ಕರ್ನಾಟಕ

ನಿನ್ನ ವಂಶ ನಿರ್ವಂಶವಾಗಲಿ: ಗಂಡನಿಗೆ ಶಾಪ ಹಾಕಿ ಮಕ್ಕಳೊಂದಿಗೆ ಹೆಂಡತಿ ಆತ್ಮಹತ್ಯೆ

Pinterest LinkedIn Tumblr


ಚಿಕ್ಕೋಡಿ (ಬೆಳಗಾವಿ): ನಿನ್ನ ವಂಶ ನಿರ್ವಂಶವಾಗಲಿ ಎಂದು ಪತ್ನಿಯೊಬ್ಬಳು ಪತಿಗೆ ಶಾಪ ಹಾಕಿ ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆ ಹುಕ್ಕೇರಿ ತಾಲೂಕಿನ ನೊಗನಿಹಾಳ ಗ್ರಾಮದಲ್ಲಿ ನಡೆದಿದೆ.

ನೊಗನಿಹಾಳ ಗ್ರಾಮದ ಮಲ್ಲವ್ವ ಬಸವರಾಜ ಮರಬಸ್ಸನವರ (35), ಸಿದ್ಧಪ್ಪ (3) ಹಾಗೂ ಗುರುನಾಥ (10) ಮೃತ ದುರ್ದೈವಿಗಳು. ಗ್ರಾಮದ ಹೊರ ವಲಯದಲ್ಲಿರುವ ಕಾಲುವೆಗೆ ಬಿದ್ದು ತಾಯಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಲ್ಲವ್ವ ಇಂತಹ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಬಸವರಾಜ ಮೊದಲನೇ ಪತ್ನಿಗೆ 6 ಜನ ಮಕ್ಕಳಿದ್ದರು. ಹೀಗಾಗಿ ವಂಶಕ್ಕೆ ವಾರಸುದಾರ ಬೇಕು ಎನ್ನುವ ಉದ್ದೇಶದಿಂದ ಮೊದಲ ಪತ್ನಿಯೇ ಮುಂದೆ ಪತಿ ಬಸವರಾಜ ಹಾಗೂ ಮಲ್ಲವ್ವಗೆ ಮದುವೆ ಮಾಡಿಸಿದ್ದಳು. ಆ ಬಳಿಕ ಬಸವರಾಜ ಹಾಗೂ ಮಲ್ಲವ್ವ ದಂಪತಿಗೆ ಎರಡು ಗಂಡು ಹಾಗೂ ಒಂದು ಹೆಣ್ಣು ಮಗು ಜನಿಸಿದ್ದವು. ಆದರೆ ಮನೆಯಲ್ಲಿ ಆಗಾಗ ಸಣ್ಣಪುಟ್ಟ ವಿಚಾರಕ್ಕೆ ಜಗಳವಾಗುತ್ತಿತ್ತು.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಬಸವರಾಜ ಹಾಗೂ ಸವತಿಗೆ ಬುದ್ಧಿ ಕಲಿಸಲು ಮಲ್ಲವ್ವ ಮುಂದಾಗಿದ್ದರು. ಹೀಗಾಗಿ ಪತಿಯ ವಂಶವೇ ನಿರ್ಣಾಮ ಆಗಬೇಕು ಎನ್ನುವ ಉದ್ದೇಶದಿಂದ ಇಬ್ಬರು ಗಂಡು ಮಕ್ಕಳೊಂದಿಗೆ ಮಲ್ಲವ್ವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ನೊಗನಿಹಾಳ ಗ್ರಾಮದ ಹೊರ ವಲಯದ ಕಾಲುವೆಯಿಂದ ತಾಯಿ ಹಾಗೂ ಮಕ್ಕಳ ಮೃತದೇಹವನ್ನು ಪೊಲೀಸರು ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಹುಕ್ಕೇರಿ ಪಿಎಸ್‍ಐ ಶಿವಾನಂದ ಗುಡಗನಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.