ಕರ್ನಾಟಕ

ಜೆಡಿಎಸ್‌ಗೆ ಗುಡ್‌ಬೈ ಹೇಳಲು 12 ಶಾಸಕರು ಸಿದ್ಧತೆ?

Pinterest LinkedIn Tumblr


ಬೆಂಗಳೂರು: ಜೆಡಿಎಸ್‌ನಲ್ಲಿ ಮತ್ತೆ ಅಸಮಾಧಾನ ಭುಗಿಲೇಳುವ ಲಕ್ಷಣ ನಿಚ್ಚಳವಾಗಿದೆ. ಉಪಚುನಾವಣೆ ಫಲಿತಾಂಶದ ಬಳಿಕ ಜೆಡಿಎಸ್‌ನ 10 ಶಾಸಕರು ಹಾಗೂ ಇಬ್ಬರು ವಿಧಾನ ಪರಿಷತ್‌ ಸದಸ್ಯರು ಪಕ್ಷ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಸಮ್ಮಿಶ್ರ ಸರಕಾರ ಪತನವಾದ ಮೇಲೂ ಮಾಜಿ ಸಿಎಂ ಕುಮಾರಸ್ವಾಮಿ ಧೋರಣೆಯಲ್ಲಿ ಬದಲಾವಣೆಯಾಗಿಲ್ಲ. ಒಂದಿಬ್ಬರನ್ನು ಹೊರತುಪಡಿಸಿದರೆ ಉಳಿದವರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಪಕ್ಷ ಸಂಘಟನೆ ವಿಚಾರಕ್ಕೆ ಆದ್ಯತೆ ನೀಡುತ್ತಿಲ್ಲಎಂಬ ಆರೋಪ ವ್ಯಕ್ತವಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಪಕ್ಷ ಹಾಗೂ ರಾಜಕಾರಣದಲ್ಲಿ ತಮ್ಮ ಅಸ್ತಿತ್ವವೇ ಇರುವುದಿಲ್ಲಎಂಬ ಆತಂಕ ಈ ಮುಖಂಡರನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಇವರೆಲ್ಲ ಪಕ್ಷಕ್ಕೆ ಗುಡ್‌ಬೈ ಹೇಳಲು ನಿರ್ಧರಿಸಿದ್ದಾರೆ.

ವಿಧಾನಸಭೆ ಅಧಿವೇಶನ ಸಂದರ್ಭದಲ್ಲೇ ಈ ಸಂಬಂಧ ಪ್ರಾಥಮಿಕ ಸಭೆಯೂ ಮುಗಿದಿದೆ. ಆದರೆ ಜೆಡಿಎಸ್‌ ಬಿಟ್ಟಮೇಲೆ ಯಾವ ಪಕ್ಷದತ್ತ ಹೋಗಬೇಕು ಎನ್ನು ವಿಚಾರ ಇನ್ನೂ ಬಗೆಹರಿದಿಲ್ಲ. ಬಂಡಾಯ ಎದ್ದಿರುವವರಲ್ಲಿ ಹೆಚ್ಚಿನವರು ಹಳೆ ಮೈಸೂರು ಭಾಗದವರೇ ಆಗಿರುವುದರಿಂದ ಕಾಂಗ್ರೆಸ್‌ ಕಡೆಗೆ ಹೋಗುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂಬ ಮಾಹಿತಿ ಇದೆ.

ಈ ಪಕ್ಷಾಂತರ ಪ್ರಕ್ರಿಯೆಯನ್ನು ಸುಲಭ ನಿಭಾಯಿಸುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಶಾಸಕರೊಬ್ಬರು ಭರವಸೆ ನೀಡಿದ್ದಾರೆ. ಈ ಮಧ್ಯೆ ಇಬ್ಬರು ಅನರ್ಹ ಶಾಸಕರು ಜೆಡಿಎಸ್‌ ಅತೃಪ್ತರನ್ನು ಸಂಪರ್ಕಿಸಿ ಚರ್ಚೆ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿಉಪಚುನಾವಣೆ ಫಲಿತಾಂಶದವರೆಗೆ ಕಾದು ನೋಡಲು ಜೆಡಿಎಸ್‌ ಅತೃಪ್ತ ಬಣ ನಿರ್ಧರಿಸಿದ್ದು, ಬಳಿಕ ಪಕ್ಷಾಂತರ ನಿಶ್ಚಿತ ಎಂದು ತಿಳಿದು ಬಂದಿದೆ.

Comments are closed.