ಕರ್ನಾಟಕ

ತಣ್ಣಗಾಗದ ಕಮಲ ಬಂಡಾಯ: ಬಿಎಸ್‌ವೈ ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕಿದ ಶಾಸಕರು

Pinterest LinkedIn Tumblr


ಬೆಂಗಳೂರು: ಕಮಲ ಪಾಳಯದಲ್ಲಿ ಭುಗಿಲೆದ್ದ ಬಂಡಾಯ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರು ಮತ್ತೊಂದು ಸುತ್ತಿನ ಸಭೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಶಾಸಕರಾದ ಉಮೇಶ್ ಕತ್ತಿ, ಬಸನಗೌಡ ಪಾಟೀಲ್‌ ಯತ್ನಾಳ್ ನೇತೃತ್ವದಲ್ಲಿ ಅತೃಪ್ತರ ಬಣ ಒಂದು ಸುತ್ತಿನ ಸಭೆಯನ್ನು ನಡೆಸಿದೆ. ಈ ಸಭೆ ರಾಜ್ಯ ರಾಜಕೀಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸಭೆಯ ಬೆನ್ನಲ್ಲೇ ಬಿಎಸ್‌ವೈ ನಾಯಕತ್ವದ ವಿರುದ್ಧ ಅಸಮಾಧಾನವನ್ನು ಶಾಸಕರು ಹೊರಹಾಕಿದ್ದಾರೆ.

ಅತೃಪ್ತ ಶಾಸಕರ ಬಂಡಾಯ ಕಮಲ ಪಾಳಯಕ್ಕೆ ತೀವ್ರ ಮುಜುಗರವನ್ನು ಉಂಟುಮಾಡಿದೆ. ಈ ನಡುವೆ ಬಂಡಾಯಕ್ಕೆ ತೇಪೆ ಹಾಕುವ ಪ್ರಯತ್ನಗಳು ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಬಹಿರಂಗವಾಗಿ ಅತೃಪ್ತಿಯನ್ನು ಹೊರಹಾಕಬಾರದು ಎಂಬ ಸೂಚನೆಯನ್ನು ನೀಡಲಾಗಿದೆ.

ಆದರೆ ಅತೃಪ್ತರು ಇದರಿಂದ ತಣ್ಣಗಾಗಿಲ್ಲ. ಪ್ರತ್ಯೇಕ ಸಭೆಯನ್ನು ನಡೆಸುವ ಮೂಲಕ ಬಂಡಾಯದ ಬಾವುಟ ಹಾರಿಸಿರುವ ಭಿನ್ನಮತೀಯರು ಮತ್ತೊಂದು ಸಭೆಯನ್ನು ನಡೆಸುವ ಯೋಚನೆಯಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬುಧವಾರ ನಗರದಲ್ಲಿ ಮತ್ತೆ ಸಭೆ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯ ಮುಖಂಡರು ಕೂಡಾ ಸಾಕಷ್ಟು ಎಚ್ಚರಿಕೆಗಳನ್ನು ವಹಿಸಿಕೊಂಡಿದ್ದಾರೆ.

ಮತ್ತೊಂದು ಪ್ರತ್ಯೇಕ ಸಭೆ ನಡೆದರೆ ಸರ್ಕಾರಕ್ಕೆ ಇದರಿಂದ ಮತ್ತಷ್ಟು ಮುಜುಗರ ಆಗಲಿದೆ. ಈ ನಿಟ್ಟಿನಲ್ಲಿ ಶಾಸಕರ ಮನವೋಲಿಕೆಯ ಪ್ರಯತ್ನವನ್ನು ನಡೆಸಲಾಗುತ್ತಿದೆ. ಕ್ಷೇತ್ರದ ಅನುದಾನ ವಿಚಾರವಾಗಿಯೂ ಶಾಸಕರ ಜೊತೆಗೆ ಚರ್ಚೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನವೂ ನಡೆಯುತ್ತಿದೆ ಎನ್ನಲಾಗುತ್ತಿದೆ.

Comments are closed.