ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಮತ್ತೊಂದು ಹೊಸ ಟ್ವಿಸ್ಟ್ ದೊರೆತಿದೆ. ಪೊಲೀಸ್ ಅಧಿಕಾರಿಯೊಬ್ಬರು ಹತ್ಯೆಗೆ ಸಂಬಂಧಿಸಿದಂತೆ ಮಹತ್ವದ ವಿಷಯವನ್ನು ಬಾಯ್ಬಿಟ್ಟಿದ್ದಾರೆ.
2012 ರ ಮೇನಲ್ಲಿ ಶೀನಾ ಬೋರಾಳ ಮೃತದೇಹ ಪತ್ತೆಯಾದಾಗ ಎಫ್ಐಆರ್ ದಾಖಲಿಸದಂತೆ ರಾಯ್ ಗಢದ ಎಸ್ ಪಿ ಆರ್.ಡಿ.ಶಿಂಧೆ ಆದೇಶ ನೀಡಿದ್ದರು ಎಂದು ಪೊಲೀಸ್ ಇನ್ಸ್ ಪೆಕ್ಟರ್ ಸುಭಾಷ್ ಹೇಳಿಕೆ ನೀಡಿದ್ದಾರೆ. ರಾಯ್ ಗಢದ ಜಿಲ್ಲೆಯಲ್ಲಿ ಶೀನಾಳ ಮೃತದೇಹ ಪತ್ತೆಯಾದಾಗ ಸಾಕಷ್ಟು ಅನ್ಯಾಯಗಳಾಗಿವೆ ಎಂದು ಸುಭಾಷ್ ಹೇಳಿದ್ದಾರೆ.
ಸುಭಾಷ್ ಶೀನಾ ಬೋರಾ ಹತ್ಯೆ ಪ್ರಕರಣದ ತನಿಖಾಧಿಕಾರಿಯಾಗಿದ್ದರು ಎಂಬುದು ಮತ್ತೊಂದು ವಿಷೇಶ. ಎಫ್ಐಆರ್ ದಾಖಲಿಸದಂತೆ ಸೂಚಿಸಿದ್ದ ಆರ್.ಡಿ ಶಿಂಧೆ, ಅನ್ಯಾಯ ನಡೆದಿರುವುದು ಸ್ಪಷ್ಟವಾಗಿದ್ದರೂ ಸಹ ಡೈರಿ ಎಂಟ್ರಿ ಮಾಡುವಂತೆ ತಿಳಿಸಿದ್ದರು.
ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರಾಗಿರುವ ಇಂದ್ರಾಣಿ ಮುಖರ್ಜಿ ತನ್ನ ಮಗಳು ಶೀನಾ ಬೋರಾಳನ್ನು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಶೀನಾಳ ಶವ ಪತ್ತೆಯಾದಾಗ ಎಫ್ಐಆರ್ ದಾಖಲಿಸದಂತೆ ತನಿಖಾಧಿಕಾರಿಗೆ ಒತ್ತಡ ಹೇರಲಾಗಿತ್ತು ಎಂಬ ವಿಷಯ ಈಗ ಬಯಲಾಗಿದ್ದು ಪ್ರಕರಣದ ತನಿಖೆಗೆ ಮತ್ತೊಂದು ಹೊಸ ತಿರುವು ದೊರೆತಿದೆ.