ಕರ್ನಾಟಕ

ರಾಜ್ಯದೆಲ್ಲೆಡೆ ಕಂಕಣ ಸೂರ್ಯಗ್ರಹಣ ಗೋಚರ

Pinterest LinkedIn Tumblr

ಬೆಂಗಳೂರು: ವರ್ಷದ ಕೊನೆಯಲ್ಲಿ, ಅದೂ 9 ವರ್ಷಗಳ ಬಳಿಕ, ಸಂಭವಿಸುತ್ತಿರುವ ಅಪರೂಪದ, ಬಾನಂಗಣದ ಚಮತ್ಕಾರದ ನೆರಳು, ಬೆಳಕಿನ ಕಂಕಣ ಸೂರ್ಯಗ್ರಹಣವನ್ನು ನಾಡಿನ ಜನರು ಕಣ್ತುಂಬಿಕೊಂಡರು.

ಬೆಳಗ್ಗೆ 8.04ರಿಂದ ಸೂರ್ಯಗ್ರಹಣ ಆರಂಭವಾಗಿದೆ. ರಾಜ್ಯದೆಲ್ಲೆಡೆ ಕಂಕಣ ಸೂರ್ಯಗ್ರಹಣ ಗೋಚರವಾಗಿದ್ದರೂ ಕೆಲವು ಕಡೆ ಮೋಡ ಮುಸುಕಿದ ವಾತಾವರಣದ ಕಾರಣ ಸೂರ್ಯಗ್ರಹಣ ಅಸ್ಪಷ್ಟವಾಗಿ ಗೋಚರವಾಗಿದೆ.

ಬೆಂಗಳೂರಿನಲ್ಲಿ ಕಂಕಣ ಸೂರ್ಯ ಗ್ರಹಣ ಗೋಚರವಾಗಿದೆ. ಲಾಲ್ ಬಾಗಿನಲ್ಲಿ ವಾದ್ಯ ಬಾರಿಸುವ ಮೂಲಕ ಸೂರ್ಯಗ್ರಹಣ ವೀಕ್ಷಣೆಗೆ ಚಾಲನೆ ನೀಡಲಾಯಿತು. ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಹಾಗೂ ನಡಿಗೆದಾರರ ಒಕ್ಕೂಟದಿಂದ ಸೂರ್ಯಗ್ರಹಣ ವೀಕ್ಷಣೆಯನ್ನು ಆಯೋಜನೆ ಮಾಡಲಾಗಿದೆ. ಸೂರ್ಯಗ್ರಹಣದ ಕೌತುಕ ಕಣ್ತುಂಬಿಕೊಳ್ಳುವ ಕಾತರ ಹೆಚ್ಚಾಗಿತ್ತು.

ಇನ್ನು, ನೆಹರೂ ತಾರಾಲಯದಲ್ಲಿ ಕಂಕಣ ಗ್ರಹಣ ವೀಕ್ಷಣೆ ಮಾಡಲು ಜನರು ಆಗಮಿಸಿದ್ದರು. ಸೌರ ಕನ್ನಡಿ ಮೂಲಕ ಗ್ರಹಣ ವೀಕ್ಷಣೆ ಮಾಡಿದರು. ಆದರೆ ಮೋಡ ಕವಿದ ವಾತಾವರಣ ಹಿನ್ನೆಲೆ ಕಂಕಣ ಸೂರ್ಯ ಗ್ರಹಣ ಅಷ್ಟಾಗಿ ಗೋಚರವಾಗಲಿಲ್ಲ. ಇನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಗ್ರಹಣ ಗೋಚರವಾಗಿದೆ. ಇತ್ತ ಉಡುಪಿಯಲ್ಲಿ ಶೇ. 93.2ರಷ್ಟು ಸೂರ್ಯ ಗ್ರಹಣ ಗೋಚರವಾಗಿದ್ದು, ರಾಜ್ಯದ ಅತೀ ಹೆಚ್ವು ಗ್ರಹಣಗೋಚರ ಸ್ಥಳಗಳಲ್ಲಿ ಉಡುಪಿಯೂ ಒಂದಾಗಿದೆ. ಜಿಲ್ಲೆಯಲ್ಲಿ 9.24 ನಿಮಿಷಕ್ಕೆ ಸಂಪೂರ್ಣ ಗ್ರಹಣ ಗೋಚರವಾಗಿದೆ.

ಬೆಳಗ್ಗೆ 8 ಗಂಟೆ 4 ನಿಮಿಷಕ್ಕೆ ಗ್ರಹಣ ಆರಂಭವಾಗಿದೆ. ಬೆಳಗ್ಗೆ 9 ಗಂಟೆ 25 ನಿಮಿಷಕ್ಕೆ ಗ್ರಹಣದ ಮಧ್ಯ ಕಾಲವಿದ್ದು, ಸಂಪೂರ್ಣ ಸೂರ್ಯ ಗ್ರಹಣ ಗೋಚರಿಸಿತು. ಬೆಳಗ್ಗೆ 11 ಗಂಟೆ 3 ನಿಮಿಷಕ್ಕೆ ಗ್ರಹಣ ಅಂತ್ಯವಾಯಿತು.

Comments are closed.