ಕರ್ನಾಟಕ

ಸಿಕ್ಕಸಿಕ್ಕವರಿಗೆ ಚಾಕು ಇರಿದ ವ್ಯಕ್ತಿ; ಓರ್ವ ಸಾವು, ಹಲವರು ಗಾಯ; ಆರೋಪಿ ಬಂಧನ

Pinterest LinkedIn Tumblr

ಬೆಂಗಳೂರು: ನಗರದಲ್ಲಿ ವ್ಯಕ್ತಿಯೋರ್ವ ವಿನಾ ಕಾರಣ ಸಿಕ್ಕಿಸಿಕ್ಕಿದವರಿಗೆ ಚಾಕು ಇರಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ.

ಇಂದು ಬೆಳಗ್ಗೆ 8.30ರ ಸುಮಾರಿಗೆ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಚಾಕು ಹಾಕಿ ರಾದ್ದಾಂತ ಮಾಡಿದ್ದ. ಆತನ ರೌದ್ರಾವತಾರಕ್ಕೆ ಐದು ಜನ ಗಾಯಗೊಂಡು ಓರ್ವ ಸಾವನ್ನಪ್ಪಿದ್ದ. ಹೀಗೆ ಅಡ್ಡಾದಿಡ್ಡಿ ಚಾಕು ಹಾಕಿದ ವ್ಯಕ್ತಿ ಈತನೇ ನೋಡಿ ಹೆಸರು ಗಣೇಶ್. ಭಕ್ಷಿ ಗಾರ್ಡನ್ ನಿವಾಸಿಯಾದ ಗಣೇಶ್ ಬೆಳಗ್ಗೆ ಮಟನ್ ತರಲು ಮೈಸೂರು ರಸ್ತೆಯ ಮಟನ್ ಶಾಪ್ ಗೆ ಹೋಗಿದ್ದನಂತೆ. ಈ ವೇಳೆ ಅದೇನಾಯ್ತೊ ಏನೋ ಏಕಾಏಕಿ ಮಟನ್ ಶಾಪ್ ನಲ್ಲಿದ್ದ ಚಾಕು ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ.

ಚಾಕು ತೆಗೆದುಕೊಂಡು ರಸ್ತೆಗೆ ಬಂದ ಗಣೇಶ್ ಬಿನ್ನಿ ಮಿಲ್ ಬಳಿ ರಸ್ತೆಯಲ್ಲಿ ಮಾರಿ ಎಂಬ ಯುವಕನ ಎದೆಗೆ ಚಾಕು ಇರಿದಿದ್ದನಂತೆ. ಚಾಕು ಇರಿದ ರಭಸಕ್ಕೆ ಮಾರಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ. ಬಳಿಕ ರಸ್ತೆಯಲ್ಲಿ ಮುಂದೆ ಸಾಗಿದ ಆರೋಪಿ ಗಣೇಶ್ ವೇಲಾಯುಧನ್, ಸುರೇಶ್ ಎಂಬುವರು ಸೇರಿ ಐವರಿಗೆ ಚಾಕು ಇರಿದು ಗಾಯಗೊಳಿಸಿದ್ದಾನೆ. ಬಾಳೆ ಮಂಡಿಯಿಂದ ಸುಮಾರು ಒಂದೂವರೆ ಕಿ.ಮೀ ಸಾಗಿದ ಆಸಾಮಿ ರಸ್ತೆಯಲ್ಲಿ ಸಿಕ್ಕವರಿಗೆ ಇರಿದು ರಾದ್ದಾಂತ ಮಾಡಿದ್ದಾನೆ.

ಇನ್ನೂ ಗಣೇಶನ ಹುಚ್ಚಾಟ ತಿಳಿದ ಕಾಟನ್ ಪೇಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ವೇಳೆ ರಸ್ತೆಯಲ್ಲಿ ಚಾಕು ಹಿಡಿದು ಓಡಾಡುತ್ತಿದ್ದ ಗಣೇಶನನ್ನ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಇನ್ನೂ ಸ್ಥಳಕ್ಕೆ ಡಿಸಿಪಿ ಸಂಜೀವ್ ಪಾಟೀಲ್ ಸಹ ಭೇಟಿ ನೀಡಿ ಘಟನಾ ಸ್ಥಳ ಪರಿಶೀಲನೆ ನಡೆಸಿ ಆರೋಪಿಯ ವಿಚಾರಣೆ ನಡೆಸಿದ್ದಾರೆ. ಸದ್ಯ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಗಣೇಶನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹಾಗೂ ಆರೋಪಿ ಮಾನಸಿಕ ಅಸ್ವಸ್ಥ ಎಂದು ಮನೆಯವರು ಮಾಹಿತಿ ನೀಡಿದ್ದು, ಆ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Comments are closed.