ಮುಂಬೈ (ಪಿಟಿಐ): ಉದ್ಯಮಿ ವಿಜಯ್ ಮಲ್ಯ ಅವರು ಸಾಲ ದುರ್ಬಳಕೆ ಮಾಡಿದ್ದಾರೆ ಎಂಬ ಜಾರಿ ನಿರ್ದೇಶನಾಲದ(ಇ.ಡಿ) ಆರೋಪವನ್ನು ಪ್ರಶ್ನಿಸಿ ಕಿಂಗ್ಫಿಷರ್ ಏರ್ಲೈನ್ಸ್ ಸಂಸ್ಥೆ ಸೋಮವಾರ ಕೋರ್ಟ್ ಮೆಟ್ಟಿಲೇರಿದೆ.
ಇ.ಡಿ ಆರೋಪವನ್ನು ‘ಸುಳ್ಳು ಹಾಗೂ ದೋಷಯುಕ್ತ’ ಎಂದು ಟೀಕಿಸಿರುವ ಕಿಂಗ್ಫಿಷರ್, ಇಲ್ಲಿನ ಹಣ ಲೇವಾದೇವಿ ವಿಶೇಷ ನ್ಯಾಯಾಲಯದಲ್ಲಿ ಈ ಕುರಿತು ಅರ್ಜಿ ಸಲ್ಲಿಸಿದೆ.
‘ಇ.ಡಿ ಆರೋಪಗಳು ಸುಳ್ಳು ಹಾಗೂ ದೋಷಯುಕ್ತ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರುವ ದೃಷ್ಟಿಯಿಂದ ಅರ್ಜಿ ಸಲ್ಲಿಸಿದ್ದೇವೆ’ ಎಂದು ಕಿಂಗ್ಫಿಷರ್ ಪರ ವಕೀಲ ಪ್ರಣವ್ ಬಡೆಕಾ ಅವರು ತಿಳಿಸಿದ್ದಾರೆ.
ಐಡಿಬಿಐ ಬ್ಯಾಂಕಿನ ₹900 ಕೋಟಿ ಸಾಲದ ಹಣ ಲೇವಾದೇವಿ ಪ್ರಕರಣದ ಸಂಬಂಧ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಅರ್ಜಿಯನ್ನು ವಿಶೇಷ ನ್ಯಾಯಾಧೀಶ ಪಿ.ಆರ್. ಭವ್ಕೆ ಅವರು ನಡೆಸುತ್ತಿದ್ದಾರೆ.
ಕಿಂಗ್ಫಿಷರ್ ಏರ್ಲೈನ್ಸ್ಗಾಗಿ ಪಡೆದ ಸಾಲದಲ್ಲಿ ₹430 ಕೋಟಿಯನ್ನು ವಿದೇಶದಲ್ಲಿ ಆಸ್ತಿ ಖರೀದಿಗೆ ಬಳಸಿಕೊಂಡಿದ್ದಾರೆ ಎಂಬುದು ಮಲ್ಯ ವಿರುದ್ಧದ ಆರೋಪ.
ಮುಂಬೈ