ಬೆಂಗಳೂರು: ಮೇಕ್ ಇನ್ ಇಂಡಿಯಾ ಸಿಂಹ ಲಾಂಛನವನ್ನು ಸಿಎಂ ಬಿ ಎಸ್ ಯಡಿಯೂರಪ್ಪ ಲೋಕಾರ್ಪಣೆ ಮಾಡಿದ್ದಾರೆ.
ಬೆಂಗಳೂರಿನ ವಿಂಡ್ಸರ್ ಮ್ಯಾನರ್ ವೃತ್ತದಲ್ಲಿ ಇಂದು ಮೇಕ್ ಇನ್ ಇಂಡಿಯಾ ಲಾಂಛನವನ್ನು ತಮ್ಮ ಹುಟ್ಟುಹಬ್ಬದ ದಿನವೇ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು.
ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾವಾಗಿದ್ದು, ಭಾರತದಲ್ಲಿಯೇ ವಸ್ತುಗಳನ್ನು ತಯಾರಿಸಿ ಸಾಧ್ಯವಾದಷ್ಟು ಹೊರದೇಶಗಳಿಗೆ ರಫ್ತು ಮಾಡುವ ಶಕ್ತಿಯನ್ನು ಹೊಂದುವುದಾಗಿದೆ.
ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಬೆಂಗಳೂರು ತಾಂತ್ರಿಕವಾಗಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಲಂಡನ್, ಬರ್ಲಿನ್, ಪ್ಯಾರಿಸ್ ನಗರವನ್ನು ಸಹ ಬೆಂಗಳೂರು ಹಿಂದಿಕ್ಕುತ್ತಿದೆ. ತಾಂತ್ರಿಕ ಕೌಶಲ್ಯ ಮತ್ತು ಬೆಳವಣಿಗೆಯಲ್ಲಿ ಬೆಂಗಳೂರು ನಗರವನ್ನು ವಿಶೇಷವಾಗಿ ಕಾಪಾಡಿಕೊಂಡು ಹೋಗುವಂತಹದ್ದು ನಮ್ಮ ಸರ್ಕಾರದ ಸಂಕಲ್ಪವಾಗಿದೆ. ಈ ಬಗ್ಗೆ ಪ್ರಧಾನಿ ಮೋದಿಯವರು ಸಹ ಕರ್ನಾಟಕಕ್ಕೆ ಭೇಟಿ ನೀಡಿದಾಗಲೆಲ್ಲಾ ಸರ್ಕಾರಕ್ಕೆ ಸಲಹೆ ನೀಡುತ್ತಲೇ ಬಂದಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯನ್ನು ಅನಾವರಣಗೊಳಿಸುವ ಈ ಲಾಂಛನವನ್ನು ಸ್ಥಾಪಿಸುವುದು ಅತ್ಯಂತ ಅರ್ಥಪೂರ್ಣವಾಗಿದೆ. ವಿಶ್ವಮಾರುಕಟ್ಟೆಯಲ್ಲಿ ಬ್ರಾಂಡ್ ಕರ್ನಾಟಕವನ್ನು ಸ್ಥಾಪಿಸಲು ನಮ್ಮ ಸರ್ಕಾರ ಅಭಿವೃದ್ಧಿಪಡಿಸುವ ಮಹಾತ್ವಾಕಾಂಕ್ಷೆಯನ್ನು ಹೊಂದಿದೆ. ಮೇಕ್ ಇನ್ ಇಂಡಿಯಾ ಸಾಕಾರಕ್ಕೆ ಹೂಡಿಕೆದಾರ ಸ್ನೇಹಿ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯದ ಕೊಡುಗೆಯನ್ನು ಶೇಕಡಾ 20ಕ್ಕೆ ಹೆಚ್ಚಿಸಲು ಆದ್ಯತೆ ನೀಡಲಾಗುವುದು. ಇದರಲ್ಲಿ ಬಹುಪಾಲು ಬೆಂಗಳೂರು ನಗರದ್ದೇ ಆಗಿದೆ. ಬೆಂಗಳೂರು ನಗರದಲ್ಲಿ ದೊಡ್ಡ ಮತ್ತು ಸಣ್ಣ ಕೈಗಾರಿಕೆ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ ಉಪಕರಣ, ದೂರಸಂಪರ್ಕ, ವೈಮಾನಿಕ ಕೈಗಾರಿಕೆ, ಔಷಧಿ ತಯಾರಿಕೆ, ಜೈವಿಕ ವಿಜ್ಞಾನ, ಆಹಾರ ಸಂಸ್ಕರಣೆ, ಆಟೋ ಮೊಬೈಲ್ ಉದ್ಯಮಗಳ ನೆಲೆ ಬೆಂಗಳೂರು ಆಗಿದೆ. ಇಂತಹ ವಿಶ್ವವಿಖ್ಯಾತ ಬೆಂಗಳೂರು ನಗರವನ್ನು ವಿಶ್ವವಿಖ್ಯಾತಗೊಳಿಸಲು ಬೆಂಗಳೂರು ಮಿಷನ್-2020ನ್ನು ನಮ್ಮ ಸರ್ಕಾರ ರೂಪಿಸಿದೆ ಎಂದರು.
‘ಮೇಕ್ ಇನ್ ಇಂಡಿಯಾ’ ಸಿಂಹ ಪ್ರತಿಮೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಂಡ್ಸರ್ ಚೌಕದಲ್ಲಿ ಘರ್ಜಿಸುವ ಸಿಂಹದ ಪ್ರತಿಮೆಯನ್ನು ಇರಿಸಿದೆ. ಇದು ಮುಖ್ಯಮಂತ್ರಿಯ ಅಧಿಕೃತ ನಿವಾಸದಿಂದ ಕೂಗಳತೆ ದೂರದಲ್ಲಿದೆ.
ಈ ಪ್ರತಿಮೆಯು 1,140 ಕೆಜಿ ತೂಕವಿದ್ದು, ಫೈಬರ್ ಬೋಲ್ಸ್ಟರ್ಡ್ ಪ್ಲಾಸ್ಟಿಕ್ನಿಂದ ತಯಾರಿಸಲ್ಪಟ್ಟಿದೆ. ಇದು 23 ಅಡಿ ಉದ್ದ, 4.5 ಅಡಿ ಉದ್ದವಿದೆ. ಗಾಜಿಯಾಬಾದ್ನಲ್ಲಿ ಕೆತ್ತಿ ಬೆಂಗಳೂರಿಗೆ ಸಾಗಿಸಲಾಗಿದೆ. ಇದರ ತಯಾರಿ, ಸಾಗಾಟ ವೆಚ್ಚ ಸೇರಿ 5.76 ಲಕ್ಷ ರೂಪಾಯಿಗಳನ್ನು ಬಿಬಿಎಂಪಿ ಪಾವತಿಸಿದೆ.
Comments are closed.