ಹೊಸದಿಲ್ಲಿ, ಡಿ.3: ಏಷ್ಯನ್ ಗೇಮ್ಸ್ನಲ್ಲಿ ಪದಕ ನಿರಾಕರಿಸಿದ ಆರೋಪದಲ್ಲಿ ಬಾಕ್ಸಿಂಗ್ನಿಂದ ತಾತ್ಕಾಲಿಕವಾಗಿ ಅಮಾನತುಗೊಂಡಿರುವ ಭಾರತದ ಮಹಿಳಾ ಬಾಕ್ಸರ್ ಎಲ್.ಸರಿತಾ ದೇವಿ ಅವರ ವಿರುದ್ಧದ ಅಮಾನತು ಆದೇಶವನ್ನು ಹಿಂಪಡೆಯುವಂತೆ ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೊನೊವಾಲಾ ಎಐಬಿಎಗೆ ಆಗ್ರಹಿಸಿದ್ದಾರೆ.
ಈ ಸಂಬಂಧ ಎಐಬಿಎ ಅಧ್ಯಕ್ಷ ಡಾ.ಚಿಂಗ್ ಕುವೊ ವೂ ಅವರಿಗೆ ಪತ್ರ ಬರೆದಿರುವ ಸಚಿವ ಸರ್ಬಾನಂದ ಸೊನೊವಾಲಾ ‘‘ ಸರಿತಾ ದೇವಿ ಅವರು ಪ್ರತಿಭೆ, ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮದ ಮೂಲಕ ಬಾಕ್ಸಿಂಗ್ನಲ್ಲಿ ಸಾಧನೆ ಮಾಡಿದ್ದಾರೆ. ಅವರನ್ನು ಅಮಾನತುಗೊಳಿಸಿದರೆ, ಅದು ಸರಿತಾ ದೇವಿ ಅವರ ಬಾಕ್ಸಿಂಗ್ ಬದುಕಿನ ಮೇಲೆ ಹಾಗೂ ಸರಿತಾ ಅವರಿಂದ ಸ್ಫೂರ್ತಿ ಪಡೆದು ಬಾಕ್ಸಿಂಗ್ನಲ್ಲಿ ಸಾಧನೆ ಮಾಡಲು ತಯಾರಿ ನಡೆಸುತ್ತಿರುವ ಉದಯೋನ್ಮುಖ ಬಾಕ್ಸರ್ಗಳ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರಲಿದೆ ’’ ಎಂದು ಹೇಳಿದ್ದಾರೆ.
ಭಾರತದಲ್ಲಿ ಬಾಕ್ಸಿಂಗ್ನ ಅಭಿವೃದ್ಧಿಗೆ ಉತ್ತೇಜನ ನೀಡಲು ಸರಕಾರ ಯೋಚಿಸುತ್ತಿದ್ದು, ಈ ಕಾರಣದಿಂದಾಗಿ ಸರಿತಾ ದೇವಿ ವಿರುದ್ಧ ಪದಕ ವಾಪಸು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳದಂತೆ ಸಚಿವ ಸರ್ಬಾನಂದ ವಿನಂತಿಸಿದ್ದಾರೆ.
ಈ ಪ್ರಕರಣದಲ್ಲಿ ಸರಿತಾ ದೇವಿ ಜೊತೆಗೆ ಭಾರತದ ಪುರುಷರ ರಾಷ್ಟ್ರೀಯ ತಂಡದ ಕೋಚ್ ಗುರುಬಕ್ಷ್ ಸಿಂಗ್ ಸಂಧು ಸೇರಿದಂತೆ ಮೂವರನ್ನು ಎಐಬಿಎ ತಾತ್ಕಾಲಿಕವಾಗಿ ಅಮಾನತು ಮಾಡಿತ್ತು.
