ಕರ್ನಾಟಕ

ನಿನ್ನ ಹೆಂಡತಿಯನ್ನ ನನಗೆ ಬಿಟ್ಟುಕೊಡು ಎಂದ; ನೋ ಎಂದಿದ್ದಕ್ಕೆ ಗಂಡನ ಹತ್ಯೆ

Pinterest LinkedIn Tumblr


ಚಿಕ್ಕಮಗಳೂರು: ನಿನ್ನ ಹೆಂಡತಿಯನ್ನ ನನಗೆ ಬಿಟ್ಟುಕೊಡು ಎಂದ ಪರಪುರಷ. ಪತ್ನಿಯನ್ನ ಬಿಟ್ಟು ಕೊಡಲ್ಲ ಅಂದಿದ್ದಕ್ಕೆ ಗಂಡನನ್ನು ಪತ್ನಿಯೇ ಪ್ರಿಯಕರನ ಜೊತೆ ಸೇರಿ ಕೊಂದು ಮುಗಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ದೊಡ್ಡಹಟ್ಟಿ ಬಡಾವಣೆಯಲ್ಲಿ ನಡೆದಿದೆ.

ಸಖರಾಯಪಟ್ಟಣದ ದೊಡ್ಡಹಟ್ಟಿಯ ನಿವಾಸಿಗಳಾದ ರಾಗಿಣಿ ಮತ್ತು ಪ್ರದೀಪ್ ದಾಂಪತ್ಯದ ಮಧ್ಯೆ ಬಂದ ಗುಬ್ಬಿಹಳ್ಳಿ ಶ್ರೀನಿವಾಸ್ ಎಂಬಾತ ಹುಳಿ ಹಿಂಡಿದ್ದಾನೆ. ಚಂಚಲೆಯಾಗಿದ್ದ ರಾಗಿಣಿಯನ್ನ ಓಲೈಸಿಕೊಂಡು ಮೋಹದ ಬಲೆಗೆ ಕೆಡವಿಕೊಂಡಿದ್ದಾನೆ. ರಾಗಿಣಿ ಪತಿ ಪ್ರದೀಪ್ ಜೊತೆಯೇ ಗಾರೆ ಕೆಲಸ ಮಾಡುತ್ತಿದ್ದ ಶ್ರೀನಿವಾಸ್, ದಿನ ಕಳೆದಂತೆ ರಾಗಿಣಿಗೆ ಹತ್ತಿರವಾಗಿದ್ದಾನೆ. ಅದು ಎಲ್ಲಿವರೆಗೆ ಅಂದ್ರೆ ನಿನ್ನ ಪತ್ನಿಯನ್ನ ನನಗೆ ಬಿಟ್ಟುಕೊಡು ಎಂದು ಪ್ರದೀಪ್ ಮನೆಗೆ ಬಂದು ಕೇಳುವವರೆಗೂ. ಇಲ್ಲ, ಸಾಧ್ಯನೇ ಇಲ್ಲ ಅಂತಾ ವಿರೋಧ ಮಾಡಿದ್ದಕ್ಕೆ ಪ್ರಿಯಕರ ಶ್ರೀನಿವಾಸ್ ಮತ್ತು ರಾಗಿಣಿ ಸೇರಿ ಪ್ರದೀಪ್ ಕುತ್ತಿಗೆಯನ್ನ ವೇಲ್​ನಿಂದ ಗಟ್ಟಿಯಾಗಿ ಸುತ್ತಿ ಉಸಿರು ನಿಲ್ಲಿಸಿದ್ದಾರೆ.

ಶ್ರೀನಿವಾಸ ಮಾತ್ರವೇ ಇಲ್ಲಿ ಖಳನಲ್ಲ. ಈ ವಿಲನ್​ಗೆ ತನ್ನ ಮನೆಯನ್ನ ದಾರಿ ತೋರಿಸಿದ್ದ ರಾಗಿಣಿಯ ಪಾತ್ರವೂ ಇಲ್ಲಿ ಮುಖ್ಯ. ಸ್ವಭಾವತಃ ಚಂಚಲ ಮನಸ್ಸಿನವಳಾಗಿದ್ದ ರಾಗಿಣಿ ಈ ಹಿಂದೆಯೂ ಪರಸಂಗದ ಕೆಲಸಗಳಲ್ಲಿ ತೊಡಗಿದ ಆರೋಪ ಇದೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೇಬೇಡಿನಿಂದ ಈಕೆಯನ್ನು ಹತ್ತು ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹುಲಿಕೆರೆಯ ಪ್ರದೀಪ್​ಗೆ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ಆ ಊರಲ್ಲೂ ಕೂಡ ರಾಗಿಣಿ, ಪರ ಪುರುಷರ ಜೊತೆ ಸಂಬಂಧ ಇಟ್ಟುಕೊಂಡಿದ್ದು ತಿಳಿದಾಗ ಪತಿ ಪ್ರದೀಪನೇ ರಾಗಿಣಿ ಜೊತೆ ಊರುಬಿಟ್ಟು ದೊಡ್ಡಹಟ್ಟಿ ಗ್ರಾಮಕ್ಕೆ ಬಂದಿದ್ದ. ಆದ್ರೆ ಅಲ್ಲೂ ಕೂಡ ರಾಗಿಣಿಯ ಚೆಲ್ಲಾಟ ಮುಂದುವರೆದಿತ್ತು. ಇಷ್ಟಾದರೂ ಪಾಪದ ಪ್ರಾಣಿ ಪ್ರದೀಪ್​ಗೆ ಹೆಂಡತಿ ಮೇಲೆ ಪ್ರೀತಿ ಕಡಿಮೆಯಾಗಿರಲಿಲ್ಲ. ಆದರೆ, ಪತ್ನಿಯ ಚೆಲ್ಲಾಟ ಕಂಡು ಪ್ರದೀಪ್ ಇತ್ತೀಚೆಗೆ ಮದ್ಯಸೇವನೆ ಕೂಡ ಆರಂಭಿಸಿದ್ದ. ಇದನ್ನ ಉಪಯೋಗಿಸಿಕೊಂಡು ಈಕೆ ಗುಬ್ಬಿಹಳ್ಳಿ ಶ್ರೀನಿವಾಸ ಜೊತೆ ಹೆಚ್ಚು ಹತ್ತಿರವಾಗುತ್ತಾಳೆ. ಅನೈತಿಕ ಸಂಬಂಧದ ಇವರಿಬ್ಬರು ಸೇರಿಕೊಂಡು ಪ್ರದೀಪ್​ನನ್ನ ತಮ್ಮ ದಾರಿಯಿಂದ ದೂರ ಸರಿಸಿದ್ದಾರೆ.

ಅಂದಹಾಗೆ ಪ್ರದೀಪ್ ಕೊಲೆ ನಡೆದಿದ್ದು ನ. 22ರ ರಾತ್ರಿಯೇ. ಶ್ರೀನಿವಾಸನ ಲೀಲೆ ತಿಳಿದಿದ್ದ ಪ್ರದೀಪ್ ಅನೇಕ ಬಾರಿ ಪತ್ನಿ ಜೊತೆ ಆತನಿಗೂ ಎಚ್ಚರಿಕೆ ನೀಡಿದ್ದ. ಆದ್ರೆ ರಾಗಿಣಿ-ಶ್ರೀನಿವಾಸ್ ಅನೈತಿಕ ಸಂಬಂಧ ಮಾತ್ರ ಒಂಚೂರು ಕಡಿಮೆಯಾಗಿರಲಿಲ್ಲ. ಭಾನುವಾರ ರಾತ್ರಿ ಪ್ರದೀಪ್ ಮನೆಗೆ ಬಂದಿದ್ದ ಶ್ರೀನಿವಾಸ್, ನಿನ್ನ ಹೆಂಡ್ತಿಯನ್ನ ನನಗೆ ಬಿಟ್ಟುಕೊಡು ಅಂತ ಕೂತಿದ್ದಾನೆ. ಈಕೆಯೂ ನೀನು ಡೈವರ್ಸ್ ಕೊಡು, ಇಲ್ಲಾ ಆತನೊಂದಿಗೆ ಒಟ್ಟಿಗೆ ಇರಲು ಅವಕಾಶ ಕೊಡು ಅಂದಿದ್ದಾಳೆ. ಯಾವ ಗಂಡಸು ತಾನೇ ಸುಮ್ಮನಿರುತ್ತಾನೆ ಹೇಳಿ? ಆಗ ಪ್ರದೀಪ್ ಕೋಪಗೊಂಡಾಗ ಇಬ್ಬರೂ ಸೇರಿ ಆತನ ಕತೆ ಮುಗಿಸಿದ್ದಾರೆ. ಕೊನೆಗೆ ಬೇರೆ ಕಥೆ ಕಟ್ಟಿ ಎಸ್ಕೇಪ್ ಆಗಲು ಸಂಚು ರೂಪಿಸುತ್ತಿದ್ದಾಗ ಸ್ಥಳೀಯರೇ ಸಖರಾಯಪಟ್ಟಣ ಪೊಲೀಸರಿಗೆ ತಿಳಿಸಿ ಇಬ್ಬರನ್ನ ಲಾಕ್ ಮಾಡಿಸಿದ್ದಾರೆ. ಒಟ್ಟಿನಲ್ಲಿ ಮಾಯಂಗನೆ ರಾಗಿಣಿಯ ದುರ್ಬುದ್ದಿಯಿಂದ ಒಂದೆಡೆ ಇಬ್ಬರು ಮಕ್ಕಳ ಅನಾಥರಾದ್ರೆ, ಇನ್ನೊಂದೆಡೆ ಅಮಾಯಕನ ಪ್ರಾಣ ಪಕ್ಷಿ ಹಾರಿಹೋಗಿದೆ.

Comments are closed.