ತುಮಕೂರು: ಹೊಸ ವರ್ಷದಿಂದ ದೇಶದ ಎಲ್ಲಾ ರಾಜ್ಯಗಳಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ತುಮಕೂರಿನಲ್ಲಿ ಗುರುವಾರ ಕಿಸಾನ್ ಸಮ್ಮಾನ್ ಯೋಜನೆಯ ಮೂರನೇ ಕಂತಿಗೆ ಚಾಲನೆ ಮತ್ತು ಕಿಸಾನ್ ಕರ್ಮಣ್ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಈ ಹಿಂದೆ ಸರ್ಕಾರದ ಅನುದಾನದ ಪೂರ್ಣ ಹಣ ಫಲಾನುಭವಿಗಳಿಗೆ ತಲುಪುತ್ತಿರಲಿಲ್ಲ. ಈಗ ನೇರವಾಗಿ ಅನುದಾನ ರೈತರ ಖಾತೆಯನ್ನು ಸೇರುತ್ತಿದೆ. ಕೃಷಿ ಸಮಸ್ಯೆಯನ್ನು ಭಾಗಭಾಗವಾಗಿ ನೊಡದೆ ಸಮಗ್ರವಾಗಿ ನೋಡಿ ಅದನ್ನು ಸರಿಪಡಿಸುವ ಗುರಿಯನ್ನು ಸರ್ಕಾರ ಗುರಿ ಹೊಂದಿದೆ. ಇಲ್ಲಿಯವರೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರ ಖಾತೆಗೆ ಒಟ್ಟು 8 ಕೋಟಿ ರೂ. ಜಮಾ ಆಗಿದೆ. ಇದನ್ನು ಯಾವುದೇ ಪಕ್ಷದ ಯೋಜನೆಯೆಂದು ಪರಿಗಣಿಸದೆ ಎಲ್ಲಾ ರಾಜ್ಯಗಳು ಕೃಷಿ ಸಮ್ಮಾನ್ ಯೋಜನೆಯನ್ನು ಅಳವಡಿಸಿಕೊಳ್ಳಬೇಕು ಎಂದು ಮೋದಿ ಮನವಿ ಮಾಡಿದರು.
ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ನೀರಾವರಿ, ಮಣ್ಣು ಪರೀಕ್ಷೆ, ಬೆಂಬಲ ಬೆಲೆ ಹೆಚ್ಚಳದಂತಹ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ. ದಕ್ಷಿಣ ಭಾರತ ದೇಶದ ಆಹಾರ ಪದಾರ್ಥಗಳ ರಫ್ತಿನಲ್ಲಿ ಮೊದಲಿನಿಂದಲೂ ಪ್ರಮುಖ ಪಾತ್ರ ವಹಿಸಿದೆ. ಇಲ್ಲಿನ ಹವಾಮಾನ, ಮಣ್ಣು ಮತ್ತು ಸಮುದ್ರದ ನಂಟು, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣವನ್ನು ಪ್ರಮುಖ ಆಹಾರ ರಫ್ತು ರಾಜ್ಯಗಳನ್ನಾಗಿಸಿವೆ.
ಇದರ ಆಧಾರದ ಮೇಲೆಯೇ ನವ ಭಾರತ ನಿರ್ಮಾಣ ಮಾಡಲಾಗುವುದು. ಸ್ಥಳೀಯ ಪ್ರದೇಶಗಳ ಆಹಾರಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು. ಬೆಳಗಾವಿಯ ದಾಳಿಂಬೆ, ಚಿಕ್ಕಬಳ್ಳಾಪುರ, ಬೆಂಗಳೂರಿನ ಗುಲಾಬಿ ಮತ್ತು ಚಿಕ್ಕಮಗಳೂರಿನ ಕಾಫಿ ಬೆಳೆಯ ಪ್ರತ್ಯೇಕ ಕ್ಲಸ್ಟರ್ ನಿರ್ಮಾಣ ಮಾಡುವ ಉದ್ದೇಶವಿದೆ. ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕಾಫಿ ಬೆಳೆ ದಕ್ಷಿಣ ಭಾರತದ ಹೆಮ್ಮೆ. ಕಾಫಿ ಬೆಳೆಯ ಪ್ಯಾಕಿಂಗ್ ನಿಂದ ಹಿಡಿದು ಮಾರುಕಟ್ಟೆಯವರೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದರು.
ದಕ್ಷಿಣ ಭಾರತದಲ್ಲಿ ತೆಂಗು ಬೆಳೆಗಾರರ ಸಂಖ್ಯೆ ಹೆಚ್ಚಿದ್ದು, ತೆಂಗಿಗೆ ಭಾರಿ ಬೇಡಿಕೆಯಿದೆ. ಕರ್ನಾಟಕದಲ್ಲಿ ಕೂಡ 550 ತೆಂಗು ಬೆಳೆಗಾರರ ಸಂಘಗಳಿವೆ. ಅದರ ಪ್ರೋತ್ಸಾಹಕ್ಕೆ ಯೋಜನೆಗಳನ್ನು ರೂಪಿಸಲಾಗುವುದು ಎಂದರು. ಸರ್ಕಾರದ ವಿಶೇಷ ಪ್ರಯತ್ನದಿದ ಸಾಂಬಾರು ಪದಾರ್ಥಗಳ ಉತ್ಪಾದನೆ, ರಫ್ತು ಪ್ರಮಾಣದಲ್ಲಿ ಒಟ್ಟು 25 ಲಕ್ಷ ಟನ್ ಹೆಚ್ಚಳವಾಗಿದೆ. ಜೊತೆಗೆ ಹಳದಿ ಬೆಳೆಗೂ ಭಾರಿ ಬೇಡಿಕೆಯಿದ್ದು, ತಲೆಂಗಾಣದ ಹಳದಿಯ ಹಬ್ ಆಗಿ ಪರಿವರ್ತನೆಯಾಗಿದೆ. ಕರ್ನಾಟಕ ಮತ್ತಿತರರ ರಾಜ್ಯಗಳಲ್ಲಿ ಕೂಡ ಇದನ್ನು ಬೆಳೆಯುವಂತೆ ಪ್ರೋತ್ಸಾಹಿಸುವ ಸಲುವಾಗಿ ಸಂಶೋಧನೆಗೆ ಒತ್ತು ನೀಡಲಾಗುತ್ತಿದೆ ಎಂದರು.
ಪ್ರಧಾನ ಮಂತ್ರಿ ಕೌಶಲ ಅಭಿವೃದ್ಧಿ ಯೋಜನೆಯಡಿ ರಬ್ಬರ್ ಬೆಳೆಗಾರರಿಗೆ ಹೆಚ್ಚಿನ ತರಬೇತಿ ನೀಡಲಾಗುತ್ತಿದೆ. ರಬ್ಬರ್ ಬೆಳೆ ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಕೃಷಿಯನ್ನು ಹೊರತುಪಡಿಸಿ ಬೇಳೆಕಾಳುಗಳು, ತೈಲಬೀಜಗಳು ಮತ್ತು ಕಪ್ಪು ಕಾಳುಗಳ ಉತ್ಪಾದನೆಯಲ್ಲೂ ದಕ್ಷಿಣ ಭಾರತ ಮುಂದಿದೆ. ಸುಮಾರು 30ಕ್ಕೂ ಹೆಚ್ಚು ಹಬ್ ಗಳು, ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡಿನಲ್ಲಿವೆ. ದೊಡ್ಡ ಬೀಜಗಳ ಹಬ್ ಗಳಲ್ಲಿ ಹತ್ತು ದಕ್ಷಿಣ ಭಾರತದಲ್ಲಿವೆ.
ಮೀನುಗಾರರಿಗೆ ಹೊಸ ಯೋಜನೆಗಳು:
ಮೀನುಗಾರಿಕೆ ಕೇಂದ್ರಗಳನ್ನು ಸಬಲಗೊಳಿಸಲು ಸರ್ಕಾರ ಮೂರು ಹಂತಗಳಲ್ಲಿಕೆಲಸ ಮಾಡುತ್ಗಿದೆ. ಗ್ರಾಮಗಳಲ್ಲಿ ಮೀನುಗಾರಿಗೆ ಪ್ರೋತ್ಸಾಹ, ಮೀನುಗಾರಿಕೆ ಕುಟುಂಬಗಳಿಗೆ ಆರ್ಥಿಕ ನೆರವು, ನೀಲಿ ಕ್ರಾಂತಿಯ ಮೂಲಕ ಆಧುನಿಕ ಉಪಕರಣಗಳು, ಆಧುನಿಕ ಮಾರುಕಟ್ಟೆಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಮೂಲಸೌಕರ್ಯೊದಗಿಸಲು 7 ಸಾವಿರ ಕೋಟಿ ರೂ. ವಿನಿಯೋಗಿಸಲಾಗುತ್ತಿದೆ ಎಂದರು. ಜೊತೆಗೆ, ಮೀನುಗಾರರನ್ನು ಕೂಡ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಸೇರಿಸಲಾಗಿದೆ ಎಂದರು.
ಸಾಗರಾಳದ ಮೀನುಗಾರಿಕೆಗೆ ನೆರವಾಗಲು ಇಸ್ರೊ ನೆರವಿನಿಂದ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ದೋಣಿಗಳ ಮೇಲ್ದರ್ಜೆಗೆ 2 ಸಾವಿರ ಕೋಟಿ ರೂ. ನೆರವು ನೀಡಲಾಗುತ್ತಿದೆ.
ಜಲ ಸಂರಕ್ಷಣೆ ಯೋಜನೆ:
ರಾಜ್ಯದಲ್ಲಿ ಜಲ ಸಂಕಷ್ಟ ಎದುರಾಗಿದೆ. ಅದಕ್ಕಾಗಿ ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಅಟಲ್ ಭೂ ಜಲ ಯೋಜನೆಯನ್ನು ಪರಿಚಯಿಸಲಾಗಿದೆ. ಇದು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಗುರಿ ಹೊಂದಿದೆ ಎಂದರು. ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಕೃಷಿಗೆ ಸಂಬಂಧಿಸಿದ ಯೋಜನೆಗಳನ್ನು ಸರ್ಕಾರ ಆದ್ಯತೆ ಮೇಲೆ ಕೈಗೊಂಡಿದೆ ಎಂದರು.
ಬಹಳ ವರ್ಷಗಳಿಂದ ಬೆಂಬಲ ಬೆಲೆ ಬೆಲೆಗಿಂತ ಒಂದೂವರೆ ಪಟ್ಟು ಇರಬೇಕು ಎಂಬ ಬೇಡಿಕೆಯನ್ನು ಜಾರಿಗೊಳಿಸಿದ್ದೇವೆ. ನಾವು ಕೈಗೊಂಡಿರುವ ಎಲ್ಲಾ ಸಂಕಲ್ಪಗಳನ್ನು ಈಡೇರಿಸುವ ವಿಶ್ವಾಸವಿದೆ ಎಂದರು. ಈ ಸಂದರ್ಭದಲ್ಲಿ ಮೋದಿ ರಾಜ್ಯದ ಮೂವರು ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಿದರು. ವಿವಿಧ ರಾಜ್ಯಗಳ ರೈತರಿಗೆ ಕೃಷಿಯ ಹಲವು ವಿಭಾಗಗಳ ಕೃಷಿ ಕರ್ಮಣ್ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದಗೌಡ, ಪ್ರಲ್ಹಾದ್ ಜೋಷಿ, ಸುರೇಶ್ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.
Comments are closed.