ ಸಿನಿಮಾಗಳು ಇಲ್ಲಿ ಪ್ರದರ್ಶನವಾಗುವುದರಿಂದ ಸ್ಥಳೀಯ ಚಿತ್ರರಂಗದ ಬೆಳವಣಿಗೆಗೆ ಪೂರಕವಾಗುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದರೆ ಬೆಂಗಳೂರು ಸಿನಿಮೋತ್ಸವ ಆಶಾದಾಯಕವಾಗಿ ಕಾಣಿಸುತ್ತಿದೆ. ಚಿತ್ರರಂಗದಲ್ಲಿ ಭವಿಷ್ಯ ಹುಡುಕುತ್ತಿರುವ ಯುವ ತಂತ್ರಜ್ಞರು, ಸಿನಿಮಾ ನಿರ್ಮಾತೃಗಳು, ವಿದ್ಯಾರ್ಥಿಗಳು, ಸದಭಿರುಚಿಯ ಸಿನಿಮಾಸಕ್ತರು, ‘ಉತ್ಸವ’ಕ್ಕೆ ಹೆಚ್ಚು ಸ್ಪಂದಿಸುತ್ತಿದ್ದಾರೆ.
ಪ್ರಮುಖವಾಗಿ ಇರಾನ್, ಕೊರಿಯಾ ಚಿತ್ರಗಳ ಮೇಲೆ ಯುವ ತಂತ್ರಜ್ಞರು ಗಮನ ಕೇಂದ್ರೀಕರಿಸಿದ್ದಾರೆ. ಸಿನಿಮೋತ್ಸವದ 11 ಪರದೆಗಳಲ್ಲಿ ಒಟ್ಟು 2,400 ಮಂದಿಗೆ ಪಾಲ್ಗೊಳ್ಳಲು ಅವಕಾಶವಿದೆ. ಕಳೆದ ಬಾರಿ 2,200 ಪಾಸುಗಳನ್ನು ವಿತರಿಸಲಾಗಿತ್ತು. ಈ ಬಾರಿ ಪಾಸುಗಳ ವಿತರಣೆಯನ್ನು ಮುಂಚಿತವಾಗಿ ಆರಂಭಿಸಿದ್ದರಿಂದ ಗರಿಷ್ಠ ಮಿತಿಯನ್ನು ಬಹುಬೇಗ ಮುಟ್ಟಲಾಗಿದೆ. ಉತ್ಸವಕ್ಕೆ ಚಾಲನೆ ದೊರೆತ ನಂತರವೂ ಪಾಸುಗಳಿಗೆ ಬೇಡಿಕೆ ವ್ಯಕ್ತವಾಗಿದೆ.
ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಆನ್ಲೈನ್ನಲ್ಲಿ ಹೆಚ್ಚು ಪಾಸುಗಳು ವಿತರಣೆಯಾಗಿವೆ. 1,100 ಪ್ರತಿನಿಧಿಗಳು, 560 ವಿದ್ಯಾರ್ಥಿಗಳು ಹಾಗೂ ಸಿನಿಮಾರಂಗದವರಿಗೆಂದು 500 ಪಾಸುಗಳನ್ನು ಕೊಡಲಾಗಿದೆ. ಹಂಗೆರಿ, ಬಾಂಗ್ಲಾ, ಜರ್ಮನಿ ಸೇರಿದಂತೆ ವಿವಿಧ ದೇಶಗಳ 22 ಮಂದಿ ಅತಿಥಿಗಳು ಸಿನಿಮೋತ್ಸವಕ್ಕೆ ಸಾಕ್ಷಿಯಾಗಿದ್ದಾರೆ. ಸಿನಿಮಾ ನಿರ್ಮಾಪಕರು, ನಿರ್ದೇಶಕರು, ತೀರ್ಪುಗಾರರು ಸೇರಿದಂತೆ ಒಟ್ಟು 60 ಜನರು ಹೊರ ರಾಜ್ಯದಿಂದ ಪಾಲ್ಗೊಂಡಿದ್ದಾರೆ.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಸೇರಿದಂತೆ ಸಮಕಾಲೀನ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಜಾಗತಿಕ ಚಿತ್ರಗಳತ್ತ ಯುವ ಸಿನಿಮಾ ನಿರ್ಮಾತೃಗಳು ಹೆಚ್ಚು ನೋಟ ಹರಿಸಿದ್ದು, ಈ ಚಿತ್ರ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಯೆ ವ್ಯಕ್ತವಾಗಿದೆ. ಬಹುಶಃ ಚಳಿಯ ಕಾರಣಕ್ಕೆ ದಿನದ ಆರಂಭದ ಪ್ರದರ್ಶನ ಮತ್ತು ರಾತ್ರಿಯ ಪ್ರದರ್ಶನಗಳಿಗೆ ಜನಸಂದಣೆ ಕಡಿಮೆ ಇದೆ. ಉಳಿದಂತೆ ಮಧ್ಯಾಹ್ನ ಮತ್ತು ಸಂಜೆಯ ಪ್ರದರ್ಶನಗಳು ಸಂಘಟಕರ ನಿರೀಕ್ಷೆಯ ಮಟ್ಟದಲ್ಲಿದೆ.
ಸಿನಿಮೋತ್ಸವದಲ್ಲಿ ಚಿತ್ರಗಳನ್ನು ನೋಡುವುದಷ್ಟೇ ಅಲ್ಲದೆ ಕಿರುಚಿತ್ರ ನಿರ್ಮಾಣ, ಆನ್ಲೈನ್ನಲ್ಲಿ ಕನ್ನಡ ಚಲನಚಿತ್ರಗಳಿಗೆ ವೇದಿಕೆ, ಲಿಂಗ ತಾರತಮ್ಯ, ಸಿನಿಮಾ ಛಾಯಾಗ್ರಹಣ, ಸಂಕಲನ ಹೀಗೆ ವಿವಿಧ ತಂತ್ರಜ್ಞಾನ ಸಂಬಂಧಿ ವಿಷಯಗಳ ಮೇಲೆ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಚರ್ಚೆ, ಸಂವಾದ ಹಾಗೂ ಕಾರ್ಯಾಗಾರಗಳು ನಡೆಯುತ್ತಿರುವುದು ಯುವ ಸಿನಿಮಾ ಮೋಹಿಗಳಿಗೆ ಖುಷಿ ಮೂಡಿಸಿದೆ.
‘ಈಗಾಗಲೇ ಏಳು ಚಿತ್ರಗಳನ್ನು ನೋಡಿದ್ದೇನೆ. ಎಲ್ಲವೂ ಉತ್ತಮವಾಗಿವೆ.
ಮಹಿಳಾ ಶೋಷಣೆ, ಅದರ ವಿರುದ್ಧದ ಪ್ರತಿರೋಧ ತೋರುವ ದಕ್ಷಿಣ ಕೊರಿಯಾದ ‘ಬಿಡೆವಿಲ್ಡ್’ ಚಿತ್ರದ ಕಥನ ನಿರೂಪಣೆ ವಿಶಿಷ್ಟವಾಗಿ ಕಂಡಿತು. ಜಗತ್ತಿನ ಸಿನಿಮಾಗಳು ಒಂದೇ ಸೂರಿನಡಿ ನಮ್ಮ ತಂತ್ರಜ್ಞರಿಗೆ ಸಿಕ್ಕುವುದರಿಂದ ಅವರ ಆಲೋಚನಾ ಕ್ರಮದ ಬೆಳವಣಿಗೆಗೆ ನೆರವಾಗುತ್ತದೆ. ತಾಂತ್ರಿಕ ಅಂಶ, ಕಥೆಯ ನಿರೂಪಣೆ ಇತ್ಯಾದಿ ವಿಷಯಗಳನ್ನು ನಮ್ಮ ಚಿತ್ರಗಳ ಜತೆ ತುಲನೆ ಮಾಡುವ ಜತೆಗೇ ನಾವು ಯಾವ ರೀತಿ ಹೊಸದಾಗಿ ಸಿನಿಮಾಗಳ ಮೂಲಕ ಪ್ರತಿಕ್ರಿಯಿಸ-ಬಹುದು ಎನ್ನುವುದನ್ನು ಸಿನಿಮೋತ್ಸವ ಕಟ್ಟಿಕೊಟ್ಟಿದೆ’ ಎನ್ನುತ್ತಾರೆ ಸಹ ನಿರ್ದೇಶಕ ಚಂದ್ರಶೇಖರ್.
‘ಯುವಕರೇ ಹೆಚ್ಚು; ವಿದೇಶಿಯರ ಮೆಚ್ಚುಗೆ’
ವಿಶೇಷವಾಗಿ ಯುವಕರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರದರ್ಶನಗೊಳ್ಳುತ್ತಿರುವ ಸಿನಿಮಾಗಳ ಗುಣಮಟ್ಟದ ಬಗ್ಗೆ ಅತಿಥಿಗಳಿಂದ ಮತ್ತು ಸಿನಿಮಾಸಕ್ತರಿಂದ ಮೆಚ್ಚುಗೆ ಬಂದಿದೆ. ಅಂತರರಾಷ್ಟ್ರೀಯ ಸಿನಿಮಾಗಳನ್ನು ನೋಡುವುದಷ್ಟೇ ಅಲ್ಲದೇ ಅಲ್ಲಿ ಯಾವ ರೀತಿ ಬೆಳವಣಿಗೆಗಳು ನಡೆಯುತ್ತಿವೆ? ಅದಕ್ಕೆ ನಾವು ಯಾವ ರೀತಿ ಪ್ರತಿಕ್ರಿಯಿಸಬೇಕು ಎನ್ನುವ ದೃಷ್ಟಿಯಿಂದ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.
ಉತ್ಸವಕ್ಕೆ ವೆಚ್ಚ ಮಾಡಿರುವ ಹಣ ಅರ್ಥಪೂರ್ಣವಾಗಿ ಬಳಕೆಯಾಗುತ್ತಿದೆ. ಹೊಸತಲೆಮಾರಿನ ತಂತ್ರಜ್ಞರು ಸಿನಿಮೋತ್ಸವವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ವಿದೇಶಿ ಅತಿಥಿಗಳು ಕನ್ನಡ ಸಿನಿಮಾಗಳನ್ನು ಮೆಚ್ಚಿ ಮಾತನಾಡಿರುವುದು ಭವಿಷ್ಯದ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆ.
– ಎನ್.ಆರ್.ವಿಶುಕುಮಾರ್, ವಾರ್ತಾ ಇಲಾಖೆ ನಿರ್ದೇಶಕರು