ಕರ್ನಾಟಕ

ಸಿಡಿ ನಕಲಿ, ಇದು ನನ್ನ ವಿರುದ್ಧ ನಡೆದ ಷಡ್ಯಂತ್ರ, ಇದರ ಹಿಂದೆ ಇರುವವರನ್ನು ಸುಮ್ಮನೆ ಬಿಡಲ್ಲ: ರಮೇಶ್ ಜಾರಕಿಹೊಳಿ

Pinterest LinkedIn Tumblr

ಬೆಂಗಳೂರು: ನನ್ನ ವಿರುದ್ಧ ನಡೆದ ಷಡ್ಯಂತ್ರ ಇದಾಗಿದೆ, ಸಿಡಿ 100 ಪರ್ಸೆಂಟ್ ನಕಲಿಯಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ನನ್ನ ಏಳಿಗೆ ಸಹಿಸಿದವರಿಂದ ನಡೆದ ರಾಜಕೀಯ ಷಡ್ಯಂತ್ರ ಇದಾಗಿದೆ, ಸಿಡಿ ರಿಲೀಸ್ ಆಗುವ ವಿಷಯ ನಾಲ್ಕು ತಿಂಗಳ ಮೊದಲೇ ನನಗೆ ತಿಳಿದಿತ್ತು, ಆದರೆ ನಾನು ತಪ್ಪು ಮಾಡಿಲ್ಲದ ಕಾರಣ ಧೃತಿಗೆಡಲಿಲ್ಲ ಎಂದು ಹೇಳಿದ್ದಾರೆ.

ಯಾರ ಒತ್ತಡದ ಮೇರೆಗೂ ನಾನು ರಾಜಿನಾಮೆ ಕೊಟ್ಟಿಲ್ಲ, ಪಕ್ಷಕ್ಕೆ ಮುಜುಗರ ತರಬಾರದು ಎಂಬ ಕಾರಣದಿಂದ ರಾಜಿನಾಮೆ ನೀಡಿದ್ದೇನೆ, ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ, ನನಗೆ ನನ್ನ ಕುಟುಂಬದ ಮರ್ಯಾದೆ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಇದು ಒಬ್ಬ ಮಹಾನ್ ನಾಯಕನ ಕುತಂತ್ರವಾಗಿದೆ, ನಾಲ್ಕು ಜನ ಸೇರಿ ನಡೆಸಿದ್ದಾರೆ, ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ, ಯಶವಂತಪುರದ ಕಟ್ಟಡದ 4 ಮತ್ತು 5ನೇ ಮಹಡಿಯಲ್ಲಿ ನಡೆದ ಷಡ್ಯಂತ್ರ ಇದಾಗಿದೆ. ಇದಕ್ಕಾಗಿ ನೂರಾರು ಕೋಟಿ ರು ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಿಡಿ ಬಿಡುಗಡೆಯಾದ ನಂತರ ನನ್ನ ಬೆನ್ನಿಗೆ ನಿಂತ ಎಲ್ಲಾ ನಾಯಕರು ಅದರಲ್ಲೂ ವಿಶೇಷವಾಗಿ ಕುಮಾರಸ್ವಾಮಿ ಅವರಿಗೆ ನನ್ನ ಧನ್ಯವಾದ ಎಂದು ಹೇಳಿದ್ದಾರೆ.

ಯುವತಿಗೆ 5 ಕೋಟಿ ರು ಹಣದ ಜೊತೆಗೆ 2 ಐಷಾರಾಮಿ ಫ್ಲ್ಯಾಟ್ ಗಳನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಸಿಡಿ ರಿಲೀಸ್ ಆಗುವ 26 ಗಂಟೆ ಮೊದಲೇ ನನಗೆ ತಿಳಿದಿತ್ತು, ಆದರೆ ನಾನು ತಪ್ಪು ಮಾಡಿರದ ಕಾರಣ ನಾನು ತಲೆ ಕೆಡಿಸಿಕೊಂಡಿರಲಿಲ್ಲ, ನಾನು ನಿರಪರಾಧಿ ಎಂದು ಕಣ್ಣೀರು ಹಾಕಿದ್ದಾರೆ.

Comments are closed.