ಮುಂಬೈ: ರತ್ನಗಿರಿ ಗ್ಯಾಸ್ ಅಂಡ್ ಪವರ್ ಪ್ರೈವೇಟ್ ಲಿಮಿಟೆಡ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಓರ್ವ ಸಿಐಎಸ್ಎಫ್(ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ಪೇದೆ ಇಬ್ಬರು ಸಹೋದ್ಯೋಗಿಗಳನ್ನು ಕೊಂದಿದ್ದಲ್ಲದೆ, ಗರ್ಭಿಣಿ ಪತ್ನಿಯ ಮೇಲೆ ಗುಂಡು ಹಾರಿಸಿ ತಾವೂ ಕೂಡ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಡೆದಿದೆ.
ಇಲ್ಲಿನ ಸಿಐಎಸ್ಎಫ್ ಪೇದೆ ಹರೀಶ್ ಕುಮಾರ್ ಮಂಗಳವಾರ ಸುಮಾರು 9.30ರ ವೇಳೆಯಲ್ಲಿ ಕೆಲಸ ಮುಗಿಸಿ ಬಂದೂಕನ್ನು ಇಡಲು ಉಗ್ರಾಣಕ್ಕೆ ಹೋದಾಗ ಸಹಾಯಕ ಸಬ್ ಇನ್ಸ್ಪೆಕ್ಟರ್ ಬಾಲು ಗಣಪತಿ ಶಿಂಧೆ ಮತ್ತು ಪೇದೆ ರನೀಶ್ ಎಂಬವರ ಮೇಲೆ 4 ಸುತ್ತು ಗುಂಡು ಹಾರಿಸಿದ ಪರಿಣಾಮ ಅವರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದರು. ನಂತರ ಒಂದು ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡ ಹರೀಶ್ ಎಷ್ಟು ಹೇಳಿದರೂ ಹೊರಬರದಿದ್ದಾಗ ಅವರ ಪತ್ನಿಯನ್ನು ಸ್ಥಳಕ್ಕೆ ಕರೆಸಲಾಗಿತ್ತು.
ಹರೀಶ್ ಅವರ ಗರ್ಭಿಣಿ ಪತ್ನಿ ಬಂದು ಬಾಗಿಲು ತೆರೆಯುವಂತೆ ಮನವಿ ಮಾಡಿದಾಗ ಆಕೆಯ ಮೇಲೂ ಗುಂಡು ಹಾರಿಸಿ ಹರೀಶ್ ತಾವೂ ಕೂಡ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಹರೀಶ್ ಮತ್ತು ಅವರ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹರೀಶ್ ಈ ಕೃತ್ಯವೆಸಗಲು ಕಾರಣ ಏನೆಂಬುದರ ಬಗ್ಗೆ ಸದ್ಯಕ್ಕೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ಹರೀಶ್ ಮೇಲೆ ಕೊಲೆ ಪ್ರಕರಣ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.