ಕರ್ನಾಟಕ

ಮೋದಿಗೆ ಸುರೇಶ್ ಕುಮಾರ್ ನೀಡಿದ ಫ್ಯಾಸಿಸ್ಟ್ ವಿರೋಧಿ ಪುಸ್ತಕ ! ಜಾಲತಾಣಗಳಲ್ಲಿ ಚರ್ಚೆ

Pinterest LinkedIn Tumblr


ಬೆಂಗಳೂರು: ಜನವರಿ 2 ರಂದು ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ನೀಡಿದ ಪುಸ್ತಕವೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿಯನ್ನು ಸ್ವಾಗತಿಸುವ ಸಂದರ್ಭದಲ್ಲಿ ಸುರೇಶ್ ಕುಮಾರ್ ಅವರು ಚಿಂತಕ ಯುವಲ್ ಹರಾರಿ ಅವರು ಬರೆದಿರುವ “21 Lessons for the 21st Century” (’21 ನೇ ಶತಮಾನದ 21 ಪಾಠಗಳು ‘) ಪುಸ್ತಕವನ್ನು ನೀಡಿದ್ದರು. ಈ ವಿಚಾರವನ್ನುಟ್ವಿಟ್ಟರ್‌ ಹಾಗೂ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿರುವ ಸುರೇಶ್ ಕುಮಾರ್ “ಪುಸ್ತಕವನ್ನು ನೀಡಿ ಸ್ವಾಗತಿಸುವಾಗ ಪ್ರಧಾನಮಂತ್ರಿಗಳು ಪುಸ್ತಕದ ಶೀರ್ಷಿಕೆಯನ್ನು ಕೆಲ ಕ್ಷಣ ವೀಕ್ಷಿಸಿ ಬಹಳ ಹರ್ಷದಿಂದ ಸ್ವೀಕರಿಸಿದರು” ಎಂದು ಬರೆದುಕೊಂಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸುರೇಶ್ ಕುಮಾರ್ ಈ ಪುಸ್ತಕವನ್ನು ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಅವರು ತಮ್ಮ ಫೇಕ್ ಬುಕ್ ಖಾತೆಯಲ್ಲಿ “ ಈ ಪುಸ್ತಕವನ್ನು ಸುರೇಶ್ ಕುಮಾರ್‌ ಅವರು ತಾನು ಓದಿದ ಬಳಿಕ ಮೋದಿಯವರಿಗೆ ಕೊಟ್ಟರೋ, ಇಲ್ಲವೇ ಯಾರಾದರೂ ಹಿತಶತ್ರುಗಳು ಇವರನ್ನು ಬಾವಿಗೆ ತಳ್ಳಿದರೋ ಗೊತ್ತಿಲ್ಲ” ಎಂಬ ಒಕ್ಕಣೆಯೊಂದಿಗೆ ಪುಸ್ತಕದ ಮುನ್ನುಡಿ ಹಾಗೂ ಲೇಖಕರ ಚಿಂತನೆಗಳ ಕುರಿತಾಗಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

“ಯುವಲ್ ಹರಾರಿಯ ವಿಚಾರಗಳನ್ನು ನರೇಂದ್ರಮೋದಿಯವರು ಓದಿ ಒಪ್ಪಿಕೊಂಡರೆ ನಾಳೆಯಿಂದ ನಾವೆಲ್ಲ ಕೇಂದ್ರ ಸರ್ಕಾರದ ವಿರುದ್ದದ ಪ್ರತಿಭಟನೆಗಳನ್ನು ನಿಲ್ಲಿಸಬೇಕು. ಇಂತಹದ್ದೊಂದು ಘೋಷಣೆಯನ್ನು ಮೋದಿಯವರು ಮಾಡಿದರೆ ಉಳಿದವರೇನೇ ಮಾಡಲಿ, ನಾನಂತೂ ಮುಂದಿನ ಚುನಾವಣೆಯಲ್ಲಿ ಮೋದಿಯವರಿಗೆ ಓಟು ಹಾಕುವವ.ಇಂತಹ ಪರಿವರ್ತನೆ ಸಾಧ್ಯವಾಗಬೇಕಾದರೆ ನಾಳೆ ಸೂರ್ಯ ಪಶ್ಚಿಮದಲ್ಲಿ ಹುಟ್ಟಿ ಪೂರ್ವದಲ್ಲಿ ಮುಳುಗಬೇಕು ಎನ್ನುವುದರ ಅರಿವು ನನಗಿದೆ. ಮೋದಿಯವರು ಈ ಪುಸ್ತಕವನ್ನು ಓದುವುದು ಬೇಡ, ಅದಕ್ಕೆ ಹರಾರಿ ಬರೆದಿರುವ ಮುನ್ನುಡಿಯನ್ನು ಓದಿ ಬಿಟ್ಟರೆ ಸಾಕು, ಮರುಕ್ಷಣ ಸುರೇಶ್ ಕುಮಾರ್ ಮೇಲೆ ಒಂದು ಕಣ್ಣಿಡುವುದು ಗ್ಯಾರಂಟಿ. ಮುನ್ನುಡಿಯ ಬಹುಭಾಗ ಮೋದಿಯವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಬರೆದ ಹಾಗಿದೆ” ಎಂದಿದ್ದಾರೆ.

ಯುವಲ್ ಹರಾರಿ ಅಂತರಾಷ್ಟ್ರೀಯ ಮಟ್ಟದ ಬೌದ್ದಿಕ ವಲಯದಲ್ಲಿ ಸಂಚಲನ ಮೂಡಿಸಿರುವ ಇತಿಹಾಸಕಾರ. ಯಹೂದಿಯಾಗಿರುವ ಇವರು ಇಸ್ರೇಲ್‌ನ ಜೆರುಸಲೇಮ್‌ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫ್ಯಾಸಿಸಂ, ಸರ್ವಾಧಿಕಾರದ, ವಿರುದ್ಧ ಹಾಗೂ ಪರಿಸರ ಪರ, ಜೀವಪರ ಚಿಂತನೆಯನ್ನು ಹೊಂದಿದ್ದಾರೆ.

ಇವರ ಕುಟುಂಬದ 16 ಮಂದಿ ಎರಡನೇ ಮಹಾಯುದ್ಧದ ಅವಧಿಯಲ್ಲಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ ಪ್ರಾಯೋಜಿತ ಹತ್ಯಾಕಾಂಡಕ್ಕೆ ಬಲಿಯಾಗಿದ್ದರು. ಯುವಲ್ ಹರಾರಿ ಅವರ, ಸೇಪಿಯನ್ಸ್: ಎ ಬ್ರೀಫ್ ಹಿಸ್ಟರಿ ಆಫ್ ಹ್ಯೂಮನ್ಕೈಂಡ್, ಹೋಮೋ ಡೀಯುಸ್: ಎ ಬ್ರೀಫ್ ಹಿಸ್ಟರಿ ಆಫ್ ಟುಮಾರೊ ಹಾಗೂ “21 Lessons for the 21st Century” (21 ನೇ ಶತಮಾನದ 21 ಪಾಠಗಳು) ಕೃತಿಗಳು ಇದುವರೆಗೂ 5 ಕೋಟಿಯಷ್ಟು ಮಾರಾಟ ಕಂಡು ದಾಖಲೆ ಸೃಷ್ಟಿಸಿವೆ. ಅಲ್ಲದೆ ಜಗತ್ತಿನ ಒಟ್ಟು 40 ಭಾಷೆಗಳಿಗೆ ಭಾಷಾಂತರಗೊಂಡಿವೆ.

ಯುರೋಪಿಯ ಎಲ್ಲಾ ರಾಷ್ಟ್ರದ ಅಧ್ಯಕ್ಷರುಗಳ ಜೊತೆಗೆ ಮಾತುಕತೆ ನಡೆಸಿರುವ ಲೇಖಕ ಎಂಬ ಹೆಗ್ಗಳಿಕೆ ಹೊಂದಿರುವ 46 ವರ್ಷದ ಖ್ಯಾತ ಚಿಂತಕ ಯುವಲ್ ಹರಾರಿಯವರು ಈ ಹಿಂದೆ ಭಾರತಕ್ಕೆ ಆಗಮಿಸಿದ್ದು ಬೌದ್ಧ ಧ್ಯಾನಮಾರ್ಗದ ಬಗ್ಗೆ ಆಕರ್ಷಿತರಾಗಿ 60 ದಿನಗಳ ಕಾಲ ವಿಪಸನ ಧಾನ್ಯದ ಮೊರೆ ಹೋಗಿದ್ದರು. ಈ ಧ್ಯಾನ ಮಾರ್ಗವನ್ನು ಅಧ್ಯಯನ ಮಾಡಿದ ಬಳಿಕ ಏಕಾಗ್ರತೆ ಕಂಡುಕೊಳ್ಳಲು ಅನುಕೂಲವಾಯಿತು ಎಂದು ಹೇಳಿಕೊಂಡಿದ್ದರಂತೆ.

Comments are closed.