ಕರ್ನಾಟಕ

ಮುಳುಗುವ ಭೀತಿಯಲ್ಲಿ ನಂಜನಗೂಡು

Pinterest LinkedIn Tumblr

ನಂಜನಗೂಡು: ಕೇರಳ ಹಾಗೂ ಕಬಿನಿ ಜಲಾನಯನ ಪ್ರದೇಶದಲ್ಲಿಉತ್ತಮ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯದಿಂದ 50 ಸಾವಿರಕ್ಕೂ ಅಧಿಕ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗಿದೆ. ಇದರಿಂದ ನದಿಪಾತ್ರದ ಪ್ರದೇಶಗಳಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು ನಂಜನಗೂಡಿ ನಲ್ಲಿ ಪ್ರವಾಹ ಭೀತಿ ಶುರುವಾಗಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಕಬಿನಿಯಿಂದ ದಾಖಲೆ ಪ್ರಮಾಣದ ನೀರು ಹರಿಸಿದ್ದರಿಂದ ನಂಜನಗೂಡಿನ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತ ಗೊಂಡಿದ್ದವು. ಇದೀಗ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಮರುಕಳಿಸಿದ್ದು ತಗ್ಗು ಪ್ರದೇಶದ ನಿವಾಸಿಗಳನ್ನು ಆತಂಕಕ್ಕೊಳಪಡಿಸಿದೆ.

ತಾಲೂಕು ಆಡಳಿತದ ಅಧಿಕಾರಿಗಳು ನದಿ ಪಾತ್ರದ ಮುಳುಗಡೆ ಪ್ರದೇಶಗಳಾದ ಹೆಜ್ಜಿಗೆ, ಕತ್ವಾಡಿಪುರ, ಬೊಕ್ಕಹಳ್ಳಿ, ಹಳ್ಳದಕೇರಿ, ಕುಳ್ಳಂಕಯ್ಯನ ಹುಂಡಿ, ಸರಸ್ವತಿ ಕಾಲನಿ ಸೇರಿದಂತೆ ಇತರೆ ಪ್ರದೇಶಗಳಲ್ಲಿರುವ ನಿವಾಸಿಗಳಿಗೆ ಮುನ್ನಚ್ಚರಿಕೆ ನೀಡಿ ಬೇರೆಡೆಗೆ ಸ್ಥಳಾಂತರ ಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಇನ್ನು ಈಗಾಗಲೇ ಕಪಿಲಾ ನದಿಯಲ್ಲಿ ಹೊರಹರಿವು ಹೆಚ್ಚಾಗಿರುವುದರಿಂದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಸ್ನಾನಘಟ್ಟ, ಮಲ್ಲನಮೂಲೆ ಗುರುಕಂಬ ಳೀಶ್ವರ ಮಠ, ಸಂಗಮದಲ್ಲಿರುವ ಶ್ರೀಮಹದೇವತಾತಾ ಐಕ್ಯಸ್ಥಳ ಹಾಗೂ ಸುತ್ತೂರು ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಸ್ನಾನಘಟ್ಟಗಳು ಜೊತೆಗೆ ನಂಜನಗೂಡು ಪರಶುರಾಮ ದೇವಾಲಯ ಹಾಗೂ 14 ಕಾಲು ಮಂಟಪ ಮುಳುಗಡೆಗೊಂಡಿವೆ.

ಪಾರಂಪರಿಕ ಹದಿನಾರು ಕಾಲುಮಂಟಪ ಭಾಗಶಃ ಮುಳುಗಡೆಯಾಗಿದ್ದು ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಆಗಮಿಸುವ ಭಕ್ತರು ಪ್ರವಾಹ ಭೀತಿಯಲ್ಲೂ ಪುಣ್ಯಸ್ನಾನಕ್ಕೆ ಮುನ್ನುಗ್ಗುತ್ತಿರುವುದರಿಂದ ದೇವಾಲಯದ ಸಿಬ್ಬಂದಿಗಳು ನದಿಗಿಳಿಯುವ ಭಕ್ತರನ್ನು ನಿಯಂತ್ರಿಸಲು ಪರದಾಡುತ್ತಿದ್ದಾರೆ.

ನಗರದ ಪ್ರದೇಶದ ಬಡಾವಣೆಗಳ ಕೆಎಂಆರ್‌ಪಿ 24್ಡ7 ಕುಡಿಯುವ ನೀರಿನ ಯೋಜನೆಯ ದೇಬೂರು ಬಳಿಯ ಪಂಪ್‌ಹೌಸ್‌, ಗುಂಡ್ಲುಪೇಟೆ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಪಂಪ್‌ಹೌಸ್‌ ಮುಳುಗಡೆ ಭೀತಿ ಎದುರಾಗಿದ್ದು, ಕುಡಿಯುವ ನೀರಿನ ಪೂರೈಕೆಯಲ್ಲಿವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಜತೆಗೆ ನದಿ ಪ್ರವಾಹದಿಂದಾಗಿ ನದಿ ತೀರದಲ್ಲಿರುವ ಕೃಷಿ ಜಮೀನು ಮುಳುಗಡೆಯಾಗುವ ಆತಂಕದಿಂದಾಗಿ ರೈತರು ಕೃಷಿ ಚಟುವಟಿಕೆಯಿಂದ ವಿಮುಖರಾಗಿದ್ದಾರೆ.

 

Comments are closed.