ಮುಂಬೈ (ಪಿಟಿಐ): ಜೀವ ಜಲಕ್ಕೂ ತತ್ವಾರ ಅನುಭವಿಸುತ್ತಿರುವ ಲಾತೂರ್ ನಗರದ ‘ದಾಹ’ ತಣಿಸಲು 10 ಬೋಗಿಗಳಲ್ಲಿ ಒಂಬತ್ತು ಬಾರಿ ನೀರು ಸಾಗಿಸಿದ್ದ ರೈಲು, ಬುಧವಾರ 50 ಬೋಗಿಗಳಲ್ಲಿ 25 ಲಕ್ಷ ಲೀಟರ್ ನೀರು ಕೊಂಡೊಯ್ದಿದಿದೆ.
‘ಜಲದೂತ್’ ಎಂದೇ ಕರೆಯಲಾಗುತ್ತಿರುವ ರೈಲು ಮಂಗಳವಾರ ರಾತ್ರಿ 11ಕ್ಕೆ ಮೀರಜ್ನಿಂದ ಹೊರಟು ಬುಧವಾರ ಲಾತೂರ್ ತಲುಪಿದೆ. ಮೀರಜ್ನಿಂದ ಲಾತೂರ್ಗೆ 342 ಕಿಲೋ ಮೀಟರ್ ಅಂತರವಿದೆ.
ಈವರೆಗೂ ಲಾತೂರ್ಗೆ ರೈಲಿನ ಮೂಲಕ 70 ಲಕ್ಷ ಲೀಟರ್ ನೀರು ಪೂರೈಸಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತಿಳಿಸಿದ್ದಾರೆ.
ಕಳೆದ ಒಂಬತ್ತು ಬಾರಿ ‘ಜಲದೂತ್’ ತಲಾ 10 ಬೋಗಿಗಳಲ್ಲಿ ಐದು ಲಕ್ಷ ಲೀಟರ್ ನೀರು ಒಯ್ದಿತ್ತು.
ಏಪ್ರಿಲ್ 11ರಂದು ಮೊದಲ ಬಾರಿಗೆ ನೀರು ಸಾಗಿಸಿದ್ದ ಜಲದೂತ್ಗೆ ಲಾತೂರ್ ತಲುಪಲು 17ಗಂಟೆಗಳೇ ಬೇಕಾಗಿದ್ದವು.