ಮುಂಬೈ (ಪಿಟಿಐ): ಏಪ್ರಿಲ್ 30ರ ನಂತರ ಮಹಾರಾಷ್ಟ್ರದಲ್ಲಿ ನಡೆಸಲು ಉದ್ದೇಶಿಸಿದ್ದ ಐಪಿಎಲ್ನ ಎಲ್ಲಾ ಪಂದ್ಯಗಳನ್ನು ಮಹಾರಾಷ್ಟ್ರದಿಂದ ಹೊರಗೆ ನಡೆಸುವಂತೆ ಬಾಂಬೆ ಹೈಕೋರ್ಟ್ ಬುಧವಾರ ಆದೇಶ ನೀಡಿದೆ.
ನ್ಯಾಯಮೂರ್ತಿ ವಿ.ಎಂ. ಕಾನಡೆ ಮತ್ತು ಎಂ.ಎಸ್.ಕಾರ್ಣಿಕ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಏಪ್ರಿಲ್ 30ರ ಬಳಿಕ ಮಹಾರಾಷ್ಟ್ರದ ಮುಂಬೈ, ಪುಣೆ ಮತ್ತು ನಾಗಪುರಗಳಲ್ಲಿ ನಡೆಯಬೇಕಿದ್ದ 13 ಪಂದ್ಯಗಳ ಮೇಲೆ ಈ ಆದೇಶದ ಪರಿಣಾಮ ಬೀರಲಿದೆ.
ಇದಕ್ಕೂ ಮುನ್ನಾ ಬಾಂಬೆ ಹೈಕೋರ್ಟ್ಗೆ ಮನವಿ ಮಾಡಿದ್ದ ಬಿಸಿಸಿಐ ಪುಣೆಯಿಂದ ಐಪಿಎಲ್ ಪಂದ್ಯಗಳನ್ನು ಸ್ಥಳಾಂತರಿಸುವುದು ಕಷ್ಟಸಾಧ್ಯ ಎಂದು ತಿಳಿಸಿತ್ತು.
ಇದಲ್ಲದೆ ಮುಂಬೈ ಮತ್ತು ಪುಣೆ ಫ್ರಾಂಚೈಸಿಗಳು ಮುಖ್ಯಮಂತ್ರಿಗಳ ಬರ ಪರಿಹಾರ ನಿಧಿಗೆ ತಲಾ ₹ 5 ಕೋಟಿ ನೀಡಲು ಸಿದ್ಧವಾಗಿವೆ ಎಂದು ಬಿಸಿಸಿಐ ನ್ಯಾಯಾಲಯಕ್ಕೆ ತಿಳಿಸಿತ್ತು.
ಐಪಿಎಲ್ ಪಂದ್ಯಗಳ ಕಾರಣದಿಂದ ಮಹಾರಾಷ್ಟ್ರದ ಕ್ರಿಕೆಟ್ ಮೈದಾನಗಳ ನಿರ್ವಹಣೆಗಾಗಿ ಹೆಚ್ಚಿನ ನೀರು ಪೋಲಾಗುತ್ತಿದೆ. ಬರ ಪರಿಸ್ಥಿತಿ ಇರುವ ರಾಜ್ಯದಲ್ಲಿ ಈ ರೀತಿ ನೀರು ಪೋಲು ಮಾಡುವುದು ಸರಿಯಲ್ಲ ಎಂದು ದೂರಿ ಲೋಕಸತ್ತಾ ಸಂಸ್ಥೆಯು ಬಾಂಬೆ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಒಟ್ಟು 19 ಐಪಿಎಲ್ ಪಂದ್ಯಗಳು ಮಹಾರಾಷ್ಟ್ರದ ಮುಂಬೈ, ಪುಣೆ ಮತ್ತು ನಾಗಪುರಗಳಲ್ಲಿ ನಿಗದಿಯಾಗಿದ್ದವು. ಈ ಪೈಕಿ ಎರಡು ಪಂದ್ಯಗಳು ಮುಂಬೈನಲ್ಲಿ ನಡೆದಿವೆ.
ಮುಂಬೈ