
ಬೆಂಗಳೂರು: ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ವರ್ಷ ಶಾಲೆಗಳನ್ನು ಆರಂಭಿಸುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಶಾಲೆಗಳ ಪುನಾರಂಭ ಕುರಿತಂತೆ ರಾಜ್ಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಮಕ್ಕಳ ರಕ್ಷಣಾ ಹಕ್ಕುಗಳ ಆಯೋಗವೇ ಶಾಲೆಗಳನ್ನು ಆರಂಭಿಸಿ ಎಂದು ಸಲಹೆ ನೀಡಿದೆ. ಆದರೆ, ಶಿಕ್ಷಕರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಎಚ್. ಡಿ. ಕುಮಾರಸ್ವಾಮಿ ಅವರು ಟ್ವಿಟ್ಟರ್ ಮೂಲಕ ತಮ್ಮಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಶಾಲೆಗಳ ಪುನರಾರಂಭಕ್ಕೆ ಮುಂದಾಗಿದೆ. ಇದೇ ಸಂದರ್ಭದಲ್ಲಿ ವಠಾರ ಶಾಲೆಗೂ ಕೊರೋನಾ ವಕ್ಕರಿಸಿ ಆತಂಕ ಸೃಷ್ಟಿಸಿದೆ. ಎಲ್ಲ ಪೋಷಕರ ದುಗುಡ ಮತ್ತಷ್ಟು ಹೆಚ್ಚಾಗಿದೆ. ವಠಾರ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ನಾಲ್ವರು ಮಕ್ಕಳಿಗೆ ಕೊರೋನಾ ಪಾಸಿಟಿವ್ ಬಂದಿರುವ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದಿದೆ ಎಂದು ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿಗಳೇ ಜೀವ ಮುಖ್ಯ ಅನ್ನೋ ಮಾತು ನಿಜವಾಗಿಸಬೇಕಾದರೆ ಈ ವರ್ಷ ಯಾವುದೇ ಕಾರಣಕ್ಕೂ ಶಾಲೆ ಆರಂಭಿಸಬೇಡಿ. ಕೇಂದ್ರ ಹಾಗೂ ರಾಜ್ಯ ಪಠ್ಯಕ್ರಮದ ಹನ್ನೆರಡನೆಯ ತರಗತಿವರಗೆ ಎಲ್ಲ ಮಕ್ಕಳಿಗೂ ಮುಂದಿನ ತರಗತಿಗೆ ಅವರ ಹಿಂದಿನ ಫಲಿತಾಂಶ ಹಾಗೂ ಪರ್ಫಾರ್ಮೆನ್ಸ್ ಪರಿಗಣಿಸಿ ಬಡ್ತಿ ನೀಡಿ ಎಂದು ಮನವಿ ಮಾಡಿದ್ದಾರೆ].
ಮಕ್ಕಳ ಓದುವಿಕೆ ಆಧಾರದಲ್ಲಿ ಎಲ್ಲ ಮಕ್ಕಳಿಗೂ A,B,C,D, ಎಂಬ ದರ್ಜೆಯನ್ನು ಸಂಬಂಧಿಸಿದ ಶಾಲೆಗಳೆ ನಿರ್ಧರಿಸಿ ನೀಡಲಿ.
10 ಮತ್ತು 12ನೇ ತರಗತಿಗೆ ಇದು ಸಂಪೂರ್ಣವಾಗಿ ಅನ್ವಯವಾಗಲಿ. 1 ರಿಂದ 9ನೇ ತರಗತಿಯವರಿಗೆ ಸಮಾನ ದರ್ಜೆ ನೀಡಿ ಬಡ್ತಿ ನೀಡಲಿ. 2021ರ ಶೈಕ್ಷಣಿಕ ವರ್ಷದಿಂದ ಹೊಸದಾಗಿ ಶಾಲಾ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಿ ಎಂದು ಸಲಹೆ ನೀಡಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಬಾರದೆ ಸೋಂಕು ವಿಪರೀತ ವಾಗುತ್ತಿರುವ ಈ ಸಂದರ್ಭದಲ್ಲಿ ಶಾಲೆಗಳ ಆರಂಭ ದೊಡ್ಡ ಅನಾಹುತಕ್ಕೆ ದಾರಿಯಾಗಲಿದೆ ಎಂಬುದನ್ನು ಸರಕಾರ ಮನಗಾಣಬೇಕು ಎಂದು ಎಚ್ಚರಿಸಿದ್ದಾರೆ.
Comments are closed.