ಮುಂಬೈ: ಮಳೆಯ ಪ್ರವಾಹಕ್ಕೆ ಸಿಲುಕಿದ್ದ ಮಹಾಲಕ್ಷ್ಮಿ ಎಕ್ಸ್ಪ್ರೆಸ್ ರೈಲಿನಲ್ಲಿ ಸಿಲುಕಿದ್ದ 1,050 ಜನ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಎನ್ಡಿಆರ್ಎಫ್ ಮತ್ತು ಪಶ್ಚಿಮ ರೈಲ್ವೆ ತಂಡ ಯಶಸ್ವಿಯಾಗಿದೆ. ಸತತ 17ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯ ನಡೆದಿದ್ದು, ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಮುಂಬೈ-ಕೊಲ್ಹಾಪುರ ಮಧ್ಯ ಸಂಚರಿಸುವ ಮಹಾಲಕ್ಷ್ಮೀ ಎಕ್ಸ್ಪ್ರೆಸ್ ರೈಲುಗಳು ಪ್ರವಾಹದಲ್ಲಿ ಸಿಲುಕಿದ್ದು, ರೈಲಿನಲ್ಲಿದ್ದ ಪ್ರಯಾಣಿಕರು ಕಂಗಾಲಾಗಿದ್ದರು. ಬದ್ಲಾಪುರದಲ್ಲಿ ನರೆ ಹಾವಳಿಯಿಂದ ಮಾರ್ಗಮಧ್ಯೆದಲ್ಲಿಯೇ ರೈಲು ಸ್ಥಗಿತಗೊಂಡಿತು.
ಸುತ್ತಲೂ ನೀರಿನ ಮಧ್ಯೆ ಸಿಲುಕಿದ ಪ್ರಯಾಣಿಕರು ಕಂಗಾಲಾಗಿದ್ದು, ಅವರ ರಕ್ಷಣೆಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿತು. ಎನ್ಡಿಆರ್ಎಫ್, ನೌಕದಳ ಹಾಗೂ ರೈಲ್ವೆ ಅಧಿಕಾರಿಗಳ ಸಹಾಯದಿಂದ ಪ್ರಯಾಣಿಕರು ಸುರಕ್ಷಾಗೊಳಿಸಲಾಗಿದ್ದು ಅವರನ್ನು ಕಲ್ಯಾಣದಿಂದ ಕೊಲ್ಹಾಪುರಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್ಡಿಆರ್ಎಫ್ನ 6 ತುಕಡಿ , ನೌಕದಳ ಹಾಗೂ ಅಗ್ನಿ ಶಾಮಕದಳ ಸ್ಥಳೀಯ ಗ್ರಾಮಸ್ಥರು ಈ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಈ ರಕ್ಷಣಾ ಕಾರ್ಯಚರಣೆಯಲ್ಲಿ 9 ತಿಂಗಳ ಗರ್ಭಿಣಿ ಹಾಗೂ ಒಂದು ತಿಂಗಳ ಮಗುವನ್ನು ರಕ್ಷಿಸಲಾಗಿದೆ.
ಒಂದು ತಿಂಗಳಿನಿಂದ ಸುರಿಯುತ್ತಿರುವ ಭಾರೀ ಮಳೆಗೆ ವಾಣಿಜ್ಯ ನಗರಿ ಜನರು ತತ್ತರಿಸಿಹೋಗಿದ್ದಾರೆ. ಹಲವು ಪ್ರದೇಶಗಳು ಪ್ರವಾಹಕ್ಕೆ ಒಳಗಾಗಿದ್ದು, ಮುಂದಿನ 24 ಗಂಟೆಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರೀ ಮಳೆಯಿಂದಾಗಿ ಹವಾಮಾನ ವೈಪರೀತ್ಯ ಉಂಟಾಗಿದ್ದು, 11 ವಿಮಾನಗಳ ಹಾರಾಟ ರದ್ದು ಮಾಡಲಾಗಿದ್ದು, 17 ವಿಮಾನಗಳ ಮಾರ್ಗವನ್ನು ವ್ಯತ್ಯಾಯವಾಗಿದೆ. ರೈಲ್ವೆ ಹಳಿಗಳಲ್ಲಿ ನೀರು ನಿಂತ ಪರಿಣಾಮ 7 ರೈಲುಗಳ ಸಂಚಾರ ರದ್ದಾಗಿದ್ದು, 9 ರೈಲುಗಳ ಮಾರ್ಗ ಬದಲಾಯಿಸಲಾಗಿದೆ.
Comments are closed.