ಕರ್ನಾಟಕ

ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಪ್ರಣಾಳಿಕೆ :ಅಣ್ಣಾಮಲೈ ಮತ್ತು ಕಟೀಲ್‌ರಿಂದ ಬಿಡುಗಡೆ

Pinterest LinkedIn Tumblr

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ‘ನವಯುಗ-ನವಪಥ’ ಹೆಸರಿನ ತಮ್ಮ ಪ್ರಣಾಳಿಕೆಯನ್ನು ಇಂದು (ಮಂಗಳವಾರ) ಬಿಡುಗಡೆ ಮಾಡಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಇಂದು ಆಯೋಜಿಸಿದ ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷರಾದ ಅಣ್ಣಾಮಲೈ ಅವರು ಕ್ಯಾಪ್ಟನ್ ಬ್ರಿಜೇಶ್ ಚೌಟರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ದಾಪುಗಾಲು, ಕೈಗಾರಿಕೆ ಮತ್ತು ಬಂಡವಾಳ ಆಕರ್ಷಣೆ, ಸ್ಟಾರ್ಟ್‌ ಅಪ್ ಮತ್ತು ಉದ್ಯಮಶೀಲತೆ, ಪ್ರವಾಸೋದ್ಯಮ, ನಾರಿಶಕ್ತಿ, ಸಂಸ್ಕೃತಿ ಹಾಗೂ ಪರಂಪರೆ; ಕೃಷಿ, ಪಶುಸಂಗೋಪನೆ, ಮೀನುಗಾರಿಕೆ; ಯುವಜನತೆ ಮತ್ತು ಸಂವಹನ, ಕರಾವಳಿ ಅಭಿವೃದ್ಧಿ ಮತ್ತು ಭದ್ರತೆ- ಹೀಗೆ 9 ವಿಷಯಗಳನ್ನು ಒಳಗೊಂಡ ಕಾರ್ಯಸೂಚಿ ಈ ಪ್ರಣಾಳಿಕೆಯಲ್ಲಿದೆ.

ಬಳಿಕ ಮಾತನಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟರು, ಇದೊಂದು ಟಾಸ್ಕ್‌ ಶೀಟ್‌ ಅಥವಾ ಕಾರ್ಯಸೂಚಿ. 9 ಫೋಕಸ್ ಏರಿಯಾಗಳನ್ನು ಮುಂದಿಟ್ಟು 2047ರ ವೇಳೆಗೆ ವಿಕಸಿತ ಭಾರತವನ್ನು ರೂಪಿಸುವ ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಗೆ ಪೂರಕವಾಗಿ ವಿಕಸಿತ ‘ದಕ್ಷಿಣ ಕನ್ನಡ’ವನ್ನು ಸಾಕಾರಗೊಳಿಸಲು ಈ ಕಾರ್ಯಸೂಚಿಯನ್ನು ಸಿದ್ಧಪಡಿಸಲಾಗಿದೆ ಎಂದರು.

ನಮ್ಮ ಮೊಟ್ಟಮೊದಲ ಆದ್ಯತೆ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ 10 ವರ್ಷದ ಅವಧಿಯಲ್ಲಿ ನಮ್ಮ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಈ ಜಿಲ್ಲೆಯ ಅಭಿವೃದ್ಧಿಗೆ 1,13,000 ಕೋಟಿಗೂ ಅಧಿಕ ಅನುದಾನವನ್ನು ತಂದಿದ್ದಾರೆ. ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿದ್ದು, ಮತ್ತೆ ಕೆಲವು ಪ್ರಗತಿಯಲ್ಲಿವೆ. ಅವುಗಳ ವೇಗವನ್ನು ಮತ್ತಷ್ಟು ಹೆಚ್ಚಿಸಿ ಪೂರ್ಣಗೊಳಿಸುವುದರ ಜತೆಗೆ ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸುವುದು ಈ ಕಾರ್ಯಸೂಚಿಯ ಉದ್ದೇಶವಾಗಿದೆ ಎಂದು ಕ್ಯಾಪ್ಟನ್ ಚೌಟ ಹೇಳಿದರು.

ಸಂಪರ್ಕ ಮತ್ತು ಮೂಲ ಸೌಲಭ್ಯದ ದೃಷ್ಟಿಯಿಂದ ಕಳೆದ 10 ವರ್ಷದಲ್ಲಿ ವಿಶೇಷವಾದ ಕೆಲಸಗಳು ಈಗಾಗಲೇ ಅನುಷ್ಠಾನದಲ್ಲಿವೆ. ಬಿ.ಸಿರೋಡ್-ಅಡ್ಡಹೊಳೆ ನಡುವಿನ ಹೆದ್ದಾರಿ ಕಾಮಗಾರಿಯನ್ನು ಪೂರ್ತಿಗೊಳಿಸುವುದು ನಮ್ಮ ಆದ್ಯತೆ. ಅದೇ ರೀತಿ ಬಿ.ಸಿ ರೋಡ್-ಪುಂಜಾಲಕಟ್ಟೆ- ಚಾರ್ಮಾಡಿ ನಡುವಿನ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಕುಲಶೇಖರದಿಂದ ಮೂಡುಬಿದಿರೆಯಾಗಿ ಸಾಮಗ್ಲಿ ವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಸಂಪಾಖೆಯಿಂದ ಮಾಣಿ ವರೆಗಿನ ಕಾಮಗಾರಿ ಅನುಷ್ಠಾನ ಹಂತದಲ್ಲಿದೆ.

ಅಂತೆಯೇ ಉಜಿರೆಯಿಂದ ಪೆರಿಯಶಾಂತಿ ವರೆಗಿನ ಹೆದ್ದಾರಿ ಕಾಮಗಾರಿ ಕೂಡ ಪ್ರಾರಂಭವಾಗುತ್ತಿದೆ. ಈ ಎಲ್ಲ ಹೆದ್ದಾರಿ ಕಾಮಗಾರಿಗಳನ್ನು ಆದ್ಯತೆಯಾಗಿ ಪೂರ್ತಿ ಗೊಳಿಸುವುದು ಒಂಡೆಯಾದರೆ, ಸಂಪರ್ಕ ಮತ್ತು ಮೂಲ ಸೌಕರ್ಯದಲ್ಲಿ ಮೊತ್ತ ಮೊದಲಿಗೆ ಬೆಂಗಳೂರು-ಮಂಗಳೂರು ನಡುವಿನ ಹೆದ್ದಾರಿ ಸಂಪರ್ಕ ಅಭಿವೃದ್ಧಿಪಡಿಸುವುದು ಆದ್ಯತೆಯಾಗಿದೆ. ಅದರಲ್ಲಿರುವ ಸವಾಲುಗಳನ್ನು ಹೇಗೆ ನಿರ್ವಹಿಸಬೇಕೆಂಬುದನ್ನು (ಅಡ್ಡಹೊಳೆಯಿಂದ ಮಾರನಹಳ್ಳಿ ವರೆಗಿನ ರಸ್ತೆ) ಅಧ್ಯಯನ ಮಡಲಾಗುವುದು. ಶಿರಾಡಿ ಘಾಟ್- ವೈಜ್ಞಾನಿಕ ಅಧ್ಯಯನ ಮಾಡಿ ಸಂಪರ್ಕ ರಸ್ತೆ ಮಾಡುವ ಆದ್ಯತೆ ನಮ್ಮದು.

ಮಂಗಳೂರು-ಬೆಂಗಳೂರು ನಡುವೆ ಒಂದು ಹೊಸ ರೈಲ್ವೆ ಮಾರ್ಗದ ಕಲ್ಪನೆಯಿದೆ. ಪ್ರಯಾಣಿಕರು ಮತ್ತು ಸರಕು ಸಾಗಣೆಗೆ ಒಂದು ವೇಗದ ಕಾರಿಡಾರ್ ನಿರ್ಮಾಣ ಮಾಡುವ ಚಿಂತನೆಯಿದೆ. ಇದರಿಂದ ಮಂಗಳೂರು ಬಂದರಿನ ಅಭಿವೃದ್ಧಿಗೆ ಹೊಸ ವೇಗ ಸಿಗಬಹುದು. ಅದರ ಜತೆಜತೆಗೆ ಹಾಸನ, ತುಮಕೂರುಗಳ ಅಭಿವೃದ್ಧಿಗೂ ಈ ರೈಲ್ವೇ ಲೈನ್ ಮತ್ತು ರಸ್ತೆಯ ಯೋಜನೆಗಳು ಪೂರಕವಾಗಬಹುದು ಎಂದು ಕ್ಯಾಪ್ಟನ್ ಚೌಟ ಹೇಳಿದರು.

ಕೈಗಾರಿಕೆ ಮತ್ತು ಬಂಡವಾಳ ಆಕರ್ಷಣೆ, ಸ್ಟಾರ್ಟ್ ಅಪ್‌ ಮತ್ತು ಉದ್ಯಮಶೀಲತೆ ನಮ್ಮ ಜಿಲ್ಲೆಯ ಜನರು ದೇಶದ ಬೇರೆ ಬೇರೆ ಭಾಗಗಳಿಗೆ ಹೋಗಿ ಉದ್ಯಮಶೀಲತೆಯನ್ನು ಬೆಳೆಸಿಕೊಂಡು ಯಶಸ್ಸು ಕಂಡಿದ್ದಾರೆ. ಅಂಥಥವರನ್ನು ಬ್ಯಾಕ್ ಟು ಊರು ಎಂಬ ಚಿಂತನೆಯಲ್ಲಿ ಮರಳಿ ಊರಿಗೆ ಕರೆಸಿಕೊಳ್ಳುವ ಕಲ್ಪನೆಯಿದೆ. ಅವರನ್ನೆಲ್ಲ ಸಕಾರಾತ್ಮಕವಾಗಿ ತೊಡಗಿಸಿಕೊಂಡು ಈ ಜಿಲ್ಲೆಯ ಅಭಿವೃದ್ಧಿಗೆ ಹೇಗೆ ಕೆಲಸ ಮಾಡಬಹುದು ಎಂದು ಚಿಂತಿಸಿ ಅವರಿಗೆ ಪೂರಕವಾಗುವ ಇಕೊಸಿಸ್ಟಂ ರೂಪಿಸುವ ಯೋಜನೆಯಿದೆ.

ಬಿ ಯುವರ್ ಓನ್ ಬಾಸ್ ಎನ್ನುವ ಕಲ್ಪನೆಯಡಿ ಉದ್ಯಮಶೀಲರಾಗಲು ಉತ್ಸುಕರಾಗಿರುವ ಯುವಕರಿಗೆ ಪ್ರೋತ್ಸಾಹ ನೀಡುವ BYOB ಕಾರ್ಯಕ್ರಮ; ಗೇಮಿಂಗ್, ಅನಿಮೇಶನ್, ಡಿಸೈನ್ ಮುಂತಾದ ಸೃಜನಶೀಲ ಕ್ಷೇತ್ರಗಳ ಬೆಳವಣಿಗೆಗೆ ಉತ್ತೇಜನ ನೀಡುವುದು, ದ.ಕ ಜಿಲ್ಲೆ ಹಿಮ ಒಂದನ್ನು ಬಿಟ್ಟರೆ ಬೇರೆಲ್ಲ ಸಿಗುವ ಒಂದು ಪ್ರದೇಶ. ಹಾಗಾಗಿ ಇಲ್ಲಿ ಒಂದು ಫಿಲ್ಮ್‌ ಸಿಟಿ ನಿರ್ಮಾಣ ಮಾಡಲು ಪೂರಕ ಪ್ತಯತ್ನಗಳನ್ನು ಮಾಡಬೇಕೆಂಬ ಚಿಂತನೆಯಿದೆ ಎಂದು ಬ್ರಿಜೇಶ್ ಚೌಟ ಹೇಳಿದರು.

ಪ್ರವಾಸೋದ್ಯಮ ದೃಷ್ಟಿಯಿಂದ ವಿಶೇಷವಾಗಿ ಸಸಿಹಿತ್ಲು ಬೀಚನ್ನು ಸಾಹಸ ಕ್ರೀಡಾ ಕೇಂದ್ರವಾಗಿ ಅಭಿವೃದ್ಧಿಪಡಿಸುವುದು, ದೇಗುಲ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮಕ್ಕೆ ಆದ್ಯತೆ; ನಾರೀ ಶಕ್ತಿ ಅಭಿವೃದ್ಧಿಗೆ, ಮಹಿಳಾ ಸುರಕ್ಷತೆ ಮತ್ತುಭದ್ರತೆ ಬಗ್ಗೆ ಹೆಚ್ಚಿನ ಆದ್ಯತೆ ನೀಡುವುದು ನಮ್ಮ ಯೋಜನೆಯಲ್ಲಿದೆ ಎಂದು ಕ್ಯಾ. ಚೌಟ ವಿವರಿಸಿದರು.

ಸಂಸ್ಕೃತಿ ಮತ್ತು ಪರಂಪರೆ, ಕೃಷಿ ಸಂಗೋಪನೆ, ರಾಣಿ ಅಬ್ಬಕ್ಕ ಹೆಸರಿನಲ್ಲಿ ಸೈನಿಕ ಶಾಲೆ ಸ್ಥಾಪನೆ, ಭಯೋತ್ಪಾದಕ ಚಟುವಟಿಕೆಗಳ ನಿಗ್ರಹಕ್ಕೆ ಹಾಗೂ ಜಾಲವನ್ನು ಕಿತ್ತು ಹಾಕುವ ದೃಷ್ಟಿಯಿಂದ ಎನ್‌ಐಎ ಘಟಕ ಸ್ಥಾಪನೆ ಮತ್ತು ವಿಧಿ ವಿಜ್ಞಾನ ಸಂಶೋಧನಾ ಕೇಂದ್ರ ಸ್ಥಾಪನೆಯ ಉದ್ದೇಶವಿದೆ ಎಂದು ಕ್ಯಾ. ಚೌಟರು ವಿವರಿಸಿದರು.

ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ, ರಾಜೇಶ್ ನಾಯಕ್, ಚುನಾವಣೆ ಪ್ರಭಾರಿ ಕ್ಯಾ. ಗಣೇಶ್ ಕಾರ್ಣಿಕ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪಕ್ಷದ ಹಿರಿಯ ಮುಖಂಡರಾದ ಮೋನಪ್ಪ ಭಂಡಾರಿ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಬಿ. ನಾಗರಾಜ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಉಪಸ್ತಿತರಿದ್ದರು.

Comments are closed.