ಕೊಡಗು : ಜಿಲ್ಲೆಯ ಬಾಗಮಂಡಲ ಮತ್ತು ತಲಕಾವೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಇಂದು (ಶನಿವಾರ) ಭಾರೀ ಮಳೆ ಸುರಿಯುತ್ತಿದ್ದರೆ, ಮಡಿಕೇರಿ, ನಾಪೋಕ್ಲು ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗುತ್ತಿದೆ. ಬೆಳಿಗ್ಗೆ ಕೊಂಚ ಬಿಡುವು ನೀಡಿದ್ದ ವರುಣ ಮಧ್ಯಾಹ್ನದ ಬಳಿಕ ಬಿಟ್ಟುಬಿಡದೆ ಎಡಬಿಡದೆ ಜಿಟಿಜಿಟಿ ಅಂತಾ ಸುರಿಯುತ್ತಲೇ ಇದೆ. .
ಬಾಗಮಂಡಲ ತ್ರಿವೇಣಿ ಸಂಗ್ರಮದಲ್ಲೂ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದು ವೇಳೆ ಮಳೆ ತೀವ್ರಗೊಂಡಲ್ಲಿ ಜಿಲ್ಲೆಯಲ್ಲಿ ಮತ್ತೆ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿಯೇ ಮೂರು ದಿನಗಳಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಕಾವೇರಿ ನದಿ ಪಾತ್ರದ ಜನರು ಮತ್ತು ಬೆಟ್ಟ ಪ್ರದೇಶದ ಜನರು ಆತಂಕ ಎದುರಿಸುವಂತೆ ಆಗಿದೆ.
ಮಳೆ ತೀವ್ರಗೊಂಡಂತೆ ತಲಕಾವೇರಿ ಬೆಟ್ಟದ ಸಮೀಪದ ಚೇರಂಗಾಲ ಬೆಟ್ಟದಲ್ಲಿ ವ್ಯಕ್ತಿಯೊಬ್ಬರು ರೆಸಾರ್ಟ್ ನಿರ್ಮಾಣಕ್ಕೆ ಬೆಟ್ಟ ಕೊರೆದಿದ್ದರಿಂದ ಆ ಬೆಟ್ಟ ಕುಸಿಯುವ ಆತಂಕ ಎದುರಾಗಿದೆ. ಒಂದು ವೇಳೆ ಬೆಟ್ಟ ಕುಸಿದಲ್ಲಿ ಕೋಳಿಕಾಡು, ಚೇರಂಗಾಲ ಮತ್ತು ಕೋರಂಗಾಲ ಗ್ರಾಮಗಳ ನೂರಾರು ಕುಟುಂಬಗಳ ಮನೆಗಳು ನೆಲಸಮವಾಗಲಿವೆ ಎನ್ನೋದು ಜನರಿಗೆ ಆತಂಕ ಶುರುವಾಗಿದೆ.
ಈಗಾಗಲೇ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸುರಿದಿರುವ ಭಾರೀ ಮಳೆಗೆ ಇಡೀ ಕೊಡಗು ಜಿಲ್ಲೆ ತತ್ತರಿಸಿ ಹೋಗಿದೆ. ಅಲ್ಲಲ್ಲಿ ಸಂಭವಿಸಿದ ಭೂ ಕುಸಿತಕ್ಕೆ ಹಲವರು ಪ್ರಾಣ ಚೆಲ್ಲಿದ್ದಾರೆ. ಕಳೆದ ವರ್ಷದ ಮಳೆ ಸೃಷ್ಟಿಸಿದ ಆವಾಂತರದಿಂದಲೇ ಈ ಭಾಗದ ಜನ ಇನ್ನೂ ಹೊರಬಂದಿಲ್ಲ. ಮನೆ ಮಠ ಕಳೆದುಕೊಂಡ ಹಲವರು ಈವರೆಗೆ ನೆಲೆ ಕಂಡುಕೊಂಡಿಲ್ಲ. ಈ ನಡುವೆ ಈ ವರ್ಷವು ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದ್ದು ಜನರ ಬದುಕು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.
Comments are closed.