ಕರ್ನಾಟಕ

ಶೆಡ್‌ನಲ್ಲಿ ಕೂಡಿ ವಲಸೆ ಕಾರ್ಮಿಕ ಮಹಿಳೆಯರ ಸರಣಿ ಅತ್ಯಾಚಾರ

Pinterest LinkedIn Tumblr


ಬೆಂಗಳೂರು: ಕುಂಬಳಗೋಡುವಿನಲ್ಲಿರುವ ಭಾರತ್‌ ಕೆಮಿಕಲ್‌ ಪ್ರಾಡಕ್ಟ್ಸ್‌ ಕಾರ್ಖಾನೆಗೆ ಸೇರಿದ ಜಾಗದಲ್ಲಿ ಜಾರ್ಖಂಡ್‌ನ ಆದಿವಾಸಿ ಮಹಿಳೆಯರನ್ನು ಕೂಡಿ ಹಾಕಿ ದುಡಿಸಿಕೊಳ್ಳುತ್ತಿದ್ದದ್ದು ಮಾತ್ರವಲ್ಲದೆ, ಇವರ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿತ್ತು. ಇತರೆ ರಾಜ್ಯದ ವಲಸೆ ಕಾರ್ಮಿಕರ ನೆರವಿನಿಂದ ಶೆಡ್‌ನಿಂದ ತಪ್ಪಿಸಿಕೊಂಡು ಬಂದ ಸಂತ್ರಸ್ಥೆಯರು ಪೊಲೀಸರಿಗೆ ನಡೆದಿರುವುದನ್ನೆಲ್ಲಾ ವಿವರಿಸಿದ್ದಾರೆ.

ಸದ್ಯ ಸಂಜಯ್‌ ಮತ್ತು ಕಿರಣ್‌ ಎಂಬಿಬ್ಬರನ್ನು ಕುಂಬಳಗೋಡು ಪೊಲೀಸರು ಬಂಧಿಸಿದ್ದಾರೆ. ಕಾರ್ಖಾನೆಯ ಸೂಪರ್‌ವೈಸರ್‌ ಸಂಜೀವ್‌ ಸೇರಿ ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆಗಳಿವೆ.

ಠಾಣೆ ಬಾಗಿಲಲ್ಲೇ ಸಿಕ್ಕ
ಬಂಧಿತ ಆರೋಪಿಗಳು ಸಂತ್ರಸ್ತೆಯರ ಆಧಾರ್‌ಕಾರ್ಡ್‌, ಮೊಬೈಲ್‌ ಸೇರಿ ಎಲ್ಲಾ ದಾಖಲೆಗಳನ್ನು ಕಿತ್ತುಕೊಂಡಿದ್ದರು. ಶೆಡ್‌ನಿಂದ ತಪ್ಪಿಸಿಕೊಂಡ ಸಂತ್ರಸ್ತೆಯರು ವಲಸೆ ಕಾರ್ಮಿಕರೆಲ್ಲಾ ತಮ್ಮ ತವರಿಗೆ ಮರಳುತ್ತಿರುವುದು ಗೊತ್ತಾಗಿ ತಮ್ಮನ್ನೂ ಊರಿಗೆ ಕಳಿಸಿ ಎಂದು ಮನವಿ ಮಾಡಿಕೊಳ್ಳಲು ಕೆಂಗೇರಿ ಠಾಣೆಗೆ ಬಂದರು. ಆಗ ಅವರಿಗೆ ತಮ್ಮದೇ ಗ್ರಾಮದ ನಿಕೋಲಸ್‌ ಮುರ್ಮು ಎಂಬಾತ ಕಣ್ಣಿಗೆ ಬಿದ್ದ. ನಿಕೋಲಸ್‌ ಬಳಿ ತಮ್ಮ ಭಾಷೆಯಲ್ಲೇ ನಡೆದದ್ದನ್ನೆಲ್ಲಾ ವಿವರಿಸಿ ಹತ್ತಾರು ಬಾರಿ ಅತ್ಯಾಚಾರ ಎಸಗಿದ್ದನ್ನೂ ಹೇಳಿಕೊಂಡಿದ್ದಾರೆ. ಬಳಿಕ ನಿಕೋಲಸ್‌ ಕಾರ್ಮಿಕ ಸಂಘಟನೆ ಮುಖಂಡರು ಹಾಗೂ ವಕೀಲೆ ರಾಜಲಕ್ಷ್ಮಿ ಬಳಿಗೆ ಸಂತ್ರಸ್ತೆಯರನ್ನು ಕರೆದುಕೊಂಡು ಹೋಗಿ ಅವರ ಮುಖಾಂತರ ದೂರು ದಾಖಲಿಸಿದ್ದಾರೆ.

ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿ ಸಂತ್ರಸ್ತೆಯರನ್ನು ವೈದ್ಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಧೀಶರ ಮುಂದೆ ಸ್ವ ಇಚ್ಚಾ ಹೇಳಿಕೆ ದಾಖಲಿಸಿದ್ದಾರೆ.

ಮಾನವ ಕಳ್ಳ ಸಾಗಣೆ
ಅತ್ಯಾಚಾರಕ್ಕೆ ಒಳಗಾಗಿರುವ ಇಬ್ಬರು ಸೇರಿ ಹತ್ತಾರು ಮಹಿಳೆಯರನ್ನು ಜಾರ್ಖಂಡ್‌ ನಿಂದ 2019 ರ ಅಕ್ಟೋಬರ್‌ನಲ್ಲಿ ಮಧ್ಯವರ್ತಿ ಮೂಲಕ ದಿಲ್ಲಿಯ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲಾಗಿತ್ತು. ಆತ 2020ರಲ್ಲಿ ಈ ಮಹಿಳೆಯರನ್ನು ಬೆಂಗಳೂರಿಗೆ ಕರೆತಂದು ಭಾರತ್‌ ಕೆಮಿಕಲ್‌ ಪ್ರಾಡಕ್ಟ್ಸ್‌ನಲ್ಲಿ ಕೆಲಸಕ್ಕೆ ಸೇರಿಸಿದ್ದ. ಬೆಂಗಳೂರಿನಲ್ಲಿ ತಿಂಗಳಿಗೆ 9 ಸಾವಿರ ಸಂಬಳ ಕೊಡಲಾಗುವುದು ಎಂದು ದಿಲ್ಲಿಯಲ್ಲಿದ್ದಾಗ ಹೇಳಲಾಗಿತ್ತು. ಆದರೆ ಇಲ್ಲಿವಾರಕ್ಕೆ 200 ರೂ ಮಾತ್ರ ಕೊಡುತ್ತಿದ್ದರು. ಎಲ್ಲಾ ಬುಡಕಟ್ಟು ಮಹಿಳೆಯರನ್ನು 10 ಅಡಿ ಎತ್ತರದ ಕಾಂಪೌಂಡ್‌ ಇರುವ ಆವರಣದ ಶೆಡ್‌ಗಳಲ್ಲಿ ಇರಿಸಲಾಗಿತ್ತು. ಕಾರ್ಖಾನೆ ಹೊರತುಪಡಿಸಿ ಹೊರಗೆಲ್ಲೂ ಹೋಗಲು ಸಾಧ್ಯವಿರಲಿಲ್ಲ ಎಂದು ಸಂತ್ರಸ್ತೆಯರು ದೂರಿನಲ್ಲಿ ತಿಳಿಸಿದ್ದಾರೆ.

ಭಯಾನಕ ಜಾಲ
ಈ ಬುಡಕಟ್ಟು ಮಹಿಳೆಯರಿಗೆ ತಮ್ಮನ್ನು ಯಾರು ಎಲ್ಲಿಂದ ಎಲ್ಲಿಗೆ ಕಳುಹಿಸುತ್ತಾರೆ ಎನ್ನುವುದು ಕೂಡ ಗೊತ್ತಿಲ್ಲ. ನಕಲಿ ಹೆಸರುಗಳಲ್ಲಿ ಪರಿಚಯಿಸಿಕೊಂಡವರು ರಾಜ್ಯದಿಂದ ರಾಜ್ಯಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ಒಪ್ಪಿಸಿ ಹೋಗುತ್ತಾರೆ. ಬಹಳ ಕಷ್ಟಪಟ್ಟು ಹಿಂದೊಮ್ಮೆ ಈ ಮಹಿಳೆಯರು ತಪ್ಪಿಸಿಕೊಂಡರಾದರೂ ಕಂಪನಿಯವರು ಇವರನ್ನು ರೈಲು ನಿಲ್ದಾಣದವರೆಗೂ ಬೆನ್ನತ್ತಿ ಬಂದು ವಾಪಾಸ್‌ ಶೆಡ್‌ಗೆ ಎಳೆದೊಯ್ದು ಕೂಡಿ ಹಾಕಿದ್ದಲ್ಲದೆ ಸರಣಿ ಅತ್ಯಾಚಾರವೆಸಗಿದ್ದರು. ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಿಂದ ಮಾನವ ಕಳ್ಳ ಸಾಗಣೆ ಮಾಡುವ ದೊಡ್ಡ ಜಾಲವೇ ಇದರ ಹಿಂದೆ ಇರಬಹುದು ಎಂದು ಅಪರಾಧ ವಿಭಾಗದ ಅಧಿಕಾರಿಗಳು ಶಂಕಿಸಿದ್ದಾರೆ.

ಕಂಪನಿ ಮಾಲೀಕರ ಹೆಸರಿಲ್ಲ
ಅಚ್ಚರಿ ಎಂದರೆ ಮಹಿಳೆಯರನ್ನು ಕೂಡಿ ಹಾಕಿ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದ ಕಾರ್ಖಾನೆ ಮಾಲೀಕರ ಮೇಲೆ ಇನ್ನೂ ಕೇಸು ದಾಖಲಾಗಿಲ್ಲ.

Comments are closed.