ಬೆಂಗಳೂರು: ಮಂಗಳ ಮುಖಿಯರು ಎಂದರೆ ಸಾಕು ಟ್ರಾಫಿಕ್ ಸಿಗ್ನಲ್, ಬಸ್ ನಿಲ್ದಾಣ, ಟ್ರೈನಿನಲ್ಲಿ ಹಣಕ್ಕಾಗಿ ಕಾಡಿಸೋರು ಎಂದು ಹೆಚ್ಚು ಜನರು ಮೂಗು ಮುರಿಯುತ್ತಾರೆ. ಅದೆಷ್ಟೋ ಜನ ತೃತೀಯ ಲಿಂಗಿಗಳಾಗಿ ಹುಟ್ಟಿದ್ದೇ ಶಾಪ ಎಂದುಕೊಳ್ಳುತ್ತಾರೆ. ಇಂಥವರ ನಡುವೆ ಮಂಗಳಮುಖಿಯೊಬ್ಬರು ತಾಯಿಯಾಗಿದ್ದಾರೆ.
ಮುದ್ದು ಪುಟಾಣಿ ಮಂಗಳಮುಖಿಯಾದ ಡಾ. ಅಕ್ಕೈ ಪದ್ಮಶಾಲಿ ಹಾಗೂ ವಾಸು ದಂಪತಿ ಬಾಳಲ್ಲಿ ಹೊಸ ಬೆಳಕು ತಂದಿದೆ. ಈ ಅಕ್ಕೈ ತೃತೀಯ ಲಿಂಗಿಯಾಗಿದ್ದು, ಕಾನೂನಿನ ಪ್ರಕಾರ ಮಗುವೊಂದನ್ನು ದತ್ತು ಪಡೆದಿದ್ದಾರೆ. ಈ ಮೂಲಕ ತಾಯ್ತನದ ಸಿಹಿ ಅಪ್ಪುಗೆಯನ್ನು ಅನುಭವಿಸುತ್ತಿದ್ದಾರೆ.
ಮೊದಲು ಗಂಡಾಗಿ ಹುಟ್ಟಿ, ನಂತರ ಅಕ್ಕೈ ಅವಳಾಗಿ ಬದಲಾದರು. ತದನಂತ್ರ ವಾಸು ಎಂಬವರನ್ನು ಮದುವೆಯಾದರು. ಆದರೆ ಈ ದಂಪತಿ ಮಗುವನ್ನು ಹೊಂದಬೇಕು, ತಮ್ಮ ವಂಶೋದ್ಧಾರಕನನ್ನು ಹೊಂದಬೇಕೆಂಬ ಮಹಾದಾಸೆಯಿತ್ತು. ಹೀಗಾಗಿ ಅಕ್ಕೈ ಅನಾಥಾಶ್ರಮಗಳಲ್ಲಿ ಮಗು ದತ್ತು ತೆಗೆದುಕೊಳ್ಳಲು ಹೋದಾಗ, ಕೊಂಕು ಮಾತುಗಳನ್ನು ಎದುರಿಸಿದ್ದರು.
ಕೊಂಕು ಮಾತುಗಳಿಗೆ ಹಾಗೂ ಯಾವುದಕ್ಕೂ ಎದೆಗುಂದದೆ ಕುಟುಂಬದ ಪರಿಚಿತರೊಬ್ಬರಿಂದ ಮಗು ದತ್ತು ಪಡೆದು, ಸಮಾಜಮುಖಿ ದಾರಿಯತ್ತ ಹೆಜ್ಜೆ ಹಾಕಿದ್ದಾರೆ. ಸಮಾಜಕ್ಕೆ ಈ ಮಗುವನ್ನು ಸತ್ಪ್ರಜೆಯಾಗಿ ರೂಪಿಸುತ್ತೇವೆ ಎಂದು ಹೇಳಿದ್ದಾರೆ.
Comments are closed.