ಮುಂಬೈ: ಬಾಲಕನೊಬ್ಬ ನಿಂತಿದ್ದ ರೈಲಿನ ಮೇಲೆ ಸೆಲ್ಫಿ ತೆಗೆಯಲು ಹೋಗಿ ಸಾವಿನ ಮನೆ ಸೇರಿದ್ದಾನೆ. ರೈಲಿನ ಮೇಲೆ ನಿಂತು ಫೋಟೋ ಕ್ಲಿಕ್ಕಿಸುವ ಸಂದರ್ಭದಲ್ಲಿ ಆತನಿಗೆ ವಿದ್ಯುತ್ತಂತಿ ತಗುಲಿ ಸಾವನ್ನಪ್ಪಿದ್ದಾನೆ.
ಕಂಜುರ್ಮಾರ್ಗ್ ನಗರದ ನಿವಾಸಿ, ಸೆಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಸಾಹಿಲ್ ಚಂದ್ರಕಾಂತ್ ಈಶ್ವರ್ಕರ್(14) ಮೃತ ಬಾಲಕ. ಸೋಮವಾರದಂದು ಗೆಳೆಯರ ಜೊತೆಗೆ ಆಟವಾಡಲು ಹೋದಾಗ ನಾಹುರ್ ರೈಲುನಿಲ್ದಾನದಲ್ಲಿ ನಿಂತಿದ್ದ ರೈಲಿನ ಮೇಲೆ ಹುಚ್ಚು ಸೆಲ್ಫಿಸಾಹಸ ಮಾಡಿದ ಪರಿಣಾಮ ಮೃತಪಟ್ಟಿದ್ದಾನೆ.
ವಿದ್ಯುತ್ ಶಾಕ್ನಿಂದ ಸುಟ್ಟುಹೋಗಿದ್ದ ಸಾಹಿಲ್ನನ್ನು ಹತ್ತಿರದ ರಾಜವಾಡಿ ಅಸ್ಪತ್ರೆಗೆ ದಾಖಲಿಸಲಗಿತ್ತು. ಆದರೆ ತೀವ್ರವಾಗಿ ಗಾಯಗೊಂಡ ಪರಿಣಾಮ ಸಂಜೆಯ ವೇಳೆ ಈತ ಮೃತಪಟ್ಟಿದ್ದಾನೆ. ಎದೆ ಮಟ್ಟ ಬೆಳೆದಿದ್ದ ಮಗ ಹೀಗೆ ಸ್ಟಂಟ್ ಮಾಡಲು ಹೋಗಿ ಸಾವನ್ನಪ್ಪಿದ್ದಾನೆಂದು ಸಾಹಿಲ್ನ ಪೋಷಕರು ರೋದಿಸುತ್ತಿದ್ದಾರೆ.
ಮುಂಬೈ ರೈಲ್ವೇ ನಿಲ್ದಾಣದಲ್ಲಿ ಈ ರೀತಿ ಹುಚ್ಚು ಸಾಹಸ ಮಾಡುವುದು ಇದು ಮೊದಲೆನಲ್ಲ. ಈ ಹಿಂದೆ ಈ ವರ್ಷದ ಜನವರಿಯಲ್ಲಿ ಜೋಗೇಶ್ವರಿ ರೈಲು ನಿಲ್ದಾಣದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ, 25000 ವೋಲ್ಟ್ ತಂತಿ ತಗುಲಿ 16 ವರ್ಷದ ಗಣೇಶ್ ಎಂಬ ಯುವಕ ಮೃತಪಟ್ಟಿದ್ದ.