ಮುಂಬೈ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಇಳಿಯುತ್ತಿದ್ದ ಏರ್ ಇಂಡಿಯಾ ವಿಮಾನದ ಟಯರ್ ಸ್ಫೋಟಗೊಂಡಿದ್ದು, ಕೂದಲೆಳೆ ಅಂತರದಲ್ಲಿ ವಿಮಾನದಲ್ಲಿದ್ದ 150ಕ್ಕೂ ಅಧಿಕ ಪ್ರಯಾಣಿಕರು ಪವಾಡ ಸದೃಶವಾಗಿ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ನಿಲ್ದಾಣದಲ್ಲಿ ವಿಮಾನ ಇಳಿಯುತ್ತಿದ್ದಂತೆ ಚಕ್ರ ಸ್ಫೋಟಗೊಂಡು, ಬೆಂಕಿ ತಗುಲಿದೆ. ಈ ವೇಳೆ ವಿಮಾನದೊಳಗೆ ಹೊಗೆ ಆವರಿಸಿದೆ. ಇದರಿಂದಾಗಿ ಪ್ರಯಾಣಿಕರಿಗೆ ಉಸಿರುಗಟ್ಟಿದಂತಾಗಿದೆ. ಆದರೆ, ಕೂಡಲೆ ಅವರನ್ನು ವಿಮಾನದಿಂದ ಹೊರಗಡೆ ಸುರಕ್ಷಿತವಾಗಿ ಕರೆತರುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ನಾಗಪುರ್ ನಿಂದ ಹೊರಟ ವಿಮಾನ ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ಈ ಅವಘಡ ಸಂಭವಿಸಿದೆ. ವಿಮಾನದಲ್ಲಿ ಪ್ರಯಾಣಿಕರು ಹಾಗೂ ಚಾಲಕ ಸಿಬ್ಬಂದಿಗಳು ಪಾರಾಗಿದ್ದು, ಯಾವುದೇ ಪ್ರಯಾಣಿಕ ಗಾಯಗೊಂಡಿಲ್ಲ ಎಂದು ವರದಿಗಳು ತಿಳಿಸಿವೆ.