ಕರ್ನಾಟಕ

ಹಾಸನದಲ್ಲಿ ಸೋಂಕಿತೆ ಮೃತಪಟ್ಟು ಎರಡು ದಿನದ ನಂತರ ಬಂದ ಕೊರೊನಾ ವರದಿ

Pinterest LinkedIn Tumblr


ಹಾಸನ: ಕೋವಿಡ್-19 ವರದಿ ಕೈಸೇರುವ ಮುನ್ನವೇ ಸೋಂಕಿತ ವೃದ್ಧೆ ಇಹಲೋಕ ತ್ಯಜಿಸಿದ ಪ್ರಕರಣಕೂಡ ಎರಡು ದಿನ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಮಗನ ಮನೆಯಿಂದ ಜೂ.17 ರಂದು ಚನ್ನರಾಯಪಟ್ಟಣಕ್ಕೆ ಹಿಂತಿರುಗಿದ್ದ 60 ವರ್ಷದ ವೃದ್ಧೆ ಜ್ವರ, ಚಳಿ ಎಂದು ಖಾಸಗಿ ವೈದ್ಯರ ಬಳಿ ತಪಾಸಣೆಗೆ ತೆರಳಿದ್ದರು.

ಅಲ್ಲಿಂದ ಕೋವಿಡ್-19 ಪರೀಕ್ಷೆಗೆ ಒಳಪಡಿಸಿ ಮನೆಗೆ ಕಳುಹಿಸಲಾಗಿತ್ತು ಅಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಭಾನುವಾರ ರಾತ್ರಿ ಕೊರೊನಾ ಸೋಂಕು ಇರುವುದು ದೃಢಪಟ್ಟ ವರದಿ ಕೈಸೇರಿದೆ ಎಂದು ಡಿಎಚ್‌ಒ ಡಾ.ಸತೀಶ್ ತಿಳಿಸಿದ್ದಾರೆ.

ಪ್ರಸ್ತುತ ದಿನದಲ್ಲಿ ಕೊರೊನಾ ಸೋಂಕಿನ ಲಕ್ಷಣವೇ ಇಲ್ಲದ ವ್ಯಕ್ತಿಗಳಲ್ಲೂ ಪಾಸಿಟೀವ್ ಬರುತ್ತಿದೆ ಹೀಗಿರುವಾಗ ಜ್ವರದಿಂದ ಬಳಲುತ್ತಿದ್ದ ವೃದ್ಧೆಯನ್ನು ಕೋವಿಡ್ ಆಸ್ಪತ್ರೆಗೆ ಏಕೆ ದಾಖಲಿಸಲಿಲ್ಲ ಎಂಬುದು ಪ್ರಶ್ನೆಯಾಗಿದೆ.

ಜಿಲ್ಲೆಯಲ್ಲಿ ಮೂರನೇ ಬಲಿ:
ಹಾಸನ ತಾಲೂಕಿನ ವೃದ್ಧ ಜೂ. 12 ರಂದು ಮೃತಪಟ್ಟಿದ್ದರು. ಜೂ.17 ರಂದು ಮುಂಬಯಿಯಿಂದ ಹಾಸನಕ್ಕೆ ಬಂದಿದ್ದ ವೃದ್ಧೆ ಜೂ.28 ರಂದು ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಜೂ. 27 ರಂದು ಚನ್ನರಾಯಪಟ್ಟಣ ತಾಲೂಕಿನಲ್ಲಿ 60 ವರ್ಷದ ವೃದ್ಧೆ ಮೃತಪಡುವ ಮೂಲಕ ಕೋವಿಡ್‌ಗೆ ಬಲಿಯಾದವರ ಸಂಖ್ಯೆ ಜಿಲ್ಲೆಯಲ್ಲಿ ಮೂರಕ್ಕೇ ಏರಿದಂತಾಗಿದೆ.

ಕಾಂಟ್ಯಾಕ್ಟ್ ಟ್ರೇಸಿಂಗ್:
ಹೊಳೆನರಸೀಪುರದ 34 ವರ್ಷದ ಹೆಲ್ತ್‌ಕೇರ್ ವರ್ಕರ್ ಸೋಂಕು ಕಾಣಿಸಿಕೊಂಡರೆ, ಹೊಳೆನರಸೀಪುರದ 35 ವರ್ಷದ ಪುರುಷ, ಅರಸೀಕೆರೆಯ 28 ವರ್ಷದ ಪುರುಷ ಯಾರೊಂದಿಗೆ ಸಂಪರ್ಕ ಹೊಂದಿದ್ದ ಎಂಬುದನ್ನು ತಿಳಿಯಲು ಕಸರತ್ತು ನಡೆಯುತ್ತಿದೆ.

ಸೋಮವಾರ ಹೊಸದಾಗಿ 22 ಪ್ರಕರಣ
ಜಿಲ್ಲೆಯಲ್ಲಿ ಶರವೇಗದಲ್ಲಿ ಸಾಗಿದ ಕೋವಿಡ್-19 ಪ್ರಕರಣಗಳು ಪತ್ತೆಯಾಗುತ್ತಲೇ ಇದ್ದು, ಸೋಮವಾರ ಕೂಡ 22 ಸೋಂಕಿತ ಪ್ರಕರಣ ಬೆಳಕಿಗೆ ಬರುವ ಮೂಲಕ ಸೋಂಕಿತರ ಸಂಖ್ಯೆ 382ಕ್ಕೆ ಏರಿಕೆಯಾಗಿದೆ. ಸೋಮವಾರ ಪತ್ತೆಯಾದ 22 ಪ್ರಕರಣಗಳಲ್ಲಿ ಏಳು ಜನ ಅರಸೀಕೆರೆ ತಾಲೂಕಿನವರಾಗಿದ್ದು, ಹತ್ತು ಜನ ಹೊಳೆನರಸೀಪುರ, ನಾಲ್ಕು ಜನ ಹಾಸನ ತಾಲೂಕಿನವರು ಹಾಗೂ ಇನ್ನೊಬ್ಬರು ಚನ್ನರಾಯಪಟ್ಟಣ ತಾಲೂಕಿಗೆ ಸೇರಿದವರಾಗಿದ್ದಾರೆ. ಸೋಂಕಿತರು ಚಿಕಿತ್ಸೆ ಪಡೆದು ಈ ವರೆಗೆ 240 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 139 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾರೆ.

Comments are closed.