ಮುಂಬೈ: ಟಾಟಾ ಸಂಸ್ಥೆಯಿಂದ ವಜಾಗೊಂಡ ಅಧ್ಯಕ್ಷ ಸೈರಸ್ ಮಿಸ್ತ್ರಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಟಾಟಾ ಸನ್ಸ್ ಸಂಸ್ಥೆ, ಸೈರಸ್ ಮಿಸ್ತ್ರಿ ಆರೋಪ ಆಧಾರ ರಹಿತವಾದದ್ದು ಮತ್ತು ದುರುದ್ದೇಶಪೂರಿತವಾದದ್ದು ಎಂದು ಹೇಳಿದೆ.
ಟಾಟಾ ಸಂಸ್ಥೆಯ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಮುಖ್ಯಸ್ಥನಾಗಿ ಕಂಪನಿಯನ್ನು ಬದಲಾವಣೆ ಮಾಡಲು ಹೊರಟಿದ್ದೆ. ಆದರೆ ರತನ್ ಟಾಟಾ ಅವರು ಪದೇ ಪದೇ ಮೂಗುತೂರಿಸುವ ಮೂಲಕ ನನ್ನನ್ನು ನಿಷ್ಕ್ರಿಯರನ್ನಾಗಿಸುತ್ತಿದ್ದರು ಎಂದು ಮಿಸ್ತ್ರಿ ಆಪಾದನೆ ಮಾಡಿದ್ದಾರೆ.
ಅದೇ ವೇಳೆ ತನಗೆ ಸಮರ್ಥನೆ ಮಾಡಿಕೊಳ್ಳಲು ಅವಕಾಶವನ್ನೂ ನೀಡದೇ ವಜಾಗೊಳಿಸಲಾಗಿದೆ. ಈ ವಿಚಾರದಲ್ಲಿ ಟಾಟಾ ಕಂಪನಿ ತನ್ನ ಘನತೆಗೆ ತಕ್ಕಂತೆ ನಡೆದುಕೊಂಡಿಲ್ಲ. ನನ್ನನ್ನು ವಜಾಗೊಳಿಸಿದ ರೀತಿಯಿಂದ ದಿಗ್ಭ್ರಮೆಯಾಗಿದೆ ಎಂದು ಮಿಸ್ತ್ರಿ ನಿರ್ದೇಶಕ ಮಂಡಳಿಗೆ ಇ-ಮೇಲ್ ರವಾನಿಸಿದ್ದರು.
ಆದಾಗ್ಯೂ, ಟಾಟಾ ಕಂಪನಿಯಿಂದ ವಜಾಗೊಂಡ ನಂತರ ಮಿಸ್ತ್ರಿ ಮಾಡಿರುವ ಆರೋಪಗಳ ಬಗ್ಗೆ ವಿವರಣೆ ನೀಡಬೇಕು ಎಂದು ಮುಂಬೈ ಷೇರು ಮಾರುಕಟ್ಟೆ ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ) ಟಾಟಾ ಕಂಪನಿಗೆ ಒತ್ತಾಯಿಸಿದ್ದವು.
ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಾಟಾ ಸನ್ಸ್, ಮಿಸ್ತ್ರಿಯವರ ಆರೋಪಗಳು ಸತ್ಯಕ್ಕೆ ದೂರವಾದುದು. ಸಮಯ ಬಂದಾಗ ನಾವು ತಕ್ಕ ದಾಖಲೆಗಳನ್ನು ಬಹಿರಂಗ ಪಡಿಸುತ್ತೇವೆ ಎಂದಿದೆ.
Comments are closed.