ಕರ್ನಾಟಕ

ಟಿಪ್ಪು ಹೆಸರಿನಲ್ಲಿ ನಾವು ಮಾಡುವ ಊಟ, ಬಟ್ಟೆಯನ್ನು ಟೀಕೆ ಮಾಡುತ್ತಾರೆ: ತನ್ವೀರ್‌ ಸೇಠ್‌

Pinterest LinkedIn Tumblr


ಮೈಸೂರು: ಟಿಪ್ಪು ಹೆಸರಿನಲ್ಲಿ ನಾವು ಮಾಡುವ ಊಟ, ಬಟ್ಟೆಯನ್ನು ಟೀಕೆ ಮಾಡುತ್ತಾರೆ. ನಿಮಗೆ ತಾಕತ್ತಿದ್ದರೆ ಸಾರಾಯಿ, ಜೂಜಾಟ ನಿಷೇಧ ಮಾಡಿ ಎಂದು ಮಾಜಿ ಸಚಿವ ತನ್ವೀರ್‌ ಸೇಠ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಬನ್ನಿ ಮಂಟಪದ ಸಮುದಾಯ ಭವನದಲ್ಲಿ ಟಿಪ್ಪು ಜಯಂತಿ ಆಚರಣೆ ಬಳಿಕ ಮಾತನಾಡಿದ ಅವರು, ಟಿಪ್ಪುವಿನ ಹೆಸರು ಬಳಸಿಕೊಂಡು ಮುಸಲ್ಮಾನರನ್ನು ದ್ವೇಷ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ಸರ್ಕಾರಕ್ಕೆ ಸವಾಲು ಹಾಕಿದರು.

ಯಾರೂ ಕೂಡಾ ಟಿಪ್ಪು ಜಯಂತಿ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದ ತನ್ವೀರ್ ಸೇಠ್, ಟಿಪ್ಪು ವಿಚಾರದಲ್ಲಿ ಐತಿಹಾಸಿಕ ಸತ್ಯ ತಿರುಚುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು. ಇತಿಹಾಸ ತಿರುಚುವವರಿಗೆ ನಾವು ಗೌರವ ಕೊಡುವ ಅಗತ್ಯ ಇಲ್ಲ ಎಂದ ತನ್ವೀರ್ ಸೇಠ್, ನೂರಾರು ವರ್ಷದಿಂದ ಟಿಪ್ಪು ಅಭಿಮಾನಿಗಳು ಟಿಪ್ಪು ಜಯಂತಿ ಆಚರಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ, ಅವರ ಭಾವನೆಗಳಿಗೆ ನೋವುಂಟು ಮಾಡುವ ಕೆಲಸ ಮಾಡಬಾರದು ಎಂದು ಹೇಳಿದರು.

ರಾಜ್ಯ ಸರ್ಕಾರ ಜನಪರ ಕೆಲಸ ಮಾಡದೇ ಪ್ರತಿ ವರ್ಷವೂ ಟಿಪ್ಪು ಜಯಂತಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಹರಿಹಾಯ್ದ ತನ್ವೀರ್ ಸೇಠ್, ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.

Comments are closed.