ಚಿತ್ತೋರ್ಗಢ: ರಾಜಸ್ಥಾನ ವಿಶ್ವವಿದ್ಯಾನಿಲಯದ ಖಾಸಗಿ ಕಾಲೇಜಿನ ಹಾಸ್ಟೆಲ್ ಕೋಣೆಯಲ್ಲಿ ಗೋಮಾಂಸ ಅಡುಗೆ ಮಾಡಿದ್ದೇವೆ ಎಂಬ ವದಂತಿಯಿಂದ ನಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ನಾಲ್ವರು ಕಾಶ್ಮೀರಿ ವಿದ್ಯಾರ್ಥಿಗಳು ದೂರಿದ್ದಾರೆ.
ಚಿತ್ತೋರ್ಗಢದ ಮೇವರ್ ವಿವಿಯಲ್ಲಿ ಸೋಮವಾರ ಈ ಘಟನೆ ನಡೆದಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಕಾಲೇಜು ಕ್ಯಾಂಪಸ್ನೊಳಗೆ ಬಂದು ಘೋಷಣೆ ಕೂಗಿದ್ದು, ಪರಿಸ್ಥಿತಿ ಹದಗೆಡುವ ಮುನ್ನ ಪೊಲೀಸರು ಸ್ಥಳಕ್ಕೆ ಧಾವಿಸಿ ಜನರನ್ನು ನಿಯಂತ್ರಿಸಿದ್ದಾರೆ.
ಆದಾಗ್ಯೂ, ವಿದ್ಯಾರ್ಥಿಗಳು ಬೇಯಿಸಿದ್ದ ಮಾಂಸ ಯಾವುದು ಎಂದು ತಿಳಿಯಲು ಫಾರೆನ್ಸಿಕ್ ಟೆಸ್ಟ್ಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ನಮ್ಮ ಕಾಲೇಜಿನಲ್ಲಿ ಭಾರತದಾದ್ಯಂತದ ವಿದ್ಯಾರ್ಥಿಗಳು ಇದ್ದಾರೆ. ಇದೊಂದು ಮಿನಿ ಇಂಡಿಯಾ. ಇಲ್ಲಿರುವ ವಿದ್ಯಾರ್ಥಿಗಳು ಬೇರೆ ಬೇರೆ ಸಾಮಾಜಿಕ -ಸಾಂಸ್ಕೃತಿಕ ಹಿನ್ನಲೆಯಿಂದ ಬಂದಿದ್ದವರಾಗಿದ್ದರಿಂದ ಕೆಲವೊಂದು ವಿಷಯಗಳ ಬಗ್ಗೆ ಜಗಳಗಳುಂಟಾಗುತ್ತವೆ ಎಂದು ವಿವಿಯ ಮಾಧ್ಯಮ ವಿಭಾಗದ ಅಧಿಕಾರಿ ಹರೀಶ್ ಗುರ್ನಾನಿ ಹೇಳಿದ್ದಾರೆ.