ಕರ್ನಾಟಕ

ಕೊರೊನಾಗೆ ಔಷಧಿ ಕಂಡು ಹಿಡಿದಿದ್ದೇನೆ: ಸ್ವಯಂ ಘೋಷಿತ ದೈವಮಾನವ ನಿತ್ಯಾನಂದ

Pinterest LinkedIn Tumblr


ಬೆಂಗಳೂರು: ವಿಶ್ವಾದ್ಯಂತ ಹರಡುತ್ತಿರುವ ಕೊರೊನಾ ವೈರಸ್‍ಗೆ ಸ್ವಯಂ ಘೋಷಿತ ದೈವಮಾನವ ನಿತ್ಯಾನಂದ ಔಷಧಿ ಕಂಡುಹಿಡಿದ್ದೇನೆ ಎಂದು ವಿಡಿಯೋವೊಂದನ್ನು ಹರಿಬಿಟ್ಟಿದ್ದಾನೆ.

ಕೊರೊನಾವನ್ನು ನಾನು ಗುಣಪಡಿಸುತ್ತೇನೆ. ಸೋಂಕಿಗೆ ಮದ್ದು ಕಂಡು ಹಿಡಿದಿದ್ದೇನೆ. ಇಂದಿನಿಂದ ಕೊರೊನಾಗೆ ಚಿಕಿತ್ಸೆ ಕೊಡಲಿರುವೆ ಎಂದು ನಿತ್ಯಾನಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ನಾನು ಹೇಳುವ ಮಂತ್ರವನ್ನು 48 ಗಂಟೆಗಳ ಕಾಲ ಪಠಿಸಿದರೆ ಸಾಕು ಕೊರೊನಾ ವೈರಸ್ ದೇಹ ಬಿಟ್ಟು ಹೋಗುತ್ತೆ ಎಂದಿದ್ದಾನೆ.

“ಓಂ ನಿತ್ಯಾನಂದ ಪರಮ ಶಿವೋಹಂ” ಎಂದು ನಿರಂತರ 48 ಗಂಟೆಗಳ ಕಾಲ ಮಂತ್ರ ಪಠಿಸಿದರೆ ಕೊರೊನಾ ದೇಹ ಬಿಟ್ಟು ಹೋಗುತ್ತೆ ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ. ಈ ಮಂತ್ರ ಪಠಿಸಿದರೆ 48 ಗಂಟೆ ಧನಾತ್ಮಕ, ಆಧ್ಯಾತ್ಮಿಕ ಶಕ್ತಿ ದೇಹದಿಂದ ಕೊರೊನಾ ಓಡಿಹೋಗುತ್ತೆ. ಶುಕ್ರವಾರದಿಂದ ಭಾನುವಾರದವರೆಗೂ ಕೈಲಾಸದಲ್ಲಿ ಸ್ಪೆಷಲ್ ಕ್ಲಾಸ್ ಇದೆ. ಕೊರೊನಾ ಪೀಡಿತರು ಇಲ್ಲಿ ಸೇರಿ ಎಂದು ವಿಡಿಯೋ ಮೂಲಕ ನಿತ್ಯಾನಂದ ಸಂದೇಶ ರವಾನಿಸಿದ್ದಾನೆ.

ಸೂರ್ಯನಿಗೆ ಟಾರ್ಚ್ ಬಿಟ್ಟಿದ್ದ:
ನಾನು ಧ್ವಜಾರೋಹಣ ಮುಗಿಸೋವರೆಗೂ ಕಾಣಿಸಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ಅದಕ್ಕೆ ಅವನು ಬಿಡದಿಯಲ್ಲಿ 40 ನಿಮಿಷ ತಡವಾಗಿ ಹುಟ್ಟಿದ್ದ ಎಂದು ನಿತ್ಯಾನಂದ ಸ್ವಾಮೀಜಿ ಈ ಹಿಂದೆ ಭರ್ಜರಿ ಬಿಲ್ಡಪ್ ಕೊಟ್ಟಿದ್ದ. ಬಿಡದಿ ಆಶ್ರಮದಲ್ಲಿ ವಿದೇಶಿ ಭಕ್ತಾದಿಗಳನ್ನು ಸುತ್ತಲು ಕೂರಿಸಿಕೊಂಡು ನಾನು ಆದೇಶ ನೀಡಿದ್ದಕ್ಕೆ ಸೂರ್ಯ ತಡವಾಗಿ ಉದಯಿಸಿದ. ಬಿಡದಿಯಲ್ಲಿ ಮಾತ್ರ 40 ನಿಮಿಷ ತಡವಾಗಿ ಕಾಣಿಸಿಕೊಂಡ ಎಂದು ನಿತ್ಯಾನಂದ ಹೇಳಿದ್ದ.

ನಿತ್ಯಾನಂದ ಹೇಳಿದ್ದೇನು?
ದಿನ ಆರಂಭವಾಗುವುದು ಸೂರ್ಯೋದಯದ ಮೂಲಕ. ಇವತ್ತು ಎಷ್ಟು ಮಂದಿ ಸೂರ್ಯೋದಯವನ್ನು ನೋಡಿದ್ದೀರೋ ಗೊತ್ತಿಲ್ಲ. ಇವತ್ತು ನಾನು ಧ್ವಜರೋಹಣಕ್ಕೆ ತಡವಾಗಿ ಬಂದೆ. ಪ್ರತಿದಿನ ಮುಂಜಾನೆ 6:40ರಿಂದ 7 ರವರೆಗೆ ಧ್ವಜರೋಹಣ ನಡೆಯುತ್ತದೆ. ಆದರೆ ನಾನು ಇಂದು ಕೊಂಚ ತಡವಾಗಿ ಬಂದೆ. ನಾನು ಹೇಳೋವರೆಗೆ, ಧ್ವಜಾರೋಹಣ ಮುಗಿಸೋವರೆಗೆ ನೀನು ಕಾಣಿಸಿಕೊಳ್ಳಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ನಾನು ಹೇಳಿದ ತಕ್ಷಣ ಸೂರ್ಯ ಅವತ್ತು ಬಿಡದಿಯಲ್ಲಿ ನಲವತ್ತು ನಿಮಿಷ ತಡವಾಗಿ ಕಾಣಿಸಿಕೊಂಡ.

ಬಿಡದಿಯಲ್ಲಿ ಮಾತ್ರ ಈ ಅಚ್ಚರಿ ನಡೆದಿದ್ದು, ಬೇಕಾದರೆ ಗೂಗಲ್ ನಲ್ಲಿ ಇಂದಿನ ಸೂರ್ಯೋದಯದ ಸಮಯ ಎಷ್ಟಿತ್ತು? ಬಿಡದಿಯಲ್ಲಿ ಸೂರ್ಯೋದಯವಾದ ಸಮಯ ನೋಡಿ ಆಗ ಗೊತ್ತಾಗುತ್ತೆ. ಇದೆಲ್ಲ ನನ್ನಿಂದ ಮಾತ್ರ ಸಾಧ್ಯ ಎಂದು ವಿವರಿಸಿದ್ದ. ನಿತ್ಯಾನಂದನ ಈ ಮಾತನ್ನು ಹೇಳುತ್ತಿದ್ದಂತೆ ಅಲ್ಲಿದ್ದ ವಿದೇಶಿ ಮಹಿಳಾ ಭಕ್ತೆಯರು ಚಪ್ಪಾಳೆ ತಟ್ಟಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ.

Comments are closed.