ರಾಜ್ಯದಲ್ಲಿ ಶಾಲಾ -ಕಾಲೇಜುಗಳನ್ನು ಲಾಕ್ ಡೌನ್ ನಂತರ ಆರಂಭಿಸಿದರೆ, ಮಕ್ಕಳಿಗೆ ಕೊರೊನಾ ತಗುಲಬಹುದು ಎಂಬ ಭೀತಿಯಲ್ಲಿದ್ದ ಪೋಷಕರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೆಮ್ಮದಿಯ ಸುದ್ದಿಯನ್ನು ನೀಡಿದ್ದಾರೆ.
ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಲಾಕ್ ಡೌನ್ ಅಂತ್ಯಗೊಂಡ ತಕ್ಷಣವೇ ಶಾಲಾ-ಕಾಲೇಜು ತೆರೆಯುವುದಿಲ್ಲ. ಪೋಷಕರು, ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಬಾರದು ಎನ್ನುವ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿರುವ ಭೀತಿ, ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ರಾಜ್ಯದ ಶಾಲಾ ಮಕ್ಕಳ ಪೋಷಕರಿಗೆ ಒಂದು ಮಾಹಿತಿ. ತರಾತುರಿಯಲ್ಲಿ ನಮ್ಮ ರಾಜ್ಯದ ಶಾಲೆಗಳನ್ನು ತೆರೆಯುವುದಿಲ್ಲ. ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ನಮ್ಮದು. ಮಾಧ್ಯಮಗಳಲ್ಲಿ ಬರುತ್ತಿರುವ ಕೆಲ ಮಾಹಿತಿಗಳು ಅಧಿಕೃತವಲ್ಲ. ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂಬುದಾಗಿ ಅವರು ಟ್ಟಿಟ್ ಮಾಡಿದ್ದಾರೆ.
ಪೋಷಕರು, ವಿದ್ಯಾರ್ಥಿಗಳು ಕೊರೊನಾ ಸೋಂಕಿನ ಭೀತಿಗೆ ಒಳಗಾಗಬಾರದು. ಮಾಧ್ಯಮಗಳಲ್ಲಿ ಬರುತ್ತಿರುವ ಕೆಲವು ಮಾಹಿತಿಗಳು ಅಧಿಕೃತವಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ವಾರದೊಳಗೆ ಪರೀಕ್ಷಾ ಎಸ್ಸೆಸ್ಸೆಲ್ಸಿ ವೇಳಾಪಟ್ಟಿ ಪ್ರಕಟ
ಒಂದು ವಾರದ ಒಳಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಹೇಳಿದ್ದಾರೆ. ಕೋವಿಡ್-19 ನಂತರದ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿಕಾಸಸೌಧದಲ್ಲಿ ಶಿಕ್ಷಣ ಕ್ಷೇತ್ರದ ಪರಿಷತ್ ಸದಸ್ಯರೊಂದಿಗೆ ವಿಡಿಯೋ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
”ಎಸ್ಸೆಸ್ಸೆಲ್ಸಿ ಪರೀಕ್ಷೆ ಈಗಾಗಲೇ ಸಾಕಷ್ಟು ತಡವಾಗಿದೆ. ಪರೀಕ್ಷೆಗೆ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಮೇ 18ರಂದು ಸಿಎಂ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು,” ಎಂದು ಹೇಳಿದ್ದಾರೆ.
ಕೋವಿಡ್-19ನಿಂದಾಗಿ 2020-21ನೇ ಸಾಲಿಗೆ ಶೈಕ್ಷಣಿಕ ಚಟುವಟಿಕೆ ವಿಳಂಬ, ಪಠ್ಯಕ್ರಮ ಕಡಿತ, ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಪಾಡುವಿಕೆ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ವೇಳಾಪಟ್ಟಿ ಪ್ರಕಟಣೆ, ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಫಲಿತಾಂಶ ಪ್ರಕಟಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.
”ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ಕೈ ಬಿಡಬಾರದು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪಾಳಿಯಲ್ಲಿ ತರಗತಿಗಳನ್ನು ನಡೆಸುವುದು ಉತ್ತಮ ಕ್ರಮ. ಆದರೆ, ಪಠ್ಯಕ್ರಮ ಕಡಿತ ಮಾಡಿರುವುದು ಸರಿಯಲ್ಲ. ಕೇಂದ್ರ ಪಠ್ಯದ ಶಾಲೆಗಳಲ್ಲಿನ ತೀರ್ಮಾನಗಳಿಗೆ ಅನುಗುಣವಾಗಿ ನಿರ್ಧರಿಸಬೇಕು,” ಎಂದು ಸಲಹೆ ನೀಡಿದರು. ಬಸವರಾಜ ಹೊರಟ್ಟಿ, ಶರಣಪ್ಪ ಮಟ್ಟೂರು, ಡಾ.ಚಂದ್ರಶೇಖರ ಪಾಟೀಲ, ಪುಟ್ಟಣ್ಣ, ಸಂಕನೂರು, ಅ.ದೇವೇಗೌಡ, ಹನುಮಂತ ನಿರಾಣಿ, ಆಯೂನೂರು ಮಂಜುನಾಥ, ತೂಪಲ್ಲಿ ಚೌಡರೆಡ್ಡಿ, ಮರಿತಿಬ್ಬೇಗೌಡ, ಅರುಣ ಶಹಾಪುರ ಭಾಗವಹಿಸಿದ್ದರು. ಕೆ.ಟಿ. ಶ್ರೀಕಂಠೇಗೌಡ, ಭೋಜೆಗೌಡ, ನಾರಾಯಣಸ್ವಾಮಿ ನೇರ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
Comments are closed.