ಹುಬ್ಬಳ್ಳಿ: ‘ಬೇಟಿ ಬಚಾವೋ, ಪಢಾವೋ’ (ಹೆಣ್ಣುಮಗು ರಕ್ಷಿಸಿ, ಓದಿಸಿ) ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಗುಜರಾತ್ನಲ್ಲಿ ಹೆಣ್ಣು ಭ್ರೂಣಹತ್ಯೆ ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗಿದೆ. ಆ ಕೆಲಸ ರಾಜ್ಯದಲ್ಲೂ ಆಗಬೇಕಿದೆ’ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಅಭಿಪ್ರಾಯಪಟ್ಟರು.
ಇಲ್ಲಿನ ದಿಗಂಬರ ಜೈನ ಬೋರ್ಡಿಂಗ್ನ ಶತಮಾನೋತ್ಸವದ ಅಂಗವಾಗಿ ಭಾನುವಾರ ನೂತನ ಸಭಾಭವನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಕಿವಿಮಾತು ಹೇಳಿದ ಅವರು, ಮಹಿಳೆಗೆ ಸಿಗುವ ಗೌರವ ಸಮಾಜವೊಂದರ ಯೋಗ್ಯತೆ ಬಿಂಬಿಸುತ್ತದೆ ಎಂದರು.
‘ಚಿಕ್ಕ ಸಮುದಾಯವಾದರೂ ಕಠಿಣ ಪರಿಶ್ರಮದಿಂದ ಪ್ರಭಾವಿಗಳಾಗಿದ್ದೀರಿ’ ಎಂದು ಜೈನ ಧರ್ಮೀಯರನ್ನು ಶ್ಲಾಘಿಸಿದ ರಾಜ್ಯಪಾಲರು, ‘ನಿಮ್ಮ ಬಳಿ ಹೆಚ್ಚು ಹಣ ಇದೆ, ಅದನ್ನು ಬಡವರ ಏಳಿಗೆಗೆ ಬಳಸಿ. ಹಕ್ಕಿ ನೀರು ಕುಡಿದ ಮಾತ್ರಕ್ಕೆ ನದಿಯೊಂದರ ನೀರು ಖಾಲಿಯಾಗುವುದಿಲ್ಲ. ಅದೇ ರೀತಿ ಬಡವರಿಗೆ ಹಣ ಖರ್ಚು ಮಾಡಿದರೆ ಸಂಪತ್ತು ಕರಗುವುದಿಲ್ಲ’ ಎಂದು ಸೂಚ್ಯವಾಗಿ ಹೇಳಿದರು. ಮಹಾವೀರರ ಆಶಯದಂತೆ ಹಣ ಶೇಖರಣೆಗಿಂತ ಚಾರಿತ್ರ್ಯ ಕಾಪಾಡಿಕೊಳ್ಳುವತ್ತ ಒತ್ತು ನೀಡಲು ಸಲಹೆ ನೀಡಿದರು.
ಜೈನರೇಕೆ ಶಾಂತ?
‘ಜೈನರು ಸದಾ ಶಾಂತವಾಗಿರಲು ಭಗವಂತ ಅವರ ಮಿದುಳಿನಲ್ಲಿ ರೆಫ್ರಿಜರೇಟರ್ ಇಟ್ಟು ಕಳುಹಿಸಿರುವುದೇ ಕಾರಣ ಎಂದು ಹಾಸ್ಯ ಚಟಾಕಿ ಹಾರಿಸಿದ ರಾಜ್ಯಪಾಲರು, ಮನಸ್ಸು ಶಾಂತವಾಗಿದ್ದರೆ ಕ್ರಿಯಾತ್ಮಕ ಚಟುವಟಿಕೆಗಳಿಗೆ ಪ್ರೇರಣೆಯಾಗುತ್ತದೆ. ಇದರಿಂದ ಸಹಜವಾಗಿಯೇ ಜೈನರು ಎಲ್ಲರಿಗಿಂತ ಬುದ್ಧಿವಂತರಾಗುತ್ತಾರೆ. ಕಂಪ್ಯೂಟರ್ಗೆ ಸಮನಾಗಿ ಯೋಚಿಸುತ್ತಾರೆ’ ಎಂದಾಗ ಸಭೆ ನಗೆಗಡಲಲ್ಲಿ ತೇಲಿತು.
ಪರಸ್ಪರ ಕಾಲೆಳೆದ ನಾಯಕರು…
ಮೈಸೂರು, ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ₨150 ಕೋಟಿ ನೀಡಿರುವುದನ್ನು ಸಮಾರಂಭದಲ್ಲಿ ಪ್ರಸ್ತಾಪಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ `ಶೆಟ್ಟರ್, ‘ಉತ್ತರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಬೇಡ. ಹುಬ್ಬಳ್ಳಿ–ಧಾರವಾಡ ಈ ಭಾಗದ ರಸ್ತೆಗಳ ಅಭಿವೃದ್ಧಿಗೂ ಹಣ ಕೊಡಲು ನಿಮ್ಮ ಸಿ.ಎಂಗೆ ಹೇಳಿ’ ಎಂದು ಸಭೆಯಲ್ಲಿದ್ದ ಸಚಿವ ಎಚ್.ಕೆ. ಪಾಟೀಲ ಅವರಿಗೆ ಕಟುಕಿದರು.
ಭಾಷಣದ ವೇಳೆ ಅದಕ್ಕೆ ಪ್ರತಿಕ್ರಿಯಿಸಿದ ಎಚ್.ಕೆ. ಪಾಟೀಲ, ‘ಬೆಳಗಾವಿ ಅಧಿವೇಶನ ಶಾಂತಿಯುತವಾಗಿ ನಡೆಸಲು ಶೆಟ್ಟರ್ ಅವಕಾಶ ಕೊಟ್ಟರೆ ಅವರ ಎಲ್ಲಾ ಬೇಡಿಕೆ ಈಡೇರಿಸಲಾಗುವುದು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಪ್ರಹ್ಲಾದ ಜೋಶಿ ಅವರ ಜವಾಬ್ದಾರಿಯೂ ಇದರಲ್ಲಿದೆ’ ಎಂದು ಟಾಂಗ್ ಕೊಟ್ಟರು.