ಮುಂಬಯಿ: ಹಾಜಿ ಅಲಿ ದರ್ಗಾಗೆ ಮಹಿಳೆಯರಿಗೆ ಪ್ರವೇಶ ನೀಡುವಂತೆ ಕೋರಿ ನಡೆಸುತ್ತಿರುವ ಪ್ರತಿಭಟನೆಗೆ ಬಾಲಿವುಡ್ ನಟರಾದ ಆಮೀರ್ ಖಾನ್, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಬೆಂಬಲ ನೀಡಬೇಕು ಎಂದು ಭೂಮಾತಾ ರಣರಾಗಿಣಿ ಬ್ರಿಗೇಡ್ನ ಅಧ್ಯಕ್ಷೆ ತೃಪ್ತಿ ದೇಸಾಯಿ ಮನವಿ ಮಾಡಿದ್ದಾರೆ.
ಶನಿ ಶಿಂಗನಾಪುರ ಮತ್ತು ತ್ರಯಂಬಕೇಶ್ವರ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿರುವ ತೃಪ್ತಿ ದೇಸಾಯಿ ಈಗ ಹಾಜಿ ಅಲಿ ದರ್ಗಾಗೆ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದು ಹೋರಾಟ ಆರಂಭಿಸಿದ್ದಾರೆ.
ತೃಪ್ತಿ ದೇಸಾಯಿ ಮತ್ತು ಇತರ ಹೋರಾಟಗಾರರು ಹಾಜಿ ಅಲಿ ದರ್ಗಾದ ಬಳಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಭಾರೀ ಬಿಗಿ ಭದ್ರತೆ ಒದಗಿಸಲಾಗಿದೆ. ನಾವು ದರ್ಗಾ ಬಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿದ್ದೇವೆ. ನಾಳೆ ಮುಂದಿನ ಕ್ರಮದ ಕುರಿತು ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.