ಹೊಸದಿಲ್ಲಿ, ನ.25: ಐಪಿಎಲ್ನ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮಂಗಳವಾರ ಯಾವುದೇ ನಿರ್ಧಾರ ಕೈಗೊಳ್ಳದೆ ವಿಚಾರಣೆಯನ್ನು ನ.27ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ಮುಕುಲ್ ಮುಗ್ದಲ್ ತನಿಖಾ ಸಮಿತಿಯ ವರದಿಯಲ್ಲಿ ‘ನಿರ್ದೋಷಿ’ ಎಂದು ಹೇಳಿರುವ ಹಿನ್ನೆಲೆಯಲ್ಲಿ ತನಗೆ ಬಿಸಿಸಿಐನ ಅಧ್ಯಕ್ಷತೆಗೆ ಎರಡನೆ ಅವಧಿಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಮಾಡಿರುವ ಮನವಿ ಹಿನ್ನೆಲೆಯಲ್ಲಿ ಸೋಮವಾರ ನಡೆದ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ನಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ವಿಚಾರದಲ್ಲಿ ನ್ಯಾಯಾಲಯವು ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ.
ಇದೇ ವೇಳೆ ಬಿಹಾರ್ ಕ್ರಿಕೆಟ್ ಸಂಸ್ಥೆಯ ಪರ ವಕೀಲ ಹರೀಶ್ ಸಾಳ್ವೆ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ ಬಿಸಿಸಿಐನ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರನ್ನು ನಿಯಮ 6ರಂತೆ 2ರಿಂದ 5 ವರ್ಷಗಳ ತನಕ ಬಿಸಿಸಿಐನಿಂದ ಹೊರಗಿಡುವಂತೆ ಮನವಿ ಮಾಡಿದರು.
ನ್ಯಾಯಮೂರ್ತಿ ಮುಕುಲ್ ಮುದ್ಗಲ್ ತನಿಖಾ ವರದಿಯಲ್ಲಿ ದಾಖಲಾಗಿರುವ ಆಟಗಾರರ ಹೆಸರನ್ನು ಬಹಿರಂಗ ಪಡಿಸುವಂತೆ ಸಾಳ್ವೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.
ಮೋದಿಯ ಬಾಂಬ್: ಐಪಿಎಲ್ನ ಉಚ್ಛಾಟಿತ ಆಯುಕ್ತ ಲಲಿತ್ ಮೋದಿ ಸೋಮವಾರ ಸಿಎನ್ಎನ್-ಐಬಿಎನ್ಗೆ ಹೇಳಿಕೆ ನೀಡಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಬಿಸಿಸಿಐನ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಹಾಗೂ ಇತರರ ವಿರುದ್ಧ ನ್ಯಾಯಾಲಯದಲ್ಲಿ ಸಮರ ಸಾರಿರುವ ಬಿಹಾರ ಕ್ರಿಕೆಟ್ ಸಂಸ್ಥೆಯ (ಸಿಎಬಿ) ಆದಿತ್ಯ ವರ್ಮಾ ಅವರ ಹೋರಾಟಕ್ಕೆ ತಾನು ಆರ್ಥಿಕ ನೆರವು ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ದೇಶದ ಕ್ರಿಕೆಟ್ನ್ನು ಸ್ವಚ್ಛಗೊಳಿಸಲು ಸುಪ್ರೀಂ ಕೋರ್ಟ್ನ ಮಧ್ಯಪ್ರವೇಶದಿಂದಾಗಿ ಮಾತ್ರ ಸಾಧ್ಯ ಎಂದು ಮೋದಿ ಹೇಳಿದ್ದಾರೆ.
http://vbnewsonline.com