ಕರ್ನಾಟಕ

ಜೆರಾಕ್ಸ್ ಮಾಡಿದ ನಕಲಿ ನೋಟಿನಿಂದ ಕುರಿ ಖರೀದಿ..!

Pinterest LinkedIn Tumblr


ಮಂಡ್ಯ: ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ನಕಲಿ ನೋಟುಗಳ ಚಲಾವಣೆಗೆ ಪ್ರಯತ್ನಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ದಂಧೆಕೋರರು ಜೆರಾಕ್ಸ್ ಮಾಡಿದ ನಕಲಿ ನೋಟುಗಳನ್ನು ವೃದ್ಧ ಕುರಿಗಾಹಿಗೆ ಕೊಟ್ಟು ಕುರಿಯನ್ನು ಕೊಂಡೊಯ್ದಿರುವ ಘಟನೆ ಮೂಲಕ ನಕಲಿ ನೋಟುಗಳ ಚಲಾವಣೆ ಜಾಲ ವಿರುವುದು ದೃಢಪಟ್ಟಿದೆ.

ಜಿಲ್ಲೆಯ ಮದ್ದೂರು ತಾಲೂಕಿನ ಅಂಕನಾಥಪುರದ ವೃದ್ಧ ಮಂಚಯ್ಯ ಎಂಬುವವರ ಬಳಿ ಕುರಿ ಕೊಂಡುಕೊಳ್ಳಲು ಬಂದಿದ್ದ ವಂಚಕರು, ಐದು ಸಾವಿರ ಹಣ ನೀಡಿ ಟಗರೊಂದನ್ನು ಕೊಂಡೊಯ್ದಿದ್ದಾರೆ. ಅವರು ಹೋದ ಬಳಿಕ ಅನುಮಾನಗೊಂಡು ಸ್ಥಳೀಯರೊಂದಿಗೆ ನೋಟುಗಳನ್ನು ಪರಿಶೀಲಿಸಿದಾಗ ಅವುಗಳು ಜೆರಾಕ್ಸ್ ಮಾಡಿದ ನಕಲಿ ನೋಟುಗಳು ಎಂಬುದು ತಿಳಿದುಬಂದಿದೆ. ನೋಟುಗಳ ಸಂಖ್ಯೆಯು ಒಂದೇ ಆಗಿರುವುದರಿಂದ ಅವು ಜೆರಾಕ್ಸ್ ಮಾಡಿದ ನಕಲಿ ನೋಟುಗಳು ಎಂಬುದು ಖಚಿತವಾಗಿದೆ. 500 ಮುಖಬೆಲೆಯ 10 ನೋಟುಗಳನ್ನು ಕಲರ್ ಜೆರಾಕ್ಸ್ ಮಾಡಿ ಮಂಚಯ್ಯನ ಅವರಿಗೆ ವಂಚಕರು ನೀಡಿ ಕಾಲಿಗೆ ಬುದ್ಧಿ ಹೇಳಿದ್ದಾರೆ.

ಘಟನೆ ವಿವರ
ಅಂಕನಾಥಪುರ ಗ್ರಾಮದ ರೈತ ಗುಳ್ಳಪ್ಪ ಅವರ ಪುತ್ರ ಮಂಚಯ್ಯ(65) ಗ್ರಾಮದ ಹೊರ ವಲಯದ ಜಮೀನಿನಲ್ಲಿ ಎಂದಿನಂತೆ ಕುರಿ ಮೇಯಿಸುತ್ತಿದ್ದ ವೇಳೆ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿ ಗಳು ಮಂಚಯ್ಯ ಅವರಿಂದ ಟಗರೊಂದನ್ನು 5 ಸಾವಿರಕ್ಕೆ ವ್ಯಾಪಾರ ಮಾಡಿ ಹಣ ನೀಡಿ ಟಗರಿನೊಂದಿಗೆ ತೆರಳಿದ್ದಾರೆ.

ಈ ವೇಳೆ ರೈತ ಮಂಚಯ್ಯ ಅವರನ್ನು ಯಾಮಾರಿಸಿ 500 ರೂ. ಮುಖಬೆಲೆಯ 10 ಜೆರಾಕ್ಸ್ ನೋಟುಗಳನ್ನ ನೀಡಿ ತೆರಳಿದ್ದಾರೆ. ಜ.21 ರಂದು ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದು ಹೊರಬಿದ್ದ ಬಳಿಕ ಜ. 27 ರ ಸಂಜೆ ಸಂತ್ರಸ್ತ ರೈತ ಮಂಚಯ್ಯ ಅವರು ಕೆಸ್ತೂರು ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಈಗ ಕುರಿಯೂ ಇಲ್ಲ, ಹಣವೂ ಇಲ್ಲದೆ ದಿಕ್ಕು ತೋಚದಂತಾದ ಮಂಚಯ್ಯ ಅವರೀಗ ಕಣ್ಣುಬಾಯಿ ಬಿಡುವಂತಾಗಿದೆ. ವೃದ್ಧ ವ್ಯಕ್ತಿಯನ್ನು ಟಾರ್ಗೆಟ್ ಮಾಡಿರುವ ವಂಚಕರು, ನಿಗದಿತ ಬೆಲೆಗಿಂತ ಹೆಚ್ಚು ಹಣ ನೀಡುತ್ತೇನೆಂದು ಆಮಿಷ ತೋರಿಸಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಇನ್ನೊಂದೆಡೆ, ಮಂಡ್ಯ ಜಿಲ್ಲೆಯ ಹಲಗೂರು ಸಮೀಪದ ದೇವಿರಹಳ್ಳಿ ಗೇಟಿನ ಬಳಿ ಸ್ಕೂಟರ್ ಒಂದಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಂದೆ – ಮಗ ಮೃತಪಟ್ಟಿದ್ದಾರೆ. ಸ್ಕೂಟರ್ ಸವಾರರಾದ ಚೇತನ್ ಕುಮಾರ್ (19) ಹಾಗೂ ಮಹದೇವ(55) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಮೂಲತಃ ಮಡಹಳ್ಳಿ ದೊಡ್ಡಿ ಗ್ರಾಮದ ವಾಸಿ ಮಹಾದೇವು ಎಂಬುವರ ಮಗಳ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ತನ್ನ ಮಗನ ಜೊತೆ ಸ್ಕೂಟರ್ನಲ್ಲಿ ದೇವರಹಳ್ಳಿ ಗ್ರಾಮಕ್ಕೆ ಹೋಗಿ ವಾಪಸ್ ಹಲಗೂರಿಗೆ ಬರುವಾಗ ಬೆಂಗಳೂರಿನ ಕಡೆಯಿಂದ ಬಂದ ಕಾರೊಂದು ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ತಿರುವಾಗಿ ಗಾಯಗೊಂಡ ಅವರನ್ನು ತಕ್ಷಣ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಚೇತನ್ ಕುಮಾರ್ ಮೃತಪಟ್ಟಿದ್ದಾನೆ. ತಂದೆ ಮಹಾದೇವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಹಾದೇವ ಮೃತಪಟ್ಟಿದ್ದಾರೆ.

ಈ ಘಟನೆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.