ಕೊಯಮತ್ತೂರು: ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಫೇಸ್ಬುಕ್ನಲ್ಲಿ ಲೈವ್ ಸೂಸೈಡ್ ಮಾಡಿಕೊಂಡಿರುವ ಆತಂಕಕಾರಿ ಘಟನೆ ಬುಧವಾರ ನಡೆದಿದೆ.
ಮೃತ ವ್ಯಕ್ತಿಯನ್ನು ರಾಮ್ಕುಮಾರ್ (37) ಎಂದು ಗುರುತಿಸಲಾಗಿದೆ. ಈತ ತಿರುಪುರ್ ಜಿಲ್ಲೆಯ ಧರಪುರಂ ಬಳಿಯ ಚಿನ್ನರವುತನ್ಪಾಳ್ಯಂ ಗ್ರಾಮದ ನಿವಾಸಿ. ಈತ ತಿರುಪುರ್ ನಗರದ ಪೋಲುಪಟ್ಟಿ ಪಿರಿವು ಏರಿಯಾದಲ್ಲಿ ತನ್ನ ಪತ್ನಿ ಹಾಗೂ 13 ವರ್ಷದ ಮಗನೊಂದಿಗೆ ವಾಸವಿದ್ದರು.
ರಾಮ್ಕುಮಾರ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಟೇಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬುಧವಾರ ರಾತ್ರಿ ಒಂದು ಗಂಟೆಗೆ ಪಾನಮತ್ತ ಸ್ಥಿತಿಯಲ್ಲಿ ಮನೆಗೆ ಬಂದ ರಾಮ್ಕುಮಾರ್, ತನ್ನ ಕೊಣೆಯ ಬಾಗಿಲನ್ನು ಒಳಗಿಂದ ಲಾಕ್ ಮಾಡಿಕೊಂಡಿದ್ದ. ಬಳಿಕ ಫೇಸ್ಬುಕ್ಗೆ ಲಾಗಿನ್ ಆಗಿ ಲೈವ್ ಸ್ಟ್ರೀಮ್ ಆಯ್ಕೆ ಮಾಡಿ ಸೂಸೈಡ್ ಮಾಡಿಕೊಳ್ಳಲು ಮುಂದಾದ.
ಸೂಸೈಡ್ ವಿಡಿಯೋ ನೋಡಿದ ಜನರು ತಕ್ಷಣ ತಿರುಪುರ್ ನಗರ ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿದ್ದಾರೆ. ಇನ್ನೊಂದೆಡೆ ಪತಿ ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಳ್ಳುವುದನ್ನು ನೋಡಿದ ಪತ್ನಿ ತಕ್ಷಣ ಮನೆಯ ಒಡತಿಯನ್ನು ಸಹಾಯಕ್ಕಾಗಿ ಕರೆದಿದ್ದಾಳೆ. ಇಬ್ಬರು ಸೇರಿ ರಾಮ್ಕುಮಾರ್ ಇದ್ದ ಕೋಣೆಯ ಬಾಗಿಲನ್ನು ಮುರಿದಿದ್ದಾರೆ. ತಕ್ಷಣ ನೆರೆಯವರ ಸಹಾಯದಿಂದ ತಿರುಪುರ್ ಮೆಡಿಕಲ್ ಕಾಲೇಜು ಮತ್ತು ಹಾಸ್ಪಿಟಲ್ಗೆ ದಾಖಲಿಸಿದ್ದರು. ಆದರೆ, ಮಾರ್ಗ ಮಧ್ಯೆದಲ್ಲೇ ಸಾವಿಗೀಡಾಗಿರುವುದಾಗಿ ವೈದ್ಯರು ದೃಢಪಡಿಸಿದರು.
ಇನ್ನು ರಾಮ್ಕುಮಾರ್ ಕೋಣೆಯಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದ್ದು, ನನ್ನ ಸಾವಿಗೆ ಯಾರೂ ಜವಬ್ದಾರರಲ್ಲ ಮತ್ತು ಈ ಜಗತ್ತಿನಲ್ಲಿ ಜೀವಿಸುವ ಆಸಕ್ತಿಯನ್ನು ಕಳೆದುಕೊಂಡಿದ್ದೇನೆ ಎಂದು ಉಲ್ಲೇಖಿಸಲಾಗಿದೆ.
ಪತಿಯ ಬಗ್ಗೆ ಮಾತನಾಡಿದ ಪತ್ನಿ, ಏಳು ವರ್ಷದ ಹಿಂದೆಯೇ ಒಮ್ಮೆ ಸೂಸೈಡ್ಗೆ ಪ್ರಯತ್ನಿಸಿದ್ದರು. ಆಗ ಮನೆಯವರೇ ರಕ್ಷಿಸಿದ್ದರು ಎಂದಿದ್ದಾರೆ. ಸದ್ಯ ಅನುಪ್ಪರಪಾಳ್ಯಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದುಕೊಳ್ಳಲು ತನಿಖೆ ನಡೆಸಲಾಗುತ್ತಿದೆ.
Comments are closed.